Karnataka NewsLatest

*ಕಾಶಿಯಲ್ಲಿ ಕೆಳದಿ ಅರಸರ ಕಾಲದ ಕನ್ನಡ ಶಾಸನ; ರಕ್ಷಣೆಗೆ ಮುಂದಾದ ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ವಾರಾಣಸಿ ಹತ್ತಿರದಲ್ಲಿ ನಿರ್ಲಕ್ಷ್ಯಕ್ಕೊಳಾಗಿದ್ದ ಕೆಳದಿ ಅರಸರ ಕಾಲದ ಕನ್ನಡ ಶಾಸನದ ರಕ್ಷಣೆಗೆ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸೂಕ್ತ ಕ್ರಮ ಕೈಕೊಂಡಿರುವುದು ಸಂಶೋಧನಾ ಸಾಹಿತ್ಯಾಸಕ್ತರಲ್ಲಿ ಹರ್ಷವನ್ನುಂಟು ಮಾಡಿದೆ.

ಕಪಿಲಧಾರಾದಲ್ಲಿ : ಕಾಶಿ ನಗರದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಕಪಿಲಧಾರಾ ಎಂಬ ಗ್ರಾಮದಲ್ಲಿ ಕೆಳದಿ ಅರಸರು ಪಂಚಕ್ರೋಶಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಕಟ್ಟಿಸಿರುವ ಸರೋವರದ ಬಳಿ ಕನ್ನಡದ ಈ ಶಾಸನವಿದ್ದು, ಕೆಳದಿ ರಾಜ ಶಿವಪ್ಪನಾಯಕರು ಸರೋವರ ನಿರ್ಮಿಸಿರುವ ಮಾಹಿತಿ ಶಾಸನದಲ್ಲಿ ಕಂಡು ಬಂದಿದೆ.

ರಕ್ಷಣೆಗೆ ಕ್ರಮ :
ಕಪಿಲಧಾರಾ ಗ್ರಾಮದ ಜನತೆ ಈ ಶಾಸನದ ಮಹತ್ವ ಅರಿಯದೇ ಸರೋವರದ ದಡದಲ್ಲಿ ಸಂಪರ್ಕ ಸೇತುವೆಯಂತೆ, ಜೊತೆಗೆ ಬಟ್ಟೆ ತೊಳೆಯಲು ಶಾಸನದ ಈ ಶಿಲೆಯನ್ನು ಬಳಸುತ್ತಿರುವದು ಗಮನಕ್ಕೆ ಬಂದ ತಕ್ಷಣ ಕಾಶಿ ಜಗದ್ಗುರುಗಳು ಅದರ ರಕ್ಷಣೆಗೆ ಕ್ರಮ ಕೈಕೊಂಡಿದ್ದಾರೆ. ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಶ್ರೀಪೀಠದ ವ್ಯವಸ್ಥಾಪಕರಾದ ಶಿವಾನಂದ ಹಿರೇಮಠ ಹಾಗೂ ವಕೀಲರಾದ ಉದಯಭಾನು ಸಿಂಹ ಅವರನ್ನು ಸ್ಥಳಕ್ಕೆ ಕಳುಹಿಸಿ ವಸ್ತುಸ್ಥಿತಿಯನ್ನು ಅವಲೋಕಿಸಿದ್ದಾರೆ.


ಈ ಸರೋವರ ಇರುವ ಜಾಗವು ಕಪಿಲಧಾರಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತಿದ್ದು, ಅಲ್ಲಿಯ ಅನುಮತಿ ಪಡೆದು ಶಾಸನವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಪ್ರವಾಸಿಗರಿಗೆ ಪ್ರದರ್ಶನಕ್ಕಿಡಲು ಕ್ರಮಕೈಗೊಳ್ಳಲು ಮೂಲತಃ ಅಪ್ಪಟ ಕನ್ನಡಿಗರೇ ಆಗಿರುವ ಕಾಶಿ ಜಗದ್ಗುರುಗಳು ಯೋಜಿಸಿದ್ದಾರೆ.

Related Articles

Back to top button