Belagavi NewsBelgaum NewsKannada NewsKarnataka NewsLatest

*ಚಿಕ್ಕೋಡಿಯಲ್ಲಿ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟಿಸಿದ ವಿದೇಶಾಂಗ ಸಚಿವ ಜೈಶಂಕರ್*

ಪ್ರಗತಿವಾಹಿನಿ ಸುದ್ದಿ: ಕಳೆದೊಂದು ದಶಕದಲ್ಲಿ ಭಾರತವು ಐದನೇ ಆರ್ಥಿಕಶಕ್ತಿ ವಲಯವಾಗಿ ಬೆಳೆದುನಿಂತಿದೆ. ಔದ್ಯಮಿಕವಾಗಿ, ಆರೋಗ್ಯ ಶೈಕ್ಷಣಿಕವಾಗಿ ಡಿಜಿಟಲ್ ಭಾರತವು ಪ್ರಕಾಶಿಸುತ್ತಿದೆ. ಇದೆಲ್ಲವೂ ಮೋದಿಜಿಯವರ ಸಮರ್ಥ ನಾಯಕತ್ವದಿಂದ ಸಾಧ್ಯವಾದುದು ಎಂದು ಕೇಂದ್ರ ವಿದೇಶಾಂಗ ಸಚಿವರಾದ ಡಾ.ಎಸ್.ಜೈಶಂಕರ ಅವರು ಹೇಳಿದರು.


ಅವರು ಚಿಕ್ಕೋಡಿಯಲ್ಲಿ ಕೆಎಲ್‌ಇ ಸಂಸ್ಥೆಯ ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಕಳೆದ ಹತ್ತು ವರ್ಷಹಿಂದೆ ಭಾರತ ಆರ್ಥಿಕವಾಗಿ ಹನ್ನೊಂದನೆಯ ಸ್ಥಾನವನ್ನು ಹೊಂದಿತ್ತು ಇಂದು ಆತ್ಮ ನಿರ್ಭರ ಯೋಜನೆಗಳಿಂದ ಐದನೇ ಸ್ಥಾನವನ್ನು ಪಡೆದುಕೊಂಡು ಜಗತ್ತಿಗೆ ಒಂದು ಸಂದೇಶವನ್ನು ನೀಡಿದೆ. ಮೋದಿಜಿಯವರು ಕಳೆದ ದಶಕದಿಂದ ದೇಶಕ್ಕೆ ಅದ್ಭುತವಾದ ಯೋಜನೆಗಳನ್ನು ತರುವುದರ ಮೂಲಕ ಭಾರತ ಪ್ರಕಾಶಿಸುವಂತೆ ಮಾಡಿದ್ದಾರೆ. ಅನ್ನಯೋಜನೆ, ಉಜ್ವಲಾ ಯೋಜನೆ, ಆವಾಸ ಯೋಜನೆಗಳಂತಹ ಅಸಂಖ್ಯ ಜನಸಾಮಾನ್ಯರನ್ನೇ ಕೇಂದ್ರವಾಗಿಟ್ಟುಕೊಂಡು ಜಾರಿಗೆ ತಂದ ಯೋಜನೆಗಳು ಭಾರತವನ್ನು ಅಭಿವೃದ್ಧಿಯತ್ತ ಕೊಂಡ್ಯೊದಿದೆ ಎಂದರು. ಭಾರತವು ಡಿಜಟಲೀಕರಣದಿಂದ ಕ್ಯಾಶ್‌ಲೆಸ್ ದೇಶವಾಗಿ ಜಗತ್ತಿನ ಬಹುದೇಶಗಳನ್ನು ವಿಸ್ಮಯಗೊಳಿಸಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮಲ್ಲಿ ಉತ್ತಮವಾದ ಆಸ್ಪತ್ರೆಗಳು ಇರಲಿಲ್ಲ. ಸೌಲಭ್ಯಗಳು ಇರಲಿಲ್ಲ. ಭಾರತ ಜಾಗತಿಕವಾಗಿ ಕೋವಿಡ್‌ನ್ನು ಎದುರಿಸುವುದು ದುಸ್ತರವೆಂಬುದು ಅನೇಕ ಪ್ರಗತಿಶೀಲದೇಶಗಳ ಅಂಬೋಣವಾಗಿತ್ತು. ಆದರೆ ಭಾರತ ಕೇವಲ ಒಂದುವರ್ಷದ ಅವಧಿಯಲ್ಲಿ ಎಲ್ಲರ ಊಹೆಗಳನ್ನು ಬದಲಾಯಿಸಿತು. ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆಯನ್ನು ನೀಡಿದ ಹೆಮ್ಮೆ ಭಾರತದೇಶದ್ದು. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಜಿಯವರ ದೂರದೃಷ್ಟಿ ಹಾಗೂ ನಾಯಕತ್ವದ ಗುಣದಿಂದ. ಭಾರತವನ್ನು ವಿದೇಶದವರು ಮೊದಲನಂತೇ ನೋಡುವ ದೃಷ್ಟಿಕೋನ ಬದಲಾಗಿದೆ. ಒಂದು ಕಾಲದಲ್ಲಿ ದೇಶದಲ್ಲಿ ೧೭ ಪಾಸಪೋರ್ಟ್ ಕೇಂದ್ರಗಳು ಇದ್ದವು ಇಂದು ೫೨೭ ಕೇಂದ್ರಗಳಾಗಿವೆ. ಹೊಸ ಅನ್ವೇಷಣೆಗಳು, ಸ್ಟಾರ್ಟಅಪ್‌ಗಳು, ಉದ್ಯೋಗ-ಶೈಕ್ಷಣಿಕ ಹೊಸ ಕೌಶಲಗಳನ್ನು ಹುಟ್ಟುಹಾಕಿ ಭಾರತವನ್ನು ಜಾಗತಿಕವಾಗಿ ೩ನೇ ಶಕ್ತಿಶೀಲ ರಾಷ್ಟçವನ್ನಾಗಿ ರೂಪಿಸುವುದು ಮೋದಿಜಿ ಭಾರತದ ಕನಸಾಗಿದೆ ಎಂದು ಜೈಶಂಕರ ಅವರು ಹೇಳಿದರು.


ಕೆಎಲ್‌ಇ ಸಂಸ್ಥೆ ಅಗಾಧವಾಗಿ ಬೆಳೆದಿದೆ:

ಕೇಂದ್ರ ಸಚಿವ ಡಾ.ಜೈಶಂಕರ ಅವರು ಮಾತನಾಡುತ್ತ, ಕೆಎಲ್‌ಇ ಸಂಸ್ಥೆಯು ಶಿಕ್ಷಣ ಆರೋಗ್ಯ ಸಂಶೋಧನಾ ಕ್ಷೇತ್ರದಲ್ಲಿ ಅಗಾಧವಾಗಿ ಸಾಧನೆ ಮಾಡಿದೆ. ಡಾ.ಪ್ರಭಾಕರ ಕೋರೆಯವರ ಹಾಗೂ ಅವರ ತಂಡದವರು ಚಿಕ್ಕೋಡಿಯನ್ನು ಬದಲಾಯಿಸಿದ್ದಾರೆ. ನಾನು ೪೫ ವರ್ಷ ನಂತರ ಇಲ್ಲಿ ಬಂದಿದ್ದೇನೆ. ಸಂತೋಷವೆನಿಸುತ್ತಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಏನೂ ಇರಲಿಲ್ಲ. ಇಂದು ಚಿಕ್ಕೋಡಿ ಶೈಕ್ಷಣಿಕವಾಗಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಬೆಳೆದುನಿಂತಿದೆ. ಇದರ ಹೆಮ್ಮೆ ಮತ್ತೊಂದಿಲ್ಲ. ಕೆಎಲ್‌ಇ ಜಾಗತಿಕವಾಗಿ ಇಂದು ಸಾಕಷ್ಟು ವಿಸ್ತರಿಸಿಕೊಂಡಿದೆ ಅದರ ಹಿಂದೆ ಕೋರೆಯವರ ಕನಸುಗಳು ಇಚ್ಛಾಶಕ್ತಿ ಅದ್ವಿತೀಯವೆಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಪ್ರಹ್ಲಾದ ಜೋಶಿಯವರು ಮಾತನಾಡಿ, ನಾನು ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿ. ಕೆಎಲ್‌ಇ ಕಾಲೇಜಿನ ಮೂಲಕ ಪದವಿಯನ್ನು ಪಡೆದು ಬೆಳೆದವನು. ಅಂದರೆ ಕೆಎಲ್‌ಇ ಸಂಸ್ಥೆಯು ಉತ್ತರ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ್ದರ ಫಲವಾಗಿ ಅಸಂಖ್ಯ ವಿದ್ಯಾರ್ಥಿಗಳ ಬದುಕನ್ನು ಅರಳಿಸಿತು. ಇಂದು ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಪ್ರಾರಂಭಿಸಿ ಹೊಸ ಕ್ರಾಂತಿಯನ್ನು ಹುಟ್ಟುಹಾಕಿದೆ. ಸಂಸ್ಥೆಯು ಡಾ.ಕೋರೆಯವರ ಸಾರಥ್ಯದಲ್ಲಿ ಹೆಮ್ಮರವಾಗಿ ಬೆಳೆದಿದೆ ಎಂದರು.


ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ,ಪುಟ್ಟ ಶಾಲೆಯಿಂದ ೧೯೧೬ ರಲ್ಲಿ ಸ್ಥಾಪನೆಗೊಂಡಕೆಎಲ್‌ಇ ಸಂಸ್ಥೆ ಇಂದು ೩೧೦ಅಂಗ ಸಂಸ್ಥೆಗಳನ್ನು ಮುನ್ನಡೆಸುತ್ತಿದೆ. ೧ ಲಕ್ಷ ೪೦ ಸಾವಿರದಷ್ಟು ವಿದ್ಯಾರ್ಥಿಗಳು ಕೆಎಲ್‌ಇ ಶಿಕ್ಷಣಕಾಶಿಯಲ್ಲಿ ಅಧ್ಯಯನದಲ್ಲಿತೊಡಗಿದ್ದಾರೆ. ದಾನಿಗಳು-ಮಹಾದಾನಿಗಳಿಂದ ಬೆಳೆದು ನಿಂತಿರುವಕೆಎಲ್‌ಇ ಸಂಸ್ಥೆ ಇಂದುಜಾಗತಿಕವಾಗಿ ವಿಸ್ತಿರಿಸಿಕೊಂಡಿದೆ. ಕೆಎಲ್‌ಇ ಸಂಸ್ಥೆಯು ಶಿಕ್ಷಣ-ಆರೋಗ್ಯ-ಸಂಶೋಧನೆಯ ಮೂಲಕ ಜಾಗತಿಕವಾಗಿ ವಿಸ್ತರಿಸಿದೆ. ಆಲೋಪತಿ-ಆಯುರ್ವೇದ-ಹೋಮಿಯೋಪಥಿ ಮೂರು ಚಿಕಿತ್ಸೆಗಳ ಮೂಲಕ ೪೫೦೦ ಹಾಸಿಗೆಗಳ ಬೃಹತ್ ಆರೋಗ್ಯಜಾಲವನ್ನು ಹೊಂದಿದೆ. ಬೆಳಗಾವಿಯಲ್ಲಿ ೩೦೦ ಹಾಸಿಗೆಗಳ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಸಿದ್ದಗೊಂಡಿದೆ. ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಕೆಎಲ್‌ಇ ಒಲಂಪಿಕ್ಸ್ದಲ್ಲಿ ಸಾಧನೆಗೆ ಅಣಿಯಾಗಲಿದೆ ಎಂದರು.


ಚಿಕ್ಕೋಡಿಯಲ್ಲಿ ಕೆಎಲ್‌ಇ ಆಂಗ್ಲ ಮಾಧ್ಯಮ ಶಾಲೆ ನೂತನ ಕಟ್ಟಡವು ಉದ್ಘಾಟನೆಗೊಳ್ಳುತ್ತಿರುವುದು ನಮ್ಮೆಲ್ಲರಿಗೂ ಹರ್ಷತಂದಿದೆ. ಇತಿಹಾಸದಲ್ಲಿ ಇಂದಿನ ದಿನ ಐತಿಹಾಸಿಕ ಹಾಗೂ ಸುವರ್ಣ ದಿನವೆಂದು ನಾನು ಭಾವಿಸಿದ್ದೇನೆ. ಗಡಿ ಭಾಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣಕ್ಕಾಗಿಯೇ ಕೆಎಲ್‌ಇ ಸಂಸ್ಥೆಯು ಅಂತರಾಷ್ಟ್ರೀಯ ಗುಣಮಟ್ಟದ ಆಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿರುವುದು ಹೆಮ್ಮೆತಂದಿದೆ ಎಂದು ತಿಳಿಸಿದರು.


ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಕೆಎಲ್‌ಇ ನಿರ್ದೇಶಕರಾದ ಡಾ.ವಿ.ಎಸ್.ಸಾಧುನವರ, ಚಿಕ್ಕೋಡಿ ಪುರಸಭೆ ಮಾಜಿ ಅಧ್ಯಕ್ಷರಾದ ಪ್ರವೀಣ ಕಾಂಬಳೆ, ಕೆಎಲ್‌ಇ ಕಾರ್ಯದರ್ಶಿ ಡಾ.ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು. ಡಾ.ಪ್ರಭಾಕರ ಕೋರೆಯವರು ಕೇಂದ್ರ ಸಚಿವ ಡಾ.ಎಸ್.ಜೈ ಶಂಕರ ಅವರಿಗೆ ಬಸವಣ್ಣನವರ ಬೆಳ್ಳಿಯ ಮೂರ್ತಿಯನ್ನು ನೀಡಿ ಸತ್ಕರಿಸಿದರು. ಕೆಎಲ್ಇ ನಿರ್ದೇಶಕರಾದ ವಿಶ್ವನಾಥ್ ಪಾಟೀಲ್, ಬಸವರಾಜ ಪಾಟೀಲ್, ಮಹಂತೇಶ್ ಕವಟಗಿಮಠ, ದಯಾನಂದ ಮುನವಳ್ಳಿ, ಎಸ್‌ ಸಿ ಮೆಟಗುಡ್‌, ವಾಯ್‌ ಎಸ್‌ ಪಾಟೀಲ ಉಪಸ್ಥಿತರಿದ್ದರು ಡಾಕ್ಟರ್ ವಿ ಎಸ್ ಸಾದುನವರ್ ಅಧ್ಯಕ್ಷತೆ ವಹಿಸಿದ್ದರು ಶಿಕ್ಷಕಿ ಜಿನಲ್ ಶಹಾ, ಗಂಗಾ ಅರಭಾವಿ ನಿರೂಪಿಸಿದರು. ಪ್ರಾಚಾರ್ಯ ಚೇತನ ಅಲವಾಡೆ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button