Kannada NewsKarnataka NewsLatest

ಡಾ.ಬಾಬಾ ಸಾಹೇಬ ಅಂಬೇಡ್ಕರ್ ಜನಿಸದಿದ್ದಿದ್ದರೆ ಭಾರತ ಹೇಗಿರುತ್ತಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ – ಲಕ್ಷ್ಮಿ ಹೆಬ್ಬಾಳಕರ್  

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – 
ಮಹಾನ್ ನಾಯಕ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಜನಿಸದಿದ್ದಿದ್ದರೆ ಭಾರತ ಯಾವ ರೀತಿಯಲ್ಲಿರುತ್ತಿತ್ತು ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. 
 
​ಕಂಗ್ರಾಳಿ ಬಿ ಕೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 131ನೇ ಜಯಂತಿಯ ನಿಮಿತ್ಯವಾಗಿ ಅವರ ಜೀವನ ಮತ್ತು ವಿಚಾರಧಾರೆಯ ವಿಶೇಷ ಉಪನ್ಯಾಸ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
 
​ಬಡತನದಲ್ಲಿ ಅರಳಿದ ಪ್ರತಿಭೆ​ ಬಾಬಾಸಹೇಬರು ​ಅಸ್ಪಶ್ಯತೆಯ ಬೆಂಕಿಯ ಕುಲುಮೆಯಲ್ಲಿ ಬೆಂದ​ರೂ​ ಸಹ ಕಷ್ಟಗಳಿಗೆ ​ಹೆದರದೇ ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಪ್ರಪಂಚದಲ್ಲಿ ಅತಿ ಹೆಚ್ಚು ಡಿಗ್ರಿಗಳನ್ನು ಪಡೆದಿರುವ ​ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.​ ವಿದೇಶದಲ್ಲಿ ಪಿ.ಎಚ್.ಡಿ ಮುಗಿಸಿ​,​ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ​ಅವರದ್ದಾಗಿದೆ. ಸಂವಿಧಾನವನ್ನು ರಚಿಸಿ ಕೋಟ್ಯಂತರ ಜನರ ಹಣೆಬರಹವನ್ನೆ ಬದಲಾಯಿಸಿದ ಮಹಾ​ನ್​ ಶಿಲ್ಪಿ ​ ಅಂಬೇಡ್ಕರ್ ಅವರ ಬದುಕು ಇಡೀ ಜಗತ್ತಿಗೆ ಸ್ಪೂರ್ತಿದಾಯಕ ಮತ್ತು ಸರ್ವಕಾಲಕ್ಕೂ ಶ್ರೇಷ್ಠ ಎಂದು ಅವರು ಹೇಳಿದರು.
 ಶೋಷಿತ ಸಮುದಾಯದ ಏಳ್ಗೆಗಾಗಿ ಬಾಬಾಸಾಹೇಬರ ಹೋರಾಟದ ಬದುಕು ಸದಾ ಸ್ಮರಣೀಯ, ಅಂಬೇಡ್ಕರ್ ಅವರ ಸಾಧನೆಗೆ ಇಡೀ ಜಗತ್ತೇ ತಲೆ ಬಾಗಿದೆ,  ಛಲ​ಕ್ಕೆ, ಸಾಧನೆಗೆ ಮತ್ತೊಂದು ಹೆಸರೆಂದರೆ ಡಾ.ಬಿ ಆರ್. ಅಂಬೇಡ್ಕರ್. ಭಾರತ ಮಾತ್ರವಲ್ಲದೇ ಸುಮಾರು 143ಕ್ಕಿಂತ ಹೆಚ್ಚು ರಾಷ್ಟ್ರಗಳು ಅಂಬೇಡ್ಕರ್ ಅವರ ಜನ್ಮ ಜಯಂತಿಯನ್ನು ಪ್ರತಿವರ್ಷ ಆಚರಿಸುತ್ತಿರುವುದು ಭಾರತೀಯರಿಗೆಲ್ಲ ಹೆಮ್ಮೆಯ ವಿಷಯ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.​ 
​ ಯಾರು ಶಿಕ್ಷಣವೆಂಬ ಹಾಲನ್ನು ಕುಡಿಯುತ್ತಾ​ರೋ​, ಅವರು ಸಿಂಹದಂತೆ ಘರ್ಜಿಸುತ್ತಾರೆ ಎಂಬ ಬಾಬಾಸಾಹೇಬರ ​ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣವನ್ನು ಕಲ್ಪಿಸೋಣ​ ಎಂದು ಅವರು ಹೇಳಿದರು​.
ಈ ಸಂದರ್ಭದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಗಲ್ಲಿಯ ನಿವಾಸಿಗಳು, ಮಲ್ಲೇಶ ಚೌಗುಲೆ, ಸಿದ್ದಪ್ಪ ಕಾಂಬಳೆ, ಸುಧೀರ ಚೌಹಾ​ಣ​, ಸಂಧ್ಯಾ ಚೌಗುಲೆ, ಬಾಳೇಶ ದಾಸನಟ್ಟಿ, ರೇಖಾ ಇಂಡಿಕರ್, ಬೆಟಗೇರಿ, ಗ್ರಾಮ ಪಂಚಾಯತಿಯ ಪದಾಧಿಕಾರಿಗಳು, ಡಾ. ಬಾಬಾಸಾಹೇಬ ಅಂಬೇಡ್ಕರ್ ಮಹಿಳಾ ಮಂಡಳ ಹಾಗೂ ಜೈಭೀಮ ಯುವಕ ಮಂಡಳದವರು ಉಪಸ್ಥಿತರಿದ್ದರು.

Related Articles

Back to top button