Belagavi NewsBelgaum News

*ಮಾತೃಭಾಷೆಯಲ್ಲಿನ ಕಲಿಕೆಯೆ ವ್ಯಕ್ತಿತ್ವ ವಿಕಸನಕ್ಕೆ ಬುನಾದಿ: ಡಾ.ನಿರ್ಮಲಾ ಬಟ್ಟಲ್*

ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ತ್ರಿಭಾಷಾ ಶಿಕ್ಷಣ ನೀತಿಗಳು ರೂಪಿಸಿದ ನಿಮಯಗಳೊಂದಿಗೆ ಕರ್ನಾಟಕದಲ್ಲಿ  ಕಡ್ಡಾಯವಾಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದಲ್ಲಿಯೇ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರಕಬೇಕು .ಮಾತೃ ಭಾಷೆಯಲ್ಲಿ ಪಡೆದ ಶಿಕ್ಷಣವೇ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯೆಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ  ಬೆಳಗಾವಿಯ ಪ್ರಾಚಾರ್ಯರಾದ ಡಾ ನಿರ್ಮಲಾ ಬಟ್ಟಲ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.
   
ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಚಕೋರ- ಸಾಹಿತ್ಯ ವಿಚಾರ ವೇದಿಕೆ, ಬೆಳಗಾವಿ ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿ ಇವರ ಸಹಯೋಗದಲ್ಲಿ ದಿನಾಂಕ ೨೭- ೨-೨೦೨೫ ರಂದು ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ ಮಹಾಂತೇಶ ನಗರ ಬೆಳಗಾವಿಯಲ್ಲಿ ವಿಶೇಷ ಉಪನ್ಯಾಸ ಮಾಲಿಕೆ-೪ ಯಶಸ್ವಿಯಾಗಿ ಜರುಗಿತು.
 ಅಧ್ಯಕ್ಷೀಯ ಮಾತುಗಳನ್ನಾಡುತ್ತ ಡಾ. ನಿರ್ಮಲಾ ಬಟ್ಟಲ್ ಪ್ರಾಚಾರ್ಯರು ,ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ  ಮಹಾಂತೇಶ ನಗರ ಬೆಳಗಾವಿ ಇವರು ,ಜನರೂ ಭಾಷಾ ಕಲಿಕೆಯಿಂದ ದೂರ ಹೋಗುತ್ತಿದ್ದಾರೆ. ಸ್ಪರ್ಧಾತ್ಮಕ ಆರ್ಥಿಕತೆಯ ಬೆನ್ನು ಹತ್ತಿರುವ ಜನರಿಗೆ ಭಾಷೆ ಮತ್ತು ಸಾಹಿತ್ಯ ಬೇಡವಾಗಿದೆ. ಸಾಮಾಜಿಕ ಜಾಲತಾಣಗಳೂ ಸೇರಿದಂತೆ, ಮಾಧ್ಯಮಗಳು ಭಾಷೆಗಳ ಸಾವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇದರ ಒಟ್ಟು ಪರಿಣಾಮವಾಗಿ ಶಿಕ್ಷಣ ಕ್ಷೇತ್ರದಲ್ಲಿ ಭಾಷಾಧ್ಯಯನ ಕಳೆಗುಂದುತ್ತಿದೆ. ಈ ಗ್ರಹಿಕೆಯಲ್ಲಿ ಹೊಸ ಶಿಕ್ಷಣ ನೀತಿಯು ಭಾರತೀಯ ಭಾಷೆಗಳನ್ನು ಸಬಲೀಕರಣಗೊಳಿಸಲು ತನ್ನ ನೀತಿಯ ಪರಿಚ್ಛೇದ 4.11ರಲ್ಲಿ ಈ ಕೆಳಗಿನ ಸಲಹೆಗಳನ್ನು ನೀಡಿದೆ.

ಚಿಕ್ಕ ಮಕ್ಕಳು ತಮ್ಮ ಮನೆಯ ಭಾಷೆಯಲ್ಲಿ ,ಮಾತೃ ಭಾಷೆಯಲ್ಲಿ ಅರ್ಥಸಹಿತವಾದ ಮಾತುಗಳನ್ನು ಮತ್ತು ಪರಿಕಲ್ಪನೆಗಳನ್ನು ಹೆಚ್ಚು ಬೇಗ ಕಲಿಯುತ್ತಾರೆ ಮತ್ತು ಅರ್ಥ ಮಾಡಿಕೊಳ್ಳುತ್ತಾರೆ. ಮನೆಭಾಷೆಯೆಂದರೆ ಸಾಧಾರಣವಾಗಿ ಮಾತೃಭಾಷೆ ಅಥವಾ ಸ್ಥಳೀಯ ಸಮುದಾಯಗಳು ಆಡುವ ಭಾಷೆಗಳಾಗಿರುತ್ತವೆ. ಇಷ್ಟಾದರೂ ವಾಸ್ತವ ಸಂಗತಿ ಏನೆಂದರೆ, ಅನೇಕ ವೇಳೆ ಬಹುಭಾಷಿಕ ಕುಟುಂಬಗಳಲ್ಲಿ ಮನೆಯ ಕೆಲವರು ತಮ್ಮದೇ ವಿಶಿಷ್ಟವಾದ ಮನೆಮಾತು ಬಳಕೆ ಮಾಡಬಹುದು. ಈ ಭಾಷೆಯು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಿಂತ ಬೇರೆಯದೇ ಆಗಿರಬಹುದು. ಸಾಧ್ಯವಾದ ಮಟ್ಟಿಗೆ ಕಡೇ ಪಕ್ಷ ಐದನೆಯ ತರಗತಿವರೆಗೆ ಅಥವಾ ಅದಕ್ಕಿಂತ ಮುಂದೆ ಎಂಟನೆಯ ತರಗತಿವರೆಗೆ ಅಥವಾ ಅದಕ್ಕಿಂತಲೂ ಮುಂದೆ ಶಿಕ್ಷಣದ ಮಾಧ್ಯಮ ಮನೆಭಾಷೆ,ಪ್ರಾದೇಶಿಕ ಭಾಷೆ, ಮಾತೃಭಾಷೆ,ಸ್ಥಳೀಯ ಭಾಷೆ ಆಗಿರಬೇಕಾಗುತ್ತದೆ. ಇದಾದ ನಂತರ ಸಾಧ್ಯವಾದಷ್ಟೂ ಮಟ್ಟಿಗೆ ಮನೆಭಾಷೆಯನ್ನು, ಸ್ಥಳೀಯ ಭಾಷೆಯನ್ನು ಒಂದು ಭಾಷೆಯಾಗಿ ಓದುವಂತಹ ಅವಕಾಶ ಇರಬೇಕು. ವಿಜ್ಞಾನ ಸೇರಿದಂತೆ ಎಲ್ಲ ವಿಷಯಗಳಲ್ಲೂ ಉಚ್ಚ ಮಟ್ಟದ ಪಠ್ಯಪುಸ್ತಕಗಳನ್ನು ಮಾತೃಭಾಷೆಯಲ್ಲಿ ದೊರಕಿಸಿಕೊಡಬೇಕು ಒಂದು ವೇಳೆ ಮಗು ಆಡುವ ಭಾಷೆ ಹಾಗೂ ಶಿಕ್ಷಣ ಮಾಧ್ಯಮ ಇವೆರಡೂ ಎಲ್ಲಿಯೇ ಆದರೂ ಬೇರೆ ಬೇರೆಯಾಗಿದ್ದರೆ ಅಂತೆಡೆಗಳಲ್ಲಿ ಆ ಕೊರತೆಯನ್ನು ತುಂಬುವ ಎಲ್ಲ ಪ್ರಯತ್ನ ಮಾಡಬೇಕು. ಮನೆ ಭಾಷೆಯಲ್ಲಿ ಒಂದು ವೇಳೆ ಪಠ್ಯಸಾಮಗ್ರಿ ದೊರೆಯದೇ ಇರುವಂಥ ಸಂದರ್ಭಗಳಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ನಡುವೆ ಸಂಭಾಷಣೆ ರೂಪದಲ್ಲಾದರೂ ಮನೆಭಾಷೆಯನ್ನು ಬಳಕೆಗೆ ತರಬೇಕು. ಬೋಧನೆ ಮತ್ತು ಕಲಿಕೆ ಎರಡರಲ್ಲೂ ಬಹುಭಾಷೀಯತೆ ಮತ್ತು ಭಾಷಾ ಶಕ್ತಿ ಇವುಗಳಿಗೆ ಪ್ರೋತ್ಸಾಹ ನೀಡಬೇಕು .ಭಾಷೆಗಳ ಉಳಿಯುವಿಕೆ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಈ ಆಲೋಚನೆಗಳು ಸಮರ್ಪಕವಾಗಿವೆ ಎಂದು ನುಡಿದರು

    ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯ, ಬೆಳಗಾವಿಯ ಕನ್ನಡ  ಸಹಾಯಕ ಪ್ರಾಧ್ಯಾಪಕರಾದ ಡಾ.ಸಿದ್ದಣ್ಣ ವಾಲಿಶೆಟ್ಟಿ ಶಿಕ್ಷಣದಲ್ಲಿ ಭಾಷಾ ನೀತಿಗಳು ಎಂಬ ವಿಷಯ ಕುರಿತಾಗಿ ವಿಶೇಷ ಉಪನ್ಯಾಸ ನೀಡುತ್ತ ,ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ

(NPE- National Policy on Education) ಎಂಬುದು ಭಾರತದ ಜನರಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಭಾರತ ಸರ್ಕಾರವು ರೂಪಿಸಿದ ಒಂದು ನೀತಿ. ಈ ನೀತಿಯು ಗ್ರಾಮೀಣ ಮತ್ತು ನಗರ ಭಾರತದ ಕಾಲೇಜು ಮತ್ತು ಪ್ರಾಥಮಿಕ ಶಿಕ್ಷಣವನ್ನು ಒಳಗೊಂಡಿದೆ. 1968 ರಲ್ಲಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರಿಂದ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣದ ನೀತಿ (NPE ಘೋಷಿಸಲ್ಪಟ್ಟಿತು. 1986 ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಅವರಿಂದ ಎರಡನೇ ಬಾರಿಗೆ ಘೋಷಿಸಲ್ಪಟ್ಟಿತು. 2017 ರಲ್ಲಿ ಭಾರತ ಸರ್ಕಾರವು ಕೆ. ಕಸ್ತೂರಿರಂಗನ್ ಅವರ ನೇತೃತ್ವದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣಕ್ಕಾಗಿ ಕರಡು ಸಿದ್ಧತೆಗಾಗಿ ಹೊಸ ಸಮಿತಿಯನ್ನು ನೇಮಿಸಿದೆ.
2019 ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೊಸ ಶಿಕ್ಷಣ ನೀತಿ 2019 ಕರಡನ್ನು ಬಿಡುಗಡೆ ಮಾಡಿತು. ಅದರ ನಂತರ ಹಲವಾರು ಸಾರ್ವಜನಿಕ ಸಮಾಲೋಚನೆಗಳು ನಡೆದವು. ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸುವ ಉದ್ದೇಶದಿಂದ 2020 ರ ಜುಲೈ 29 ರಂದು ಕ್ಯಾಬಿನೆಟ್ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತು.
ಸಂವಿಧಾನದ ೩೫೫ (ಕ) ಅನುಚ್ಛೇದದಲ್ಲಿ ಇರುವಂತೆ ಮಗುವಿಗೆ ಮಾತೃಭಾಷೆಯ ಕಲಿಕೆ ಕಡ್ಡಾಯವಾಗಿದೆ.
ಭಾಷಾ ಅಲ್ಪಸಂಖ್ಯಾತರು ಹಾಗೂ ಜನಾಂಗೀಯ ಅಲ್ಪಸಂಖ್ಯಾತರಿಗಾಗಿ ತ್ರಿಭಾಷಾ ಸೂತ್ರಗಳ ಅನ್ವಯದಿಂದ ಜ್ಞಾನಾರ್ಜನೆ ಸರಳವಾಗುತ್ತದೆ.

೧೯೮೬ರಲ್ಲಿ ಜಾರಿಗೆ ಬಂದ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯು ಪ್ರಾದೇಶಿಕ ಭಾಷೆಗಳಿಗೆ ಮೊದಲ ಆಧ್ಯತೆಯನ್ನು ನೀಡಿತು.ತದನಂತರದ ಶಿಕ್ಷಣ ನೀತಿಗಳು ಜಾಗತೀಕರಣ ಮತ್ತು ಜಾಗತೀಕರಣೋತ್ತರ ಕಾಲಘಟ್ಟದಲ್ಲಿ ಭಾಷಾ ನೈಪುಣ್ಯತೆ ಹಾಗೂ ಸಮರ್ಪಕ ಸಂವಹನದ ದೃಷ್ಟಿಯಿಂದ ಭಾಷಾ ಬೋಧನೆ ಕಲಿಕೆ ಮತ್ತು ಗ್ರಹಿಕೆಗಳಲ್ಲಿ ಉನ್ನತ ಮಟ್ಟದಲ್ಲಿ ಜ್ಞಾನ ದೊರಕುವಂತೆ ನೀತಿ ರೂಪಿಸಿದೆ.
ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣವು ಮಾತೃಭಾಷೆಯಲ್ಲಿ ದೊರಕುವಂತೆ ನಿಮಯ ರೂಪಿಸಿದೆ.ಇದರೊಂದಿಗೆ ಉಚ್ಚತರ ಶಿಕ್ಷಣ ಮತ್ತು ಸಂಶೋಧನೆಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ.ಈ ನಿಟ್ಟಿನಲ್ಲಿ ತ್ರಿಭಾಷಾ ಸೂತ್ರದ ಮೂಲ ಉದ್ದೇಶದಿಂದ ಭಾರತೀಯ ಇತರ ಭಾಷೆಗಳ ಸೂಪ್ತ ಜ್ಞಾನ ದೊರಕಬೇಕು.

Home add -Advt

ಕನ್ನಡದ ಮಟ್ಟಿಗೆ ಸದ್ಯ ಭಾಷಾ ಬಳಕೆ ಬೋಧನೆ ಮತ್ತು ಉನ್ನತ ಶಿಕ್ಷಣದ ಸಂದರ್ಭದಲ್ಲಿ ಅನೇಕ ತೊಡಕುಗಳು ಹುಟ್ಟಿಕೊಂಡಿವೆ.ಕನ್ನಡೇತರ ವಿದ್ಯಾರ್ಥಿಗಳಿಗೆ ಭಾಷಾ ಕಲಿಕೆಯಲ್ಲಿ ನೀತಿ ರೂಪಿಸಿದರೂ ಸಮರ್ಪಕವಾಗಿ ಅಧಿಷ್ಠಾನಕ್ಕೆ ಬಂದಿಲ್ಲ.ಕರ್ನಾಟಕದ ಆಡಳಿತ ಭಾಷೆ ರಾಜ್ಯ ಭಾಷೆ ಕನ್ನಡವಾದರೂ ಪದವಿ ಹಂತದಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯವಾಗಿಲ್ಲ ಬದಲಿಗೆ ಐಚ್ಛಿಕವಾಗಿ ಕಲಿಯಬಹುದಾಗಿದೆ.ಇದರಿಂದ ಕನ್ನಡ ಕಲಿಕೆಯ ಮೇಲೆ ತೀವ್ರತರವಾದ ವೈರುದ್ಯತೆಗಳು ತಲೆದೊರಿವೆ.
ಕನ್ನಡ ಭಾಷೆಯ ಅಧೀಕೃತ ಬಳಕೆ ಮತ್ತು ಶೈಕ್ಷಣಿಕ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಸಮರ್ಪಕವಾಗಿ ನಿಮಯಗಳನ್ವಯ ಜಾರಿಗೆ ತರಲು ಅನೇಕ ಚಳುವಳಿಗಳೆ ನಡಿದೆವೆ..ಗೋಕಾಕ ಚಳುವಳಿಯ ವರದಿ.ಬರಗೂರು ರಾಮಚಂದ್ರಪ್ಪ ಅವರ ವರದಿ ಆಧರಿಸಿ ಕನ್ನಡ ಭಾಷಾ ಕಲಿಕೆ ಮತ್ತು ಬೆಳವಣಿಗೆಗೆ ಪೂರಕ ನಿಮಯವನ್ನು ರೂಪಿಸಿಕೊಂಡಿರುವುದನ್ನು ಕಾಣಬಹುದು ಎಂದು ವಿಶೇಷ ಉಪನ್ಯಾಸದಲ್ಲಿ ಶಿಕ್ಷಣದಲ್ಲಿ ಭಾಷಾ ನೀತಿಗಳ ಕುರಿತಾಗಿ ಮಾತನಾಡಿದರು.

  ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕರಾದ ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಭಾಷೆಗಳು ಜಗತ್ತನ್ನು ಭಿನ್ನ ರೀತಿಯಲ್ಲಿ ನೋಡುತ್ತವೆ. ಒಂದು ಭಾಷೆಯು ಅದನ್ನು ಮಾತಾಡುವ ಸ್ಥಳೀಯರ ಅನುಭವದ ಗ್ರಹಿಕೆಯನ್ನು ನಿರ್ಧರಿಸುತ್ತದೆ. ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಪ್ರೋತ್ಸಾಹಿಸಲು ಒಂದು ಸಂಸ್ಕೃತಿಯ ಭಾಷೆಗಳನ್ನು ಕೂಡಾ ಸಂರಕ್ಷಿಸಬೇಕು ಮತ್ತು ಪ್ರೋತ್ಸಾಹಿಸಬೇಕು. ದುರದೃಷ್ಟದ ಸಂಗತಿಯೆಂದರೆ, ಭಾರತೀಯ ಭಾಷೆಗಳಿಗೆ ನಿಜಕ್ಕೂ ಸಿಗಬೇಕಾದ ಮಾನ್ಯತೆ ಮತ್ತು ಕಾಳಜಿ ಸಿಕ್ಕಿಲ್ಲ. ಈಗಾಗಲೇ ದೇಶವು 220ಕ್ಕೂ ಹೆಚ್ಚು ಭಾಷೆಗಳನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಭಾರತೀಯ ಭಾಷೆಗಳ ಬೋಧನೆ ಮತ್ತು ಕಲಿಕೆಯನ್ನು ಗಟ್ಟಿಗೊಳಿಸಬೇಕಾದ ಅಗತ್ಯವಿದೆ.ಯುನೆಸ್ಕೋ ವರದಿ ಪ್ರಕಾರ ಮುಂಬರುವ ದಿನಗಳಲ್ಲಿ  ಜನಸಾಮಾನ್ಯರ ಬಳಕೆಯಲ್ಲಿ ಇಲ್ಲದ ಭಾಷೆಗಳು ನಸೀಶಿ ಹೋಗುವ ಆತಂಕವಿದೆ.ಈ ನಿಟ್ಟಿನಲ್ಲಿ  ಪ್ರಾದೇಶಿಕ ಭಾಷೆಯಲ್ಲಿಯೇ ಶೈಕ್ಷಣಿಕ  ಗುಣಮಟ್ಟವನ್ನು ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೊಂಡೊಯ್ಯುವ ನೀತಿಗಳು ಅತೀ ಅವಕಶ್ಯಕವಾಗಿವೆ.
  ಭಾಷಾ ಯೋಜನೆ-ನೀತಿ ಎಂದರೆ ಸಾಮಾಜಿಕ ಗುಂಪುಗಳ (ವರ್ಗಗಳ) ನಡುವಿನ ವ್ಯತ್ಯಾಸಗಳಿಗೆ ಆಧಾರವಾಗಿ ಭಾಷೆಯ ಸಾಂಸ್ಥಿಕೀಕರಣ. ಅಂದರೆ, ಸಾಮಾಜಿಕ ರಚನೆಯೊಳಗೆ ಭಾಷೆಯನ್ನು ಪತ್ತೆಹಚ್ಚಲು ಭಾಷಾ ನೀತಿಯು ಒಂದು ಕಾರ್ಯವಿಧಾನವಾಗಿದೆ, ಆದ್ದರಿಂದ ಭಾಷೆಯು ರಾಜಕೀಯ ಶಕ್ತಿ ಮತ್ತು ಆರ್ಥಿಕ ಸಂಪನ್ಮೂಲಗಳಿಗೆ ಪ್ರವೇಶವನ್ನು ಹೊಂದಿರುವ ಭಾಷೆ ನಿರ್ಧರಿಸುತ್ತದೆ.ಭಾಷಾ ನೀತಿಯನ್ನು "ಸಂಕೀರ್ಣ ಸಾಮಾಜಿಕ-ಸಾಂಸ್ಕೃತಿಕ ಪ್ರಕ್ರಿಯೆ ಮತ್ತು ಅಧಿಕಾರದ ಸಂಬಂಧಗಳಿಂದ ಮಧ್ಯಸ್ಥಿಕೆ ವಹಿಸುವ ಮಾನವ ಸಂವಹನ, ಮಾತುಕತೆ ಮತ್ತು ಉತ್ಪಾದನೆಯ ವಿಧಾನಗಳು" ಎಂದು ವ್ಯಾಖ್ಯಾನಿಸುತ್ತಾರೆ. ಈ ಉಪಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಮಾತೃಭಾಷೆಯಲ್ಲಿಯೇ ಮೂಲಭೂತ ಶಿಕ್ಷಣ ದೊರಕುವಂತಾಗಬೇಕು ಎಂದು ನುಡಿದರು.

  ಮಹಾಂತೇಶ ನಗರ ರಹವಾಸಿಗಳ ಸಂಘದ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.

ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ರೂಪಾ ಅಕ್ಕಿ ನಿರೂಪಿಸಿದರು. ಮಂಜನಾಥ ಕಲಾಲ ಪರಿಚಯಿಸಿದರು. ಗೀತಾ ದಯಣ್ಣವರ ಮಲ್ಲಿಕಾರ್ಜುನ ಜಮಖಂಡಿ ಉಪಸ್ಥಿತರಿದ್ದರು. ಮಹಾಂತೇಶ ನಗರ ಬೆಳಗಾವಿಯ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು.ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button