Kannada NewsKarnataka NewsLatest

*ಪತ್ರಕರ್ತನಾಗಿದ್ದ ದಿನ ನೆನಪಿಸಿಕೊಂಡ ಶಾಸಕ ಪ್ರದೀಪ್ ಈಶ್ವರ್; ಪತ್ರಿಕೆ ಹಾಕುತ್ತಾ ಸಂಪಾದಕನಾಗಿ, ಶಾಸಕನಾದ ದಿನ ನೆನೆದ ರವಿ ಗಣಿಗ*

ಸುದ್ದಿಮನೆಯಿಂದ ಬೆಳೆದ ಶಾಸಕರು ಮಾಧ್ಯಮ ಸಂಯೋಜಕರುಗಳಿಗೆ ಕೆಯುಡಬ್ಲ್ಯೂಜೆ ಅಭಿನಂದನೆ

ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿದ್ದು ಶಾಸಕರಾದ ರವಿಕುಮಾರ್ ಗೌಡ ಗಣಿಗ ಮತ್ತು ಪ್ರದೀಪ್ ಈಶ್ವರ್ ಹಾಗೂ ಮಾಧ್ಯಮ ಸಂಯೋಜಕರಾಗಿರುವ ವೃತ್ತಿ ಬಾಂಧವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ವತಿಯಿಂದ ಗೌರವಿಸಲಾಯಿತು.

ಸುದ್ದಿಮನೆಯಿಂದ ವಿಧಾನಸೌದದ ವರೆಗೆ ಕಾರ್ಯಕ್ರಮದಡಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ
ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಸುದ್ದಿಮನೆಯಲ್ಲಿ ಕೆಲಸ ಮಾಡಿ ಸದ್ಯ ಮಾಧ್ಯಮ ಸಂಯೋಜಕರಾಗಿ ಮತ್ತು ನಾನಾ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಇದೇ ಮೊದಲ ಬಾರಿಗೆ ಕೆಯುಡಬ್ಲ್ಯೂಜೆ ಗೌರವಿಸುತ್ತಿದೆ ಎಂದರು.

ನಾನೂ ಪತ್ರಕರ್ತನಾಗಿದ್ದೆ:

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಒಬ್ಬ ಪತ್ರಕರ್ತನಿಗೆ ಏನೆಲ್ಲ ಸವಾಲು ಇದೆ ಎನ್ನುವುದು ನಾನು ವೃತ್ತಿ ಮಾಡುವಾಗ ಅನುಭವಕ್ಕೆ ಬಂತು. ಚಿಕ್ಕಬಳ್ಳಾಪುರದಲ್ಲಿ ಲೋಕಲ್ ಟಿವಿ ಮಾಡಿದಾಗ ಅನುಭವಕ್ಕೆ ಬಂತು. ನಾನೆ ಸುದ್ದಿ ಸಂಪಾದಿಸಿ ನಾನೇ ಎಡೆಟಿಂಗ್ ಮಾಡಿ ನಾನೇ ಸುದ್ದಿ ವಾಚನ ಮಾಡಬೇಕಾಗಿತ್ತು ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡರು.

ವ್ಯಕ್ತಿಗೆ ಬದ್ದತೆ ಇದ್ದರೆ ಮತ್ತು ಪರಿಶ್ರಮ ಹಾಕಿದರೆ ಯಾವ ಸವಾಲಿನ ಕೆಲಸ ಮಾಡುವುದು ಅಸಾಧ್ಯವಲ್ಲ ಎನ್ನುವುದು ಸಾಭೀತು ಮಾಡಲು ದೇವರು ನನಗೆ ಅವಕಾಶ ನೀಡಿದ. ನಿಮ್ಮ ಶ್ರಮ ಹಾಕಿದರೆ ಖಂಡಿತವಾಗಿ ಸಾಧಕರಾಗವುದಕ್ಕೆ ಸಾಧ್ಯವಿದೆ ಎಂದರು.

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನನಗೆ ಯಾವ ರಾಜಕೀಯ ಹಿನ್ನಲೆ ಇಲ್ಲ, ಆರ್ಥಿಕ ಬಲ ಇರಲಿಲ್ಲ. ನನ್ನ ಗುರುತಿಸಿ ಟಿಕೆಟ್ ನೀಡಿದ್ದರಿಂದ ನನ್ನ ತಂದೆ ತಾಯಿ ಮಾಡಿದ ಒಳ್ಳೇತನದಿಂದ ನನ್ನ ಗೆಲವು ಸಾಧ್ಯವಾಯಿತು ಎಂದರು.

‘ಇಂದು‌ ನಮ್ಮ ಪರಿಶ್ರಮ ಅಕಾಡೆಮಿಯಿಂದ 900 ವೈದ್ಯ ಸೀಟು ಸಿಗುವಲ್ಲಿ ನೆರವಾಗಿದೆ. ನಾನು ಪವರ್ ಫುಲ್ ಪೊಲಿಟಿಕಲ್ ಲೀಡರ್ ಅಲ್ಲ ಪವರ್ ಫುಲ್ ಟೀಚರ್ ಅಂತ ಹೆಮ್ಮಯಿಂದ ಹೇಳುತ್ತೇನೆ. ಪತ್ರಕರ್ತರು ರಾಜಕೀಯ ವ್ಯಕ್ತಿಗಳ ಬಗ್ಗೆ ವಿಶ್ಲೇಷಣೆ ನಡೆಸಲಿ, ಟೀಕೆ ಮಾಡಲಿ. ಆದರೆ ವೈಯುಕ್ತಿಕ ತೇಜೋವಧೆ ಮಾಡದಿದ್ದರೆ ಒಳಿತು’ ಎಂದು ಪ್ರದೀಪ್ ಈಶ್ವರ್ ಹೇಳಿದರು.

ಪತ್ರಿಕೆ ಹಾಕುತ್ತಾ ಪತ್ರಕರ್ತನಾದೆ:

ಶಾಸಕರಾದ ರವಿ ಗಣಿಗ ಅವರು ಮಾತನಾಡಿ, ಮಾಧ್ಯಮ ಕ್ಷೇತ್ರಕ್ಕೆ ಬಂದಿದ್ದು ಆಕಸ್ಮಿಕ. ಬದ್ದತೆಯಿಂದ ಕೆಲಸ ಮಾಡಿದ್ದು ಈ ಹಂತದ ತನಕ ಬೆಳೆಸಿದೆ. ನಾನು ಕೂಡ ಕೆಯುಡಬ್ಲ್ಯೂಜೆ ಸದಸ್ಯನಾಗಿದ್ದವನು. ಇದೇ ವೇದಿಕೆಯಲ್ಲಿ ಸನ್ಮಾನಿಸುತ್ತಿರುವುದು ಅಭಿಮಾನದ ಸಂಗತಿ ಎಂದು ಹೇಳಿದರು.

ನಾನು ಪತ್ರಿಕೋದ್ಯಮದಲ್ಲಿ ಪತ್ರಿಕೆ ಹಾಕುತ್ತಾ, ವರದಿಗಾರ, ಸಂಪಾದಕ ಹೀಗೆ ವಿವಿಧ ಹುದ್ದೆಗಳನ್ನು ನಿಭಾಯಿಸಿ ರಾಜಕೀಯಕ್ಕೆ ಬಂದು ಇಂದು ಶಾಸಕನಾಗಿ ಬಂದಿದ್ದೇನೆ ಎಂದರು.

ಪತ್ರಕರ್ತರ ಬೇಡಿಕೆಗೆ ಬದ್ದ:

ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಅವರು ಎಲ್ಲರನ್ನೂ ಅಭಿನಂದಿಸಿ ಮಾತನಾಡಿ, ಕೆಯುಡಬ್ಲ್ಯೂಜೆ ಉತ್ತಮ ಕೆಲಸ ಮಾಡುತ್ತಿದೆ. ಶಿವಾನಂದ ಅವರ ಬದ್ದತೆಯನ್ನು ನಾನು ಗಮನಿಸಿದ್ದೇನೆ. ಪತ್ರಕರ್ತರ ಬೇಡಿಕೆ ಈಡೇರಿಸಲು ಅವರಿಗೆ ಸಹಕಾರ ನೀಡಿ ನಿಮ್ಮೆಲ್ಲರ ಶಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದರು.

ಉಪಮುಖ್ಯಮಂತ್ರಿ ಮಾಧ್ಯಮ ಸಂಯೋಜಕ ಪಿ.ತ್ಯಾಗರಾಜ್ ಸುಧೀರ್ಘವಾಗಿ ತಮ್ಮ ಪತ್ರಕರ್ತರ ಅನುಭವವನ್ನು ಹಂಚಿಕೊಂಡರು. ತಮ್ಮ ಈ ಜವಾಬ್ದಾರಿ ನಿಭಾಯಿಸುವ ಸಂದರ್ಭದಲ್ಲಿ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ತಮ್ಮ ಕೈಲಾದ ಸಹಕಾರ ನೀಡುವುದಾಗಿ ತಿಳಿಸಿದರು.

ಕೆಯುಡಬ್ಲ್ಯುಜೆ ಸಂಘದ ನಿಧಿಯನ್ನು ತಮ್ಮ ಅವಧಿಯಲ್ಲಿ ಒಂದು ಕೋಟಿ ರೂ. ತನಕ ಸಂಗ್ರಹ ಮಾಡುವ ಗುರಿಯಿದೆ. ಶಾಸಕ ಪ್ರದೀಪ್ ಈಶ್ವರ್ ನಡೆಸುವ ಪರಿಶ್ರಮ ಅಕಾಡೆಮಿಯಲ್ಲಿ ಅರ್ಹ ಪತ್ರಕರ್ತರ ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಅಕಾಡೆಮಿಯಿಂದ ರಿಯಾಯಿತಿ ನೀಡುವಂತೆ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ್ ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿದ ಪ್ರದೀಪ್ ಈಶ್ವರ್, ಖಂಡಿತವಾಗಿ ಈ ಬಗ್ಗೆ ಸಹಕರಿಸುವುದಾಗಿ ಹೇಳಿದ್ದಲ್ಲದೆ, ಇಡೀ ರಾಜ್ಯದಲ್ಲಿ ಒಬ್ಬರೇ ಫೋಷಕರಿರುವ ಪತ್ರಕರ್ತರ ಮಕ್ಕಳಿಗೆ ಕೆಯುಡಬ್ಲ್ಯುಜೆಯಿಂದ ಶೈಕ್ಷಣಿಕವಾಗಿ ಸಹಾಯ ಮಾಡುವಾಗ ಅದಕ್ಕೆ ತಾವೂ ಕೈಜೋಡಿಸುವುದಾಗಿ ಭರವಸೆ ನೀಡಿದರು.

ಮಾಧ್ಯಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿರುವ ಪಿ.ತ್ಯಾಗರಾಜ್, ಬಿ.ಎನ್.ಶ್ರೀಧರ್, ಸೋಮಶೇಖರ್ ಕೆರೆಗೋಡು, ಗಿರೀಶ್ ಕೋಟೆ, ಎಸ್.ಲಕ್ಷ್ಮಿನಾರಾಯಣ, ಟಿ.ಎಂ.ಸತೀಶ್, ನಾಗರಾಜ್, ಲಕ್ಷ್ಮಣ್, ದೀಪಕ್ ಕರಡೆ, ರಘುನಾಥ್, ಅ.ನಾ.ಪ್ರಹ್ಲಾದರಾವ್ ಅವರನ್ನೂ ಸನ್ಮಾನಿಸಲಾಯಿತು.

ಕಾರ್ಯಕ್ರಮ ದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಸ್ವಾಗತಿಸಿದರು. ಖಜಾಂಚಿ ಎಂ.ವಾಸುದೇವ ಹೊಳ್ಳ ವಂದಿಸಿದರು. ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ್ ಹಾಜರಿದ್ದರು.

ಸಮಾರಂಭದಲ್ಲಿ ಹಿರಿಯ ಪತ್ರಕರ್ತರಾದ ಶೇಷಚಂದ್ರಿಕ, ಈಶ್ವರ ದೈತೋಟ, ಭಾರತೀಯ ಕಾರ್ಯನಿರತ ಒಕ್ಕೂಟದ ಅಧ್ಯಕ್ಷರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯ ಸಮಿತಿ ಸದಸ್ಯರಾದ ವಿ.ಮುನಿರಾಜು, ಸೋಮಶೇಖರ ಗಾಂಧಿ, ಕೆ.ಆರ್.ದೇವರಾಜ್, ನಗರ ಘಟಕದ ಅಧ್ಯಕ್ಷ ಕೆ.ಸತ್ಯನಾರಾಯಣ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರೇಕಟ್, ಖಜಾಂಚಿ ಎ.ಬಿ.ಶಿವರಾಜ್,
ಚಿಕ್ಕಬಳ್ಳಾಪುರ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಂ, ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್, ವಿಜಯಪುರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್. ಪಿ.ಕುಲಕರ್ಣಿ, ವಿಜಯಪುರದ ರಶ್ಮಿ ಪಾಟೀಲ, ಶೋಭ, ಮುಂತಾದವರು ಭಾಗವಹಿಸಿದ್ದರು.

ಕೆಯುಡಬ್ಲ್ಯೂಜೆ ಸಭಾಂಗಣದಲ್ಲಿ ನಡೆದ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಕಿಕ್ಕಿರಿದ ಸಭಾಂಗಣ ಸಾಕ್ಷಿಯಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button