Kannada NewsLatest

ಜಗನ್ಮಾತೆ ಜಗದಂಬಾ ಸರಸ್ವತಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೂನ್ ತಿಂಗಳು ಪ್ರಾರಂಭವಾದಾಗಿನಿಂದ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ ಆಖಂಡ ಯೋಗ, ಧ್ಯಾನ, ಧಾರಣೆಗಳ ಕಾರ್ಯಕ್ರಮಗಳು ನಡೆಯುತ್ತದೆ. ಸುಮಾರು 10 ಲಕ್ಷ ಈಶ್ವರೀಯ ವಿದ್ಯಾರ್ಥಿಗಳು ತಮ್ಮ ಮಾನಸಿಕ ಹಾಗೂ ಬೌಧ್ದಿಕ ಬೇಳವಣಿಗೆಗಾಗಿ ಹೆಚ್ಚಿನ ಸಾಧನೆಯ ಪಥದಲ್ಲಿ ಸಾಗುತ್ತಾರೆ. ಸದ್ಗುಣಗಳ ಧಾರಣೆಯಿಂದ ಅಂತ ರಂಗ ಶುದ್ಧಿ ಮಾಡಿಕೊಳ್ಳುತ್ತಾರೆ. ಅದಕ್ಕೆ ಕಾರಣೀ ಭೂತರಾದ ಫ್ರೇರಣಾದಾಯಕ ಶಕ್ತಿಯೇ ಮಾತೇಶ್ವರಿ ಜಗದಂಬಾ ಸರಸ್ವತಿ. ಅವರ ಪುಣ್ಯತಿಥಿಯು ವಿಶ್ವದಾದ್ಯಂತ ಜೂನ್ 24 ರಂದು 8500 ಸೇವಾಕೇಂದ್ರಗಳಲ್ಲಿ ಶಕ್ತೀದಿನವೆಂದು ಆಚರಿಸಲಾಗುತ್ತದೆ.

ಜಗತ್ತಿನಾದ್ಯಂತ ಅನೇಕ ಮಹಾಮಾತೆಯರು, ವೀರಮಾತೆಯರು, ತಪಸ್ವಿನಿಯರು, ಶಿವ ಶರಣೆಯರು ಆಗಿಹೋಗಿದ್ದಾರೆ. ಆದರೆ ಈಶ್ವರೀಯ ವಿಶ್ವ ವಿದ್ಯಾಲಯದ ಇತಿಹಾಸದಲ್ಲಿ ತನ್ನದೇ ಆದ ವಿಶೇಷ ಸ್ಥಾನಮಾನವು `ಜಗದಂಬಾ ಸರಸ್ವತಿ’ ಅವರಿಗೆ ಸಲ್ಲುತ್ತದೆ.

ವೇದಗಳಲ್ಲಿ ಮಾತೆಗೆ ನಿರ್ಮಾತೆ ಎಂದು, ಕುರಾನನಲ್ಲಿ ತಾಯಿಯ ಹೆಜ್ಜೆಯಲ್ಲಿ ಸ್ವರ್ಗವಿದೆ ಎಂದು ಹೇಳಲಾಗಿದೆ. ಮಾತಾ-ಪಿತರನ್ನು ಗೌರವದಿಂದ ಕಾಣಬೇಕೆಂದು ಬೈಬಲ್ನಲ್ಲಿ ಇದೆ. ಗ್ರ್ರಂಥ ಸಾಹೇಬದಲ್ಲಿ ಮಾತೆಗೆ ಮಾನ್ಯತೆ ನೀಡಲಾಗಿದೆ. ಭೂಮಿಗಿಂತಲೂ ಮಾತೆಯೇ ಮಹಾನ್, ಎಂದು ವೇದವ್ಯಾಸರು ಹೇಳಿದ್ದಾರೆ. ಮಾತೆಯೇ ಮೊದಲ ಗುರು ಎಂಬ ಮಹಿಮೆ ಇದೆ. ಪುತ್ರನು ಕುಪುತ್ರನಾಗುವನು ಆದರೇ ಮಾತೆ ಕುಮಾತೆ ಆಗುವದಿಲ್ಲ ಎಂದು ಗಾದೆಮಾತು ಇದೆ.

ಜಗದಂಬಾ ಸರಸ್ವತಿ ಅವರ ಜನ್ಮವು 1919 ರಲ್ಲಿ, ಅಮೃತಸರದಲ್ಲಿ ಆಯಿತು. ಅವರ ಲೌಕಿಕ ಹೆಸರು `ರಾಧಾ’. ಅವರ ತಂದೆಯ ಹೆಸರು `ಪೊಕರದಾಸ’ ಮತ್ತು ತಾಯಿಯ ಹೆಸರು `ರೋಚಾ’. ಅವರ ತಂದೆ ಬೆಳ್ಳಿ ಬಂಗಾರದ ವ್ಯಾಪಾರದ ಜೊತೆಗೆ ತುಪ್ಪದ ಠೊಕ ವ್ಯಾಪಾರಿ ಆಗಿದ್ದರು. ಅವರ ವ್ಯಾಪಾರವು ಮುಂಬಯಿ, ಚೆನೈ ಮತ್ತು ಶ್ರೀಲಂಕಾದಲ್ಲಿ ನಡೆಯತ್ತಿತು. ಆಕಸ್ಮಿಕವಾಗಿ ಹೃದಯಘಾತದಿಂದ ಅವರ ನಿಧನವಾಯಿತು. ತದನಂತರ ರಾಧೆ ತನ್ನ ಸಹೋದರಿ ಗೋಪಿ ಮತ್ತು ತಾಯಿಯ ಜೊತೆಗೆ ಸಿಂದ್ ಹೈದರಾಬಾದನಲ್ಲಿ ಇರುವ ತಮ್ಮ ಆಜ್ಜಿಯ ಮನೆಗೆ ಬಂದಳು. ಅಲ್ಲಿಯೆ ಅವರು ಕುಂದನಮಲ್ ಮ್ಯಾಡೆಲ್ ಸ್ಕೂಲ್ನಲ್ಲಿ ಮೆಟ್ರಿಕ ತನಕ ಓದಿದರು. ಲೌಕಿಕ ವಿದ್ಯೆಯ ಜೊತೆಗೆ ಹಾಡುಗಾರಿಕೆ ಮತ್ತು ನೃತ್ಯದಲ್ಲಿಯೂ ಅವರು ಪ್ರಥಮ ಸ್ಥಾನ ಪಡೆಯತ್ತಿದ್ದರು. ಅವರ ವ್ಯಕ್ತಿತ್ವವನ್ನು ನೋಡಿದಾಗ ದಿವ್ಯಲೋಕದಿಂದ ಬಂದಿರುವ ದೇವಿಯಂತೆ ಭಾಸವಾಗುತ್ತಿತು. ಅವರು ಪ್ರತಿಭಾವಂತ ಹಾಗೂ ಚಮತ್ಕಾರಿ ಬುದ್ಧಿಯುಳ್ಳವರಾಗಿದ್ದರು. ವೀಣಾವಾದನ ಹಾಗೂ ಗಾಯನ ಕಲೆಯಲ್ಲಿ ನಿಪುಣರಾಗಿದ್ದರು.

1937 ರಲ್ಲಿ ದಾದಾ ಲೇಖರಾಜ ಅವರ ಮೂಲಕ ನಿರಾಕಾರ ಶಿವ ಪರಮಾತ್ಮನು ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಾಪನೆ ಮಾಡಿದರು. ಆಗ ಅವರ ಮನೆಯಲ್ಲಿ ನಡೆಯುವ ಸತ್ಸಂಗಕ್ಕೆ ತಾಯಿಯ ಜೊತೆ `ರಾಧಾ’ ಅವರು ಹೋಗುತ್ತಿದ್ದರು. ಸತ್ಯ ಜ್ಞಾನವನ್ನು ಕೇಳಿದ ನಂತರ ಆಜೀವನ ಬ್ರಹ್ಮಚರ್ಯದ ಪಾಲನೆ ಮತ್ತು ಈಶ್ವರೀಯ ಸೇವೆ ಮಾಡುವ ನಿರ್ಣಯಕ್ಕೆ ಬಂದರು. ಅವರು ತಮ್ಮ ಸರ್ವಸ್ವವನ್ನು ಪ್ರಭುವಿಗೆ ಅರ್ಪಣೆ ಮಾಡಿದರು. 1937 ರ ಅಕ್ಟೋಬರ ತಿಂಗಳಲ್ಲಿ `ರಾಧಾ’ ಅವರ ಜೊತೆಗೂಡಿ ಅನನ್ಯ ಪಾರಂಗತ ಕನ್ಯೆಯರು, ಮಾತೆಯರು, ಈಶ್ವರೀಯ ಕಾರ್ಯದಲ್ಲಿ ತನ್ನ ತನು-ಮನ-ಧನವನ್ನು ಸರ್ಮಪಣೆ ಮಾಡಿ, ಕಾರ್ಯಕಾರಿಣಿ ಸಮಿತಿಯನ್ನು ರಚಿಸಿದರು. ಕನ್ಯೆಯಾಗಿರುವ ರಾಧಾ ಅವರು ಸುಮಾರು 350ಕ್ಕು ಹೆಚ್ಚು ಯಜ್ಞವತ್ಸರನ್ನು ಸಾವಿರಾರು ಬ್ರಹ್ಮಾವತ್ಸರನ್ನು ಮಮತೆಯ ತಾಯಿಯಾಗಿ, ಪಾಲನೆ ನೀಡಿ, ಜ್ಞಾನ-ಯೋಗದಿಂದ, ದೈವಿ ಗುಣಗಳಿಂದ ಶೃಂಗರಿಸಿ, ಯೋಗಿಗಳಾಗಿ ಮಾಡಿದರು.

`ರಾಧಾ’ ಅವರಿಗೆ ಮಧುರ ಹಾಗೂ ಪ್ರಭಾವಶಾಲಿ ವಾಣಿಯ ವರದಾನವು ಜನ್ಮದಿಂದಲೇ ಪ್ರಾಪ್ತವಾಗಿತ್ತು. ಅವರ ಮುಖಕಮಲದಿಂದ ಬಂದಿರುವ ವರದಾನಿ ಮಹಾವಾಕ್ಯಗಳಿಂದ ಅನೇಕರಲ್ಲಿ ಪರಿವರ್ತನೆ ಕಂಡುಬರುತಿತ್ತು. ಅವರು ನಿಜವಾಗಿಯೂ ಜ್ಞಾನದ ಸತ್ಯದೇವಿ ಆಗಿದ್ದರು. ತ್ಯಾಗ, ತಪಸ್ಯಾ, ಸೇವೆಯ ಪ್ರತಿಕವಾಗಿದ್ದರು. `ರಾಧಾ’ ಅವರು ತಮ್ಮ ವಿಶಾಲ ಬುದ್ಧಿಯಿಂದ ಪರಮಾತ್ಮನ ದಿವ್ಯ ಸಂದೇಶವನ್ನು ಮಾತೃವಾತ್ಸಲ್ಯದಿಂದ ನೀಡಿದರು. ಆಗ ಅವರಲ್ಲಿ ಇರುವ ಮಾತಾಸ್ವರೂಪವನ್ನು ಕಂಡು ಜನರು `ಮಮ್ಮಾ’ ಎಂಬ ಬಿರುದು ಪ್ರಧಾನ ಮಾಡಿದರು. ಪರಮಪಿತ ಪರಮಾತ್ಮನು ಅವರಿಗೆ `ಜಗದಂಬಾ ಸರಸ್ವತಿ’ ಎಂಬ ಅಮರ ವರದಾನವನ್ನು ನೀಡಿ `ಜಗನ್ಮಾತೆ’ `ಜಗತ್ಜನನಿ’ ಎಂಬ ಬಿರುದು ನೀಡಿದರು. ಅವರಲ್ಲಿ ಇರುವ ಗಂಭೀರತೆ, ಮಧುರತೆ, ಹರ್ಷಿತಮುಖತೆಯಿಂದ ಮಾತೆಯ ಮಮತೆ ಅನುಭವಾಗುತಿತ್ತು. ಅವರು ಕುಶಲ ಪ್ರಶಾಸಕರು ಆಗಿದ್ದರು.

ಕರ್ಮಯೋಗಿಯ ಜೀವನದಲ್ಲಿ ಎರಡು ನಿಯಮಗಳ ಪಾಲನೆಗೆ ಅವರು ವಿಶೇಷ ಗಮನ ಹರಿಸಿದರು. ಒಮ್ಮೆ ಮಾಡಿದ ತಪ್ಪನ್ನು ಮತ್ತೊಮ್ಮೆ ಮಾಡಬಾರದು, ಭಗವಂತನ ಶಿಕ್ಷಣವನ್ನು ತಮ್ಮ ಜೀವನದಲ್ಲಿ ಸಂಪೂರ್ಣ ಪಾಲಿಸಬೇಕು.

ಈಶ್ವರೀಯ ನಿಯಮಗಳ ಪಾಲನೆ ಮಾಡುವರಲ್ಲಿ ಕಾಳಿ ಹಾಗೂ ಶೀತಲಾದೇವಿ ರೂಪವನ್ನು ಅವರು ತಾಳಿದರು. ಸರ್ವರ ಮನೋಕಾಮನೆಗಳನ್ನು ಪೂರ್ಣಗೊಳಿಸಿ ಅನ್ಯರಿಗೆ ಮಹಾದಾನಿ-ವರದಾನಿ ಆಗಿ, ವಿಷಯ ವಾಸನೆಗಳಿಂದ ಮುಕ್ತ ಮಾಡಿದರು. ಮಧುರತೆ, ಕೊಮಲತೆ, ಸ್ನೇಹ, ನಿರ್ಮಲತೆ, ಸರಳತೆ, ನಮ್ರತೆ, ಶಾಂತತೆ, ಪವಿತ್ರತೆ, ಮುಂತಾದ ದೈವೀಗುಣಗಳು ಹಾಗೂ ಕಲೆಗಳನ್ನು ಕಲಿಯಲು ಅವರ ಜೀವನ ಅನೇಕರಿಗೆ ಪ್ರೇರಣಾದಾಯಕವಾಗಿದೆ. `ಜಗದಂಬ ಸರಸ್ವತಿ’ ಅವರು 24-06-1965 ರಂದು ತನ್ನ ಸಾಕಾರ ದೇಹವನ್ನು ತ್ಯಜಿಸಿದರು.
–ವಿಶ್ವಾಸ. ಸೋಹೋನಿ.
ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್
9483937106

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button