
ಪ್ರಗತಿವಾಹಿನಿ ಸುದ್ದಿ; ಶಿರಸಿ: ಭಾರತೀಯ ಜನತಾ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮನ್ನಣೆ ನೀಡಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲರ ಅಭಿಪ್ರಾಯ ಕೇಳಲು ಬರುತ್ತಿದ್ದು, ಕೇಂದ್ರದ ನಿರ್ಣಯಕ್ಕೆ ಎಲ್ಲರೂ ಬದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆಲವರು ಮೂರು ಪಕ್ಷದ ಸರ್ಕಾರ ಹೇಳಿದ್ದಾರೆ. ಸಹಿ ಸಂಗ್ರಹ ನಡೆದಿದೆ. ಹಲವರು ದೆಹಲಿಗೆ ಹೋಗಿ ಬಂದಿದ್ದಾರೆ. ಆದರೆ ಇದನ್ನು ಕೇಂದ್ರ ಒಪ್ಪಲ್ಲ ಎಂದರು. ಅರುಣ್ ಸಿಂಗ್ ಬರುತ್ತಿದ್ದು, ನಾಲ್ಕು ಗೋಡೆಗಳ ಮಧ್ಯೆ ಶಾಸಕರ, ಮಂತ್ರಿಗಳ, ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಕೇಳುತ್ತಾರೆ. ಎಲ್ಲರಿಗೂ ಅವಕಾಶ ಸಿಗಲಿದೆ. ನಂತರ ತಿರ್ಮಾನವನ್ನು ಕೇಂದ್ರವರು ತೆಗೆದುಕೊಳ್ಳಲಿದ್ದಾರೆ. ಈ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್ ನಲ್ಲಿ ಇಲ್ಲ. ಅಲ್ಲಿ ಜಮೀರ್ ಬಿ ಫಾರ್ಮ ಕೊಡುತ್ತಾರೆ. ಅವರೇ ಮುಖ್ಯಮಂತ್ರಿ ಘೋಷಣೆಯನ್ನೂ ಮಾಡುತ್ತಾರೆ. ಅಲ್ಲಿ ಅಶಿಸ್ತು ನಡೆಯುತ್ತದೆ. ಆದರೆ ಬಿಜೆಪಿಯಲ್ಲಿ ಅಶಿಸ್ತಿಗೆ ಆಸ್ಪದವಿಲ್ಲ ಎಂದರು.
ನಾನೊಬ್ಬ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ. ನಾನು ಕೇಂದ್ರದವರು ತೆಗೆದುಕೊಳ್ಳುವ ಎಲ್ಲಾ ತಿರ್ಮಾನಕ್ಕೆ ಬದ್ಧ. ಯಾರನ್ನೂ ತೆಗೆದು ಹಾಕಲೂ, ಸೇರಿಸಿಕೊಳ್ಳಲು ನಾನು ಇಲ್ಲ ಎಂದು ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದರು.
ಅಲ್ಲದೇ ಈ ಮೊದಲೇ ಬಿಜೆಪಿಗೆ ಬಹುಮತ ಸಿಕ್ಕಿದ್ದರೆ ನಾಯಕತ್ವ ಬದಲಾವಣೆ ಪ್ರಶ್ನೆಯೇ ಬರುತ್ತಿರಲಿಲ್ಲ. 17 ಜನ ಶಾಸಕರು ಕಾಂಗ್ರೆಸ್, ಜೆಡಿಎಸ್ ನಲ್ಲಿ ಆಡಳಿತ ಸರಿಯಾಗಿಲ್ಲ ಎಂದು ಆ ಪಕ್ಷ ಬಿಟ್ಟು ಬಂದರು. ಆಮೇಲೆ ಇಂತಹ ಸಣ್ಣ ಸಣ್ಣ ಸಮಸ್ಯೆ ಎದುರಾಗಿದೆ. ನಮ್ಮ ಪಕ್ಷದ ನಾಯಕರ ಜೊತೆ 4 ಗೋಡೆಯ ಮದ್ಯೆ ಎಲ್ಲರೂ ಕೂತು ಚರ್ಚೆ ಮಾಡಿ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ