Kannada NewsKarnataka News

ಆಸ್ಪತ್ರೆಗಳ ಭದ್ರತಾ ಲೋಪ : ಜಿಲ್ಲಾಡಳಿತದ ಗಮನ ಸೆಳೆದ ಬೆಳಗಾವಿ ಎಸ್ಪಿ

ಪ್ರಗತಿವಾಹಿನಿ ಸುದ್ದಿ, ಅಥಣಿ –  ಬುಧವಾರ ಅಥಣಿಯ ತಾಲೂಕು ಆಸ್ಪತ್ರೆಯಿಂದ ಶಿಶುವೊಂದನ್ನು ಅಪಹರಿಸಿದ ಪ್ರಕರಣ ಆಸ್ಪತ್ರೆಗಳಲ್ಲಿನ ಭದ್ರತಾ ವ್ಯವಸ್ಥೆ ಕುರಿತು ಹಲವು ಸಂಶಯಗಳನ್ನು ಹುಟ್ಟುಹಾಕಿದೆ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಸ್ವತಃ ಪ್ರಸ್ತಾಪಿಸಿ, ಜಿಲ್ಲಾಡಳಿತದ ಗಮನ ಸೆಳೆದಿದ್ದಾರೆ. ಅಥಣಿಯಲ್ಲಿ ಶಿಶು ಅಪಹರಣ ಪ್ರಕರಣ ಪೊಲೀಸರ ಸಕಾಲಿಕ ಕ್ರಮದಿಂದಾಗಿ ಸುಖಾಂತ್ಯ ಕಂಡಿದೆ. ಆದರೆ ಪ್ರಕರಣಕ್ಕೆ ಕಾರಣ ಆಸ್ಪತ್ರೆಯಲ್ಲಿನ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದನ್ನು ಎಸ್ಪಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಸಂಬಂಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನ ಸೆಳೆದಿರುವುದಾಗಿ ಅವರು ತಿಳಿಸಿದ್ದಾರೆ. ಭದ್ರತಾ ವ್ಯವಸ್ಥೆಯ ಲೋಪ ಕೇವಲ ಅಥಣಿಯ ಆಸ್ಪತ್ರೆಗೆ ಸೀಮಿತವಾಗಿಲ್ಲ ಎನ್ನುವುದನ್ನೂ ಸೂಚ್ಯವಾಗಿ ಹೇಳಿದ್ದಾರೆ.

ಅಥಣಿ ಆಸ್ಪತ್ರೆಯಲ್ಲಿ ಬುಧವಾರ ಶಿಶು ಅಪಹರಣ ಎಷ್ಟು ಸಲೀಸಾಗಿ ನಡೆದಿತ್ತೆಂದರೆ ಯಾವುದೋ ಮಹಿಳೆ ಬಂದು ಅನಾಮತ್ತಾಗಿ ನವಜಾತ ಶಿಶುವನ್ನು ಎತ್ತಿಕೊಂಡು ಹೋದರೂ ಹೇಳಕೇಳುವವರಿರಲಿಲ್ಲ. ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು, ಏನನ್ನು ಬೇಕಾದರೂ ಎತ್ತಿಕೊಂಡು ಹೋಗಬಹುದು ಎನ್ನುವುದಕ್ಕೆ ಈ ಘಟನೆ ತಾಜಾ ಉದಾಹರಣೆಯಂತಿದೆ.

Home add -Advt

ಒಳಗೆ ಬರುವವರ, ಹೊರಗೆ ಹೊಗುವವರ ಮೇಲೆ ನಿಗಾ ಇಡುವ ವ್ಯವಸ್ಥೆಯೇ  ಅಲ್ಲಿಲ್ಲ. ಸಂತೆಯಲ್ಲಿ ಜನರು ಬಂದು ಹೋಗುವಂತೆ ಆಸ್ಪತ್ರೆಗೆ, ಅದರಲ್ಲೂ ಹೇರಿಗೆ ವಾರ್ಡ್ ಗೆ ಬಂದು ಹೋಗುತ್ತಾರೆ.

ಇದು ಅಥಣಿ ಆಸ್ಪತ್ರೆಗೆ ಸೀಮಿತವಾಗಿಲ್ಲ. ಜಿಲ್ಲಾಸ್ಪತ್ರೆಯಿಂದ ಹಿಡಿದು ಜಿಲ್ಲೆಯ ಬಹುತೇಕ ಎಲ್ಲ ಆಸ್ಪತ್ರೆಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಂತಹ ಪ್ರಕರಣ ಮರುಕಳಿಸಬಾರದೆಂದರೆ ಸಿಸಿಟಿವಿ ಕ್ಯಾಮರಾ ವ್ಯವಸ್ಥೆ ಸುಧಾರಿಸಬೇಕು, ಆಸ್ಪತ್ರೆಗೆ ಬರುವವರ ಮತ್ತು ಹೊರಗೆ ಹೋಗುವವರ ದಾಖಲಾತಿ ವ್ಯವಸ್ಥೆಯಾಗಬೇಕು ಎಂದು ಎಸ್ಪಿ ತಿಳಿಸಿದ್ದಾರೆ.

ಜಿಲ್ಲಾಡಳಿತ ತುರ್ತಾಗಿ ಈ ಬಗ್ಗೆ ಗಮನಹರಿಸಬೇಕಿದೆ. ಶಿಶು ಅಪಹರಣದಂತಹ ಪ್ರಕರಣಗಳು ಈ ಹಿಂದೆ ಕೂಡ ನಡೆದಿದ್ದವು. ಆದರೆ ಊಭದ್ರತಾ ವ್ಯವಸ್ಥೆ ಬಲಪಡಿಸುವ ಕೆಲಸವಾಗಿಲ್ಲ. ಈಗಲಾದರೂ ಈ ಬಗ್ಗೆ ಕ್ರಮವಾಗಬೇಕಿದೆ.

ಅಥಣಿ ಆಸ್ಪತ್ರೆಯಿಂದ ನವಜಾತ ಗಂಡು ಶಿಶು ಕಳ್ಳತನ; ಕೆಲವೇ ಗಂಟೆಯಲ್ಲಿ ಶಿಶು, ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು

https://pragati.taskdun.com/belgaum-news/newborn-baby-boy-stolen-from-athani-hospital-the-police-took-the-baby-and-the-woman-into-custody-within-a-few-hours/

Related Articles

Back to top button