Kannada NewsKarnataka News

ಚಂದ್ರಶೇಖರ ಶಿವಾಚಾರ್ಯರು ಸಕ್ರಿಯ ರಾಜಕಾರಣಕ್ಕೆ ಬರಲಿ

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ: ಹುಕ್ಕೇರಿ ಹಿರೇಮಠದಿಂದ ೯ ದಿನಗಳ ಕಾಲ ಹುಕ್ಕೇರಿ ಪಟ್ಟಣದಲ್ಲಿ ನಡೆಯುವ ದಸರಾ ಉತ್ಸವಕ್ಕೆ ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ಥರಿಗೆ ಧನ ಸಹಾಯ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಸಾಮಾಜಿಕ ಕಳಕಳಿಯಿಂದ ಉತ್ತರ ಕರ್ನಾಟಕದ ಪ್ರವಾಹಕ್ಕೆ ಸಿಲುಕಿ ಮನೆಗಳನ್ನ ಕಳೆದುಕೊಂಡ ೪೨ ಗ್ರಾಮಗಳ ೧೨೦ ಕುಟುಂಬಗಳನ್ನ ಗುರುತಿಸಿ ಆರ್ಥಿಕ ಹಾಗೂ ಬಟ್ಟೆಗಳನ್ನ ನೀಡಿ ಹುಕ್ಕೇರಿ ಹಿರೇಮಠದಿಂದ ಸಹಾಯ ಮಾಡುವದರ ಮೂಲಕ ಇತರೆ ಮಠಗಳಿಗೂ ದಸರಾ ಉತ್ಸವ ಮಾದರಿಯಾಯಿತು.

ಪ್ರವಾಹದ ಹಿನ್ನೆಲೆಯಲ್ಲಿ ಸರಳವಾಗಿ ಈ ಬಾರಿ ದಸರಾ ಉತ್ಸವನ್ನ ಆಚರಣೆ ಮಾಡಲಾಗುತ್ತಿದೆ. ಉತ್ಸವಕ್ಕೆ ಮಾಜಿ ಶಾಸಕ ಉಮೇಶ ಕತ್ತಿ ಚಾಲನೆ ನೀಡಿದರು. ದಸರಾ ಉತ್ಸವದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ಪ್ರವಾಹದ ಹಿನ್ನೆಯಲ್ಲಿ ಸರಳ ದಸರಾ ಆಚರಣೆ ಮಾಡಲಾಗುತ್ತಿದೆ. ಸಂತ್ರಸ್ಥರಿಗೆ ಸಹಾಯ ಮಾಡುವದರ ಹುಕ್ಕೇರಿ ಹಿರೇಮಠ ಧರ್ಮವನ್ನ ಆಚರಣೆ ಮಾಡುತ್ತಿದೆ ಎಂದರು.

ಮೈಸೂರು ದಸರಾ ಸರಕಾರದ ದಸರಾ, ಹುಕ್ಕೇರಿ  ದಸರಾ ಸಹಕಾರದ ದಸರಾ

ಸಂತ್ರಸ್ಥರ ನೋವಿಗೆ ಭಾಗಿ

ವಿರೋಧ ಪಕ್ಷಗಳು ನೆರೆ ಪರಿಹಾರ ವಿತರಣೆಯಲ್ಲಿ ಬಿಜೆಪಿ ಸರಕಾರ ಎಡವಿದೆ ಎನ್ನುವುದು ಸರಿಯಲ್ಲ. ಸಂತ್ರಸ್ಥರಿಗೆ ಉಂಟಾಗಿರುವ ಹಾನಿ ಸಮೀಕ್ಷೆ, ಪರಿಶೀಲನೆಯ ನಂತರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೋಳ್ಳಬೇಕು. ಇದು ಗೊತ್ತಿದ್ದರೂ ಅಪಪ್ರಚಾರ ಮಾಡುತ್ತಿರುವುದು ವಿಷಾದನಿಯ ಸಂಗತಿ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.
ನಮ್ಮ ಪಕ್ಷ ಅಥವಾ ಬೇರೆ ಪಕ್ಷದ ಸರ್ಕಾರ ಆಡಳಿತದಲ್ಲಿರಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಅದರ ವಿರುದ್ಧ ಧ್ವನಿ ಎತ್ತುವ ಕಾರ್ಯ ಮಾಡುತ್ತಾ ಬಂದಿರುವೆ. ಆದರೆ ತಾಂತ್ರಿಕ ಮತ್ತು ಸೈದ್ಧಾಂತಿಕವಾಗಿ ಆಗಬೇಕಾದ ಕಾರ್ಯ ಗಮನಿಸಿ ಸರಕಾರ ವಿಫಲವಾದಾಗ ಖಂಡಿಸಬೇಕೆಂದು ವಿರೋಧ ಪಕ್ಷಗಳಿಗೆ ಚುಚ್ಚಿದರು.
ನೆರೆ ಸಂತ್ರಸ್ಥರಿಗೆ ಆರಂಭಿಕವಾಗಿ ೧೦ ಸಾವಿರ ರೂಗಳನ್ನು ವಿತರಿಸಿದೆ. ಕುಸಿದ ಮನೆಗಳ ನಿರ್ಮಾಣಕ್ಕೆ ಪಾಯಾ ಭರಣಾ ಮಾಡಲು ೧ ಲಕ್ಷ ರೂ ಬಿಡುಗಡೆ ಮಾಡಲಾಗುತ್ತಿದೆ. ಹಂತ ಹಂತವಾಗಿ ಒಟ್ಟು ೫ ಲಕ್ಷ ರೂ ಅವರಿಗೆ ನೆರವು ಒದಗಿಸುವುದು ನಿಶ್ಚಿತ. ಜತೆಗೆ ಸರಕಾರವೇ ಎಲ್ಲ ಕಾರ್ಯ ಮಾಡಬೇಕು ಎಂದು ಹೇಳುವುದಕ್ಕಿಂತ ಸಹಕಾರದಿಂದ ನಿರಾಶ್ರ್ರಿತರಿಗೆ ಬದುಕಿನ ಭರವಸೆ ತುಂಬಬೇಕಾದ ಕರ್ತವ್ಯ ಎಲ್ಲರದ್ದಾಗಿದೆ ಎಂದರು.

ಶ್ರೀ ಮಠದಿಂದ ಪ್ರತಿ ವರ್ಷ ಅದ್ದೂರಿ ದಸರಾ ಉತ್ಸವ ಮಾಡುತ್ತಿದ್ದೆವು. ಆದರೆ ನಮ್ಮ ಭಾಗದಲ್ಲಿ ಈ ಬಾರಿ ಆಗಿರುವ ಅತಿವೃಷ್ಠಿ ಹಾಗೂ ಕಳೆದ ವರ್ಷ ಮಡಿಕೇರಿ, ಮಂಗಳೂರು, ಹಾಸನದಲ್ಲಿ ಆದ ಮಳೆ ಹಾನಿಗಾಗಿ ಮಾನವೀಯ ದೃಷ್ಟಿಯಿಂದ ಶ್ರೀಗಳ ಆಶಯದಂತೆ ಎರಡು ವರ್ಷವೂ ಅದ್ದೂರಿ ಉತ್ಸವಕ್ಕೆ ತೆರೆ ಎಳೆದು ಸಂತ್ರಸ್ಥರ ನೋವಿಗೆ ಭಾಗಿಯಾಗುತ್ತಿದ್ದೇವೆ ಎಂದು ಅವರು ಹೇಳಿದರು.

ದೇಶ ವಿದೇಶದಲ್ಲಿ ಹುಕ್ಕೇರಿ ಪಟ್ಟಣದ ಹೆಸರು

ಶಿಕ್ಷಣ ಇಲಾಖೆ ಧಾರವಾಡ ವಿಭಾಗದ ಅಪರ ಆಯುಕ್ತ ಮೇಜರ ಸಿದ್ದಲಿಂಗಯ್ಯಾ ಹಿರೇಮಠ ಅವರು ಸಮಾರಂಭ ಉದ್ಘಾಟಿಸಿ ಮಾತನಾಡುತ್ತಾ ಪರಿಸರ ವೈಪರೀತ್ಯ ತಡೆಯಲು ಮತ್ತು ಜನರ ಆರೋಗ್ಯಕ್ಕೆ ಮಾರಕವಾದ ಪ್ಲ್ಯಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಪ್ಲ್ಯಾಸ್ಟಿಕ್ ಮುಕ್ತ ಭಾರತ ಅಭಿಯಾನ ಪ್ರಾರಂಭಿಸಿರುವ ಶ್ರೀಮಠದ ಚಂದ್ರಶೇಖರ ಶಿವಾಚಾರ್ಯರ ಕಾರ್ಯ ನಿಜಕ್ಕೂ ಸಾಮಾಜಿಕ ಕಳಕಳಿಗೆ ನಿದರ್ಶನವೆಂದರು. ಇದರ ಜತೆಗೆ ಪ್ರವಾಹ ಸಂತ್ರಸ್ಥರಲ್ಲಿ ಬದುಕಿನ ಭರವಸೆ ತುಂಬುವ ನಿಟ್ಟಿನಲ್ಲಿ ಅವರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಶ್ರೀಮಠ ಸಾಮಾಜಿಕ, ಧಾರ್ಮಿಕ, ಶೈಕ್ಷಣೀಕ, ಆರೋಗ್ಯ ಕ್ಷೇತ್ರದಲ್ಲಿ ಕೈಗೊಂಡ ಹಲವಾರು ವಿಧಾಯಕ ಕಾರ್ಯಗಳಿಂದ ದೇಶ ವಿದೇಶದಲ್ಲಿ ಹುಕ್ಕೇರಿ ಪಟ್ಟಣದ ಹೆಸರು ಬೆಳಗುವಂತೆ ಮಾಡಿದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯರನ್ನಾಗಿಸಲಿ

ವಿಧಾನ ಪರಿಷತ್ ಸದಸ್ಯ ಎಂ.ಸಿ.ವೇಣುಗೋಪಾಲ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರ ಕಾರ್ಯ ಜಿಲ್ಲೆಗೆ ಸೀಮಿತವಾಗದೇ ನಾಡಿಗೆ ಅವಶ್ಯವಿದೆ. ಅವರು ಸಕ್ರೀಯ ರಾಜಕೀಯಕ್ಕೆ ಬರಬೇಕು. ಕಾರಣ ಇವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಲು ೮ ಬಾರಿ ಆಯ್ಕೆಯಾಗಿರುವ ಶಾಸಕ ಹಿರಿಯ ರಾಜಕಾರಣಿ ಉಮೇಶ ಕತ್ತಿ ಅವರು ಮುಂದಾಗಬೇಕು. ಅವರ ಕಾರ್ಯಕ್ಕೆ ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಲು ಸಿದ್ದ ಎಂದರು.

ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ, ಶಾಸಕ ಆನಂದ ಮಾಮನಿ, ದುರ್ಯೋಧನ ಐಹೊಳೆ ಅವರು ಮಾತನಾಡಿ, ಶ್ರೀಮಠ ಸಾಮಾಜಿಕ ಕಳಕಳಿಗೆ ಹೆಸರಾಗಿದೆ. ಇವರ ಕಾರ್ಯವನ್ನು ನಾಡಿನ ಎಲ್ಲ ಜನತೆ ಮೆಚ್ಚುತ್ತದೆ ಎಂದರು. ಕಟಕೋಳ-ಎಂ.ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯರು ಸಾನಿಧ್ಯ ವಹಿಸಿ ಮತ್ತು ಶ್ರೀ ಮಠದ ಪೀಠಾಧಿಪತಿ ಚಂದ್ರಶೇಖರ ಶಿವಾಚಾರ್ಯರು ನೇತೃತ್ವ ವಹಿಸಿ ಆಶೀರ್ವಚನ ನೀಡಿದರು.

ಸಮಾರಂಭದಲ್ಲಿ ಶಿಕ್ಷಣ ಇಲಾಖೆಯ ಚಿಕ್ಕೋಡಿ ಶೈಕ್ಷಣೀಕ ಜಿಲ್ಲಾ ಡಿಡಿಪಿಐ ಮೋಹನ ಹಂಚಾಟೆ, ಬೆಳಗಾವಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ವಲಯಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮನ್ವಯ ಅಧಿಕಾರಿಗಳು, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ತಾಲೂಕಾಡಳಿತದ ಎಲ್ಲ ಇಲಾಖೆಗಳ ಅಧಿಕಾರಿಗಳು, ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಚೇರಮನ್ ಮಹಾವೀರ ನಿಲಜಗಿ, ಬಿಜೆಪಿ ಮಂಡಲ ಅಧ್ಯಕ್ಷ ಪರಗೌಡ ಪಾಟೀಲ, ಪುರಸಭೆ ಸದಸ್ಯರು ಸೇರಿದಂತೆ ಮತ್ತಿತರರು ವೇದಿಕೆಯಲ್ಲಿದ್ದರು. ಶ್ರೀಶೈಲ ಹಿರೇಮಠ ಸ್ವಾಗತಿಸಿದರು. ಸಿ.ಎಂ.ದರಬಾರೆ ನಿರೂಪಿಸಿ ವಂದಿಸಿದರು

ನೆರೆ ಸಂತ್ರಸ್ಥರಿಗೆ ಕಿಟ್

ಬೆಳಿಗ್ಗೆ ತಹಸೀಲ್ದಾರ ರೇಷ್ಮಾ ತಾಳಿಕೋಟೆ ಅವರು ಧರ್ಮ ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಯುಕ್ತವಾಗಿ ದಸರಾ ಮಹೋತ್ಸವ ಪ್ರಾರಂಭಗೊಂಡಿತು. ಮಹೋತ್ಸವದ ಮಹಾಮಂಟಪವನ್ನು ಶಾಸಕ ಆನಂದ ಮಾಮನಿ, ಗೋ ಮಂಟಪವನ್ನು ಶಾಸಕ ದುರ್ಯೋಧನ ಐಹೊಳೆ ಉದ್ಘಾಟಿಸಿದರು. ನಂತರ ಆಯ್ದ ನೆರೆ ಸಂತ್ರಸ್ಥರಿಗೆ ಕಿಟ್ ಮತ್ತು ತಲಾ ೧ ಸಾವಿರ ರೂಗಳನ್ನು ಶ್ರೀಮಠದಿಂದ ವಿತರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button