
ಪ್ರಗತಿವಾಹಿನಿ ಸುದ್ದಿ; ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ತ್ರಿವಿಧ ಸಿದ್ಧಾಂತವನ್ನು ಭೂಮಿಗೆ ತಂದವರು. ಹಲವರು ದೇವರೆಂದೇ ಅವರನ್ನು ಕರೆಯುತ್ತಾರೆ. ಅನ್ನ, ಅಕ್ಷರ, ಆಶ್ರಯ ನೀಡಿ ತಮ್ಮ ಕಾರ್ಯಗಳಿಂದಲೇ ಸಂದೇಶ ಸಾರಿದ ಶ್ರೀಗಳು ಆಧುನಿಕ ಬಸವಣ್ಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಮರಿಸಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ನಡೆದಾಡೋ ದೇವರ ಬಸವ ಭಾರತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ, ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪಸರಿಸಲು ಡಾ.ಶಿವಕುಮಾರ ಸ್ವಾಮೀಜಿ ಶ್ರಮಿಸಿದ್ದಾರೆ. 80 ವರ್ಷಗಳ ಕಾಲ ನಿರಂತರ ಸಮಾಜಸೇವೆ ಮಾಡಿದ್ದರು ಎಂದರು.
ಗಂಗಾನದಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂತೆಯೇ ಸಿದ್ಧಗಂಗಾ ಮಠಕ್ಕೆ ಆಗಮಿಸಿದರೆ ಪುಣ್ಯ ಸಿಗುತ್ತದೆ. ಉತ್ತರದಲ್ಲಿ ಗಂಗೆಯಾದರೆ, ದಕ್ಷಿಣದಲ್ಲಿ ಸಿದ್ಧಗಂಗಾ. ನಾನು ಮೂರು ಬಾರಿ ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದೇನೆ. ಪ್ರತಿ ಬಾರಿ ಬಂದಾಗಲೂ ಹೊಸ ಉತ್ಸಾಹದೊಂದಿಗೆ ತೆರಳಿದ್ದೇನೆ. ಇದು ಸಿದ್ಧಗಂಗಾ ಶ್ರೀಗಳ ಪುಣ್ಯಭೂಮಿಯಾಗಿದೆ. ಶ್ರೀಗಳ ಆಶೀರ್ವಾದ ಪಡೆಯಲೆಂದು ಆಗಮಿಸಿರುವೆ ಎಂದು ಹೇಳಿದರು.
ಬಿಸಿಯೂಟ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು; ಸಿಎಂ ಘೋಷಣೆ