Kannada NewsKarnataka News

3 ತಿಂಗಳೊಳಗೆ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ಪೂರ್ಣ : ಬಾಲಚಂದ್ರ ಜಾರಕಿಹೊಳಿ

ತಳಕಟ್ನಾಳ ಬಳಿ ಕಲ್ಮಡ್ಡಿ ಏತ ನೀರಾವರಿ ಕಾಮಗಾರಿ ವೀಕ್ಷಣೆ

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶುಕ್ರವಾರದಂದು ತಳಕಟ್ನಾಳ ಹತ್ತಿರ ನಿರ್ಮಾಣವಾಗುತ್ತಿರುವ ಕಲ್ಮಡ್ಡಿ ಏತ ನೀರಾವರಿ ಜಾಕವೆಲ್ ಕಾಮಗಾರಿಯನ್ನು ವೀಕ್ಷಿಸಿದರು.

ಪ್ರಗತಿವಾಹಿನಿ ಸುದ್ದಿ, ಗೋಕಾಕ : ಬರುವ ಸೆಪ್ಟೆಂಬರ್ ತಿಂಗಳೊಳಗೆ ಕೌಜಲಗಿ ಮತ್ತು ಸುತ್ತಲಿನ ಹಳ್ಳಿಗಳ ಜಮೀನುಗಳಿಗೆ ಕಲ್ಮಡ್ಡಿ ಏತ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಶುಕ್ರವಾರ ಸಂಜೆ ತಾಲೂಕಿನ ತಳಕಟ್ನಾಳ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಜಾಕವೆಲ್ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದ ಅವರು, ರೈತರ ಬಹುದಿನಗಳ ಕನಸು ಇನ್ನು ಮೂರು ತಿಂಗಳೊಳಗೆ ನನಸಾಗಲಿದೆ ಎಂದು ಅವರು ಹೇಳಿದರು.
ಸಣ್ಣ ನೀರಾವರಿ ಇಲಾಖೆಯಿಂದ ಕಲ್ಮಡ್ಡಿ ಏತ ನೀರಾವರಿಗೆ ಅಂದಾಜು ೧೬೧ ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ. ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಗ್ರಾಮಗಳ ೫೬೮೦ ಎಕರೆ ಜಮೀನುಗಳಿಗೆ ಕಲ್ಮಡ್ಡಿ ಏತ ನೀರಾವರಿ ಮೂಲಕ ನೀರಾವರಿ ಸೌಲಭ್ಯ ದೊರಕಲಿದೆ. ಈಗಾಗಲೇ ತಳಕಟ್ನಾಳ ಬಳಿ ಜಾಕವೆಲ್ ಕಾಮಗಾರಿ ಮುಗಿದಿದ್ದು, ಪ್ಲಾಸ್ಟಿಂಗ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕಳೆದ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಕಾಮಗಾರಿಗೆ ಸ್ವಲ್ಪ ಅಡಚಣೆಯಾಗಿದೆ. ಹೀಗಾಗಿ ಅಗಸ್ಟ್, ಸೆಪ್ಟೆಂಬರ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜೊತೆಗೆ ಇದೇ ನೀರಾವರಿ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸಲಾಗುವುದು. ಅದರಲ್ಲಿ ಕಪರಟ್ಟಿ, ಖಂಡ್ರಟ್ಟಿ, ಕೌಜಲಗಿ ಮತ್ತು ಬಿಲಕುಂದಿ ಗ್ರಾಮಗಳಲ್ಲಿರುವ ಒಟ್ಟು ೬ ಕೆರೆಗಳನ್ನು ಭರ್ತಿ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಕೌಜಲಗಿ, ಬಿಲಕುಂದಿ, ಗೋಸಬಾಳ, ಬಗರನಾಳ ಹಾಗೂ ಮನ್ನಿಕೇರಿ ಗ್ರಾಮಗಳ ರೈತರಿಗೆ ಕಲ್ಮಡ್ಡಿ ಏತ ನೀರಾವರಿ ಯೋಜನೆ ದೊರೆಯಲಿದೆ. ಇದರಿಂದ ಈ ಭಾಗದ ರೈತರಲ್ಲಿ ಹೊಸ ಆಶಾಕಿರಣ ಮೂಡಲಿದೆ. ಕಲ್ಮಡ್ಡಿ ಏತ ನೀರಾವರಿ ಯೋಜನಾನುಷ್ಠಾನದಿಂದ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಲಕ್ಷ್ಮಣ ಮಸಗುಪ್ಪಿ, ಪ್ರಮುಖರಾದ ವಿರುಪಾಕ್ಷಿ ಮುಂಗರವಾಡಿ, ಲಕ್ಕಪ್ಪ ಹುಲಕುಂದ, ಕೆಂಪಣ್ಣ ಬೆಣ್ಣಿ, ಹಣಮಂತ ನಾಯಿಕ, ರೇವಣ್ಣ ವಡೇರ, ಹನಮಂತ ಅಜ್ಜನ್ನವರ, ಅಜ್ಜಪ್ಪ ಹುಲಕುಂದ, ರಾಮಣ್ಣಾ ಬಾಣಿ, ಬಸಪ್ಪ ಕಪರಟ್ಟಿ, ಸಣ್ಣ ನೀರಾವರಿ ಇಲಾಖೆಯ ಎಇಇ ಶ್ರೀಕಾಂತ ಮೆಳವಂಕಿ, ಜೆಇ ಜೈಭೀಮ, ಗುತ್ತಿಗೆದಾರ ಸುಧಾಕರ ಶೆಟ್ಟಿ, ನಾಗಪ್ಪ ಮಾದರ, ಗ್ರಾಮ ಪಂಚಾಯತ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button