EducationKannada News

*KPSC ಪರೀಕ್ಷೆ ಮುಂದೂಡುವಂತೆ ಪ್ರತಿಭಟನೆ: 2.5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಸಿದ್ಧರಾಗಿರುವಾಗಲೇ ಧರಣಿ; ವಿದ್ಯಾರ್ಥಿಗಳ ಗುಂಪಿನಿಂದ ಲಾಬಿ ಯತ್ನ?*

ಸಿಎಂ ಅಪರ ಮುಖ್ಯಕಾರ್ಯದರ್ಶಿ ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ: ಆಗಸ್ಟ್ 27 ರಂದು ನಡೆಯಲಿರುವ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಯನ್ನು ಮುಂದೂಡಲು ಆಗ್ರಹಿಸಿ ಕೆಎಎಸ್ ಆಕಾಂಕ್ಷಿಗಳ ಸಣ್ಣ ಗುಂಪೊಂದು ಲಾಬಿ ನಡೆಸುತ್ತಿದೆ. ಎಲ್ಲಾ ರೀತಿಯಲ್ಲಿ ಒತ್ತಡ ಹೇರಲು ಈ ಗುಂಪು ಯತ್ನಿಸುತ್ತಿದೆ. KPSC, DPAR ಮತ್ತು CMOನ ಎಲ್ಲಾ ಪ್ರಮುಖ ಅಧಿಕಾರಿಗಳಿಗೆ ಕರೆ ಮಾಡುತ್ತಿದ್ದಾರೆ ಮತ್ತು ವಾಟ್ಸಾಪ್ ಸಂದೇಶಗಳ ಸುರಿಮಳೆ ಸುರಿಸುತ್ತಿದ್ದಾರೆ. ಎಷ್ಟರಮಟ್ಟಿಗೆ ಎಂದರೆ ಕೆಲವೊಮ್ಮೆ ನನ್ನ ಫೋನ್ ಅನ್ನು ನಾನು ಏರೋಪ್ಲೇನ್ ಮೋಡ್‌ನಲ್ಲಿ ಇಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದು ಮುಖ್ಯಮಂತ್ರಿಗಳ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ ಅತೀಕ್ ತಿಳಿಸಿದ್ದಾರೆ.

“ಕೆಪಿಎಸ್‌ಸಿ ಸುತ್ತಾ ಅನುಮಾನಗಳ ಹುತ್ತ! ಎಂಬಂತಹ ಪದಗಳನ್ನು ಬಳಸಿ ಸಾಕಷ್ಟು ತಪ್ಪು ಮಾಹಿತಿ ಹರಡಿ ಹಗರಣ ನಡೆದಿದೆ ಎಂಬಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ.

KPSC ಅಥವಾ ಸರ್ಕಾರವು ನೀಡಿರುವ ಹೆಚ್ಚುವರಿ ಅವಕಾಶ ಮತ್ತು ವಯೋಮಿತಿ ಸಡಿಲಿಕೆಯನ್ನು ಪಡೆದ ಸುಮಾರು ಈ 1500 ವಿದ್ಯಾರ್ಥಿಗಳ (ವಯೋಮಿತಿ ಸಡಿಲಿಕೆ ನೀಡಿದ ನಂತರ ತಡವಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ) ಈ ಲಾಬಿಗೆ ಮಣಿದರೆ ಸುಮಾರು 2.5 ಲಕ್ಷಕ್ಕೂ ಹೆಚ್ಚು ಅರ್ಜಿದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ ಮತ್ತು ಅನ್ಯಾಯವನ್ನು ಎದುರಿಸಬೇಕಾಗುತ್ತದೆ. ಯಾಕೆಂದರೆ, ಈ 2.5 ಲಕ್ಷ ಅಭ್ಯರ್ಥಿಗಳು ಪೂರ್ಣ ಸಿದ್ಧತೆ ನಡೆಸಿದ್ದಾರೆ, ಪರೀಕ್ಷಾ ಕೇಂದ್ರಗಳಿಗೆ ಬರಲು ತಮ್ಮ ಪ್ರಯಾಣದ ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ. ಹಾಗಾಗಿ ಕೆಳಗಿನ ಸಂಗತಿಗಳನ್ನು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ‌:

  1. ಫೆಬ್ರುವರಿ 25ರ ಅಧಿಸೂಚನೆಯ ಪ್ರಕಾರ ಪೂರ್ವಭಾವಿ ಪರೀಕ್ಷಾ ದಿನಾಂಕವನ್ನು ಮೇ 05 ರಂದು ನಿಗದಿಪಡಿಸಲಾಗಿತ್ತು. ಆದರೆ, ಮೇ 7ರಂದು ಚುನಾವಣೆ ಇರುವ ಕಾರಣದಿಂದಾಗಿ ಜುಲೈ 21ಕ್ಕೆ ಮುಂದೂಡಲಾಗಿತ್ತು. (ಆರಂಭದಲ್ಲಿ ಜುಲೈ 7ರಂದು ನಡೆಸಲು ತೀರ್ಮಾನಿಸಲಾಗಿತ್ತು ಆದರೆ ಆ ದಿನ UPSC ಪರೀಕ್ಷೆಯೊಂದಕ್ಕೆ ಘರ್ಷಣೆಯಾಗುತ್ತೆ ಎಂಬ ಕಾರಣದಿಂದಾಗಿ ಜುಲೈ 21ಕ್ಕೆ ಬದಲಾಯಿಸಲಾಗಿತ್ತು)
  2. ⁠2017-18ರ ವಯೋಮಿತಿ ನಿರ್ಬಂಧಿತ ಅಭ್ಯರ್ಥಿಗಳಿಗೆ ಹೆಚ್ಚುವರಿಯಾಗಿ ಅವಕಾಶ ನೀಡಲು ಜೂನ್ 21ರಂದು ಸರ್ಕಾರಿ ಆದೇಶವನ್ನು ಪ್ರಕಟಿಸಲಾಗಿತ್ತು. ಈ ರೀತಿ ವಯೋಮಿತಿ ನಿರ್ಬಂಧಿತರಿಗೆ ಅವಕಾಶ ನೀಡಿದ್ದರಿಂದ ಪರೀಕ್ಷೆಯ ದಿನಾಂಕವನ್ನು ಆಗಸ್ಟ್ 25ಕ್ಕೆ ನಡೆಸುವುದಾಗಿ ಜೂನ್ 26ರ ರಂದು ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿತ್ತು.
  3. ಜುಲೈ 6 ರ ಹೊತ್ತಿಗೆ 2017-18 ಬ್ಯಾಚ್‌ನಿಂದ ಅಪ್ಲಿಕೇಶನ್‌ಗಳನ್ನು ಸ್ವೀಕರಿಸಲು ಸರಳವಾಸ ಸಾಫ್ಟ್‌ವೇರ್‌ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಮತ್ತು ಅರ್ಜಿ ಸ್ವೀಕರಿಸಲು ಜುಲೈ 21 ಕೊನೆಯ ದಿನವಾಗಿತ್ತು. ಈ ಅವಧಿಯಲ್ಲಿ ಸುಮಾರು 1560 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.
  4. ಜುಲೈ 1ರಂದು IBPS ದಿನಾಂಕಗಳ ಅಧಿಸೂಚನೆಯನ್ನು ಪ್ರಕಟಿಸಲಾಗಿತ್ತು. (ಅವರ ತಾತ್ಕಾಲಿಕ ದಿನಾಂಕಗಳನ್ನು ಜನವರಿಯಲ್ಲಿ ಘೋಷಿಸಲಾಗಿತ್ತಾದರೂ ವೆಬ್‌ಸೈಟ್‌ಗಳಲ್ಲಿ ಅಥವಾ ಆನ್‌ಲೈನ್‌ನಲ್ಲಿ ನಮಗೆ ಯಾವುದೇ ಮಾಹಿತಿ ಅಥವಾ ದೃಢೀಕರಣ ಲಭ್ಯವಾಗಿಲ್ಲ).
  5. ⁠ಗೌರವಾನ್ವಿತ ಮುಖ್ಯಮಂತ್ರಿಯವರ ಕಚೇರಿಯಲ್ಲಿ ನಡೆದ ಚರ್ಚೆಯ ಬಳಿಕ ಆಗಸ್ಟ್ 25ರಂದು ನಡೆಯುವ ಪರೀಕ್ಷೆಯನ್ನು ಮುಂದೂಡಿರುವ ಕುರಿತು ಸಿಎಂ‌ ರವರು ಆಗಸ್ಟ್ 3ರಂದು ಟ್ವೀಟ್ ಮಾಡಿದ್ದಾರೆ. ಆಗಸ್ಟ್ 5ರಂದು ಆಯೋಗವು ಒಂದೇ ಅಜೆಂಡಾದ ಮೂಲಕ ಪರೀಕ್ಷೆ ನಡೆಯಬೇಕಿದ್ದ ಅದೇ ವಾರದಲ್ಲಿ ಅಂದರೆ, ಆಗಸ್ಟ್ 27ರಂದು ಪರೀಕ್ಷೆ ನಡೆಸಲು ನಿರ್ಧಾರ ತೆಗೆದುಕೊಂಡಿದೆ. ಯಾಕೆಂದರೆ ಆಗಸ್ಟ್ 27ರಂದು ಬೇರೆ ಯಾವುದೇ ಪರೀಕ್ಷೆಗಳನ್ನು ನಿಗದಿಪಡಿಸಲಾಗಿಲ್ಲ. ಆದ್ದರಿಂದ ಪರೀಕ್ಷೆ ನಡೆಸಬೇಕಿದ್ದ ಈ ವಾರದಲ್ಲಿಯೇ ಪರೀಕ್ಷೆ ನಡೆಸಲು ಆಯೋಗ ನಿರ್ಧರಿಸಿದೆ.

ಈ ಪ್ರಕ್ರಿಯೆಯ ವೇಳೆ, ಸಾಕಷ್ಟು ಸಮಯವನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ ಎಂಬ ಅಂಶವು ತುಂಬಾ ಸ್ಪಷ್ಟವಾಗಿದ್ದು, “ಕೆಪಿಎಸ್‌ಸಿ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿದೆ” ಎಂದು ಹೇಳಲು ಯಾವುದೇ ಆಧಾರವಿಲ್ಲ.

ಮುಂದಿನ 2 ತಿಂಗಳವರೆಗೆ ಯಾವುದೇ ಭಾನುವಾರಗಳು ಖಾಲಿ ಇಲ್ಲದ ಕಾರಣದಿಂದಾಗಿ ಕೆಲಸದ ದಿನಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲು ಸಾಕಷ್ಟು ತಯಾರಿ ನಡೆಸಲಾಗಿದೆ. ಪತ್ರಿಕೆಗಳ ಮುದ್ರಣಕ್ಕೆ ಸುಮಾರು 4-5 ಕೋಟಿ ಖರ್ಚಾಗುತ್ತದೆ. 2 ತಿಂಗಳು ಮುಂದೂಡಿ ಎಂದರೆ ಮುದ್ರಿತ ಪತ್ರಿಕೆಗಳನ್ನು ನಾಶಪಡಿಸಿ ಹೊಸ ಪತ್ರಿಕೆಗಳನ್ನು ಮುದ್ರಿಸಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಾಗುವ ಅಪಾಯವಿರುವುದರಿಂದ ಪೇಪರ್‌ಗಳನ್ನು ಹೆಚ್ಚು ಸಮಯ ಇಡುವಂತಿಲ್ಲ.

ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಲಾಬಿ ನಡೆಸುತ್ತಿರುವ ವಿದ್ಯಾರ್ಥಿಗಳ ಸಣ್ಣ ಗುಂಪಿನ ಬಗ್ಗೆ ಮತ್ತು ಸತ್ಯವನ್ನು ಪರಿಶೀಲಿಸಲು ಮಾಧ್ಯಮಗಳು ಮುಂದಾಗಬೇಕು ಎಂದು ನಾನು‌ ಆಗ್ರಹಿಸುತ್ತೇನೆ ಎಂದು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಗಳು ಎಲ್.ಕೆ.ಅತೋಕ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button