Latest

NPS ರದ್ದು ಸೇರಿದಂತ ವಿವಿಧ ಶೈಕ್ಷಣಿಕ ಸಮಸ್ಯೆ ಚರ್ಚೆಗೆ ಸಭೆ ಕರೆಯುವಂತೆ ಸಿಎಂಗೆ ಹೊರಟ್ಟಿ ಪತ್ರ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಶಿಕ್ಷಣ ಇಲಾಖೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಉನ್ನತ ಶಿಕ್ಷಣ ಸಚಿವರೊಂದಿಗೆ ದಿನಾಂಕ:  ೨೩-೦೮-೨೦೨೧ರಂದು ಹಾಗೂ ದಿ:೧೧-೧೦-೨೦೨೧ರಂದು ಬಸವರಾಜ ಹೊರಟ್ಟಿ ಅಧ್ಯಕ್ಷತೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರುಗಳು ವಿಸ್ತೃತವಾಗಿ ಚರ್ಚಿಸಿದ ನಂತರ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಎಲ್ಲ ವಿಧಾನ ಪರಿಷತ್ ಸದಸ್ಯರುಗಳ, ಹಣಕಾಸು ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆ ಕರೆಯುವದು ಅವಶ್ಯವಿದೆ ಎಂದು ವಿಧಾನಪರಿಷತ್ ಸಭಾಪತಿ, ಶಿಕ್ಷಣ ಇಲಾಖೆಯ ಮಾಜಿ ಸಚಿವ ಬಸವರಾಜ ಹೊರಟ್ಟಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಸಭೆಯಲ್ಲಿ ಕೆಲವು  ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳ ಬೇಕಾಗಿದೆ. ಹಾಗಾಗಿ ಸಭೆಯ ದಿನಾಂಕವನ್ನು ನಿಗದಿಪಡಿಸಬೇಕು ಎಂದು ಕೋರಿದ್ದಾರೆ.

೧. ೧೯೯೪-೯೫ನೇ ಸಾಲಿನ ನಂತರ ಪ್ರಾರಂಭಿಸಿದ ಕನ್ನಡ ಮಾಧ್ಯಮ ಶಾಲಾ ಕಾಲೇಜುಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸುವದು.
೨೦೦೬ ಮತ್ತು ೨೦೦೭ ರಲ್ಲಿ ಬಿ.ಜೆ.ಪಿ. ಮತ್ತು ಜೆ.ಡಿ.ಎಸ್. ಸಮ್ಮಿಶ್ರ ಸರಕಾರ ಇದ್ದಾಗ ಹಣಕಾಸಿನ ಸಚಿವರು ಹಾಗೂ ಉಪಮುಖ್ಯಮಂತ್ರಿಗ ಬಿ.ಎಸ್.ಯಡಿಯೂರಪ್ಪನವರು ದಿನಾಂಕ: ೦೧-೦೪-೧೯೮೭ ರಿಂದ ೧೯೯೪-೯೫ ರ ವರೆಗೆ ಎಲ್ಲ ಅನುದಾನ ರಹಿತ ಕನ್ನಡ ಮಾಧ್ಯಮದ ಪ್ರಾಥಮಿಕ ಪ್ರೌಢ ಶಾಲೆಗಳು ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳನ್ನು ವೇತನಾನುದಾನಕ್ಕೆ ಒಳಪಡಿಸಿ ಅದನ್ನು ಬಜೆಟ್ಟಿನಲ್ಲಿ ಮಂಡಿಸಲು ಅನುದಾನವನ್ನು ವಿಸ್ತರಿಸುವ ಕೆಲಸವನ್ನು ಮೊಟ್ಟ ಮೊದಲು ಸರಕಾರದಲ್ಲಿ ತೀರ್ಮಾನ ಮಾಡಿ ಸುಮಾರು ೩೦ ಸಾವಿರ ಕುಟುಂಬಗಳಿಗೆ ಬದುಕಲು ಅನುಕೂಲ ಮಾಡಿ ನಂತರ ಪ್ರತಿ ವರುಷ ಹಂತ ಹಂತವಾಗಿ ಸದರಿ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಲು ಆಯವ್ಯಯದಲ್ಲಿ ಒದಗಿಸಲಾಯಿತು. ಆದರೆ ಅದು ಇನ್ನೂ ಕಾರ್ಯಗತವಾಗಿಲ್ಲ. ತದನಂತರ ಮತ್ತೆ  ಯಡಿಯೂರಪ್ಪನವರು ಮುಖ್ಯಮಂತ್ರಿಯಾದಾಗ ಶಾಸಕರುಗಳ ಸಭೆಯಲ್ಲಿ ೧೯೯೫ ರಿಂದ ೨೦೦೦ ರ ವರೆಗೆ ವಿಸ್ತರಿಸಲು ಆ ಸಭೆಯಲ್ಲಿ ಒಪ್ಪಿದ್ದರು. ಕಾರಣಾಂತರಗಳಿಂದ ಅದು ಆಗಲಿಲ್ಲ. ಇದು ವಾಸ್ತವದ ಸಂಗತಿ. ಇದರಲ್ಲಿ ಉತ್ತರ ಕರ್ನಾಟಕದ ಸಂಸ್ಥೆಗಳೇ ಹೆಚ್ಚಿಗೆ ಇರುತ್ತವೆ ಅನ್ನುವದು ವಾಸ್ತವದ ಸಂಗತಿಯಾದ್ದರಿಂದ ಸರಕಾರ ಮಾಡುವ ಕೆಲಸವನ್ನು ಖಾಸಗಿ ಸಂಸ್ಥೆಗಳು ವಿದ್ಯಾದಾನದ ಜೊತೆಗೆ ಅನ್ನದಾನ ಮಾಡುತ್ತಿರುವ ಈ ಸಂಸ್ಥೆಗಳಿಗೆ ಸಾಕಷ್ಟು ತೊಂದರೆಯಾದದ್ದರಿಂದ ಇವುಗಳ ಬಗ್ಗೆ ಒಂದು ತೀರ್ಮಾನ ತೆಗೆದುಕೊಂಡು ಅನುದಾನ ವಿಸ್ತರಿಸಿದರೆ ಹಂತ ಹಂತವಾಗಿ ಈ ಸಂಸ್ಥೆಗಳು ಬದುಕುತ್ತವೆ ಅನ್ನುವದನ್ನು ನಾನು ನಿಮಗೆ ಸವಿಸ್ತಾರವಾಗಿ ಮಾಹಿತಿ ಕೊಟ್ಟಿರುವೆ.
೨. ಕಾಲ್ಪನಿಕ ವೇತನ ಕುರಿತು.
ನನ್ನ ನೇತೃತ್ವದ ವಿಧಾನ ಪರಿಷತ್ ಸದಸ್ಯರ ಸಮಿತಿಯು ನೀಡಿದ ವರದಿಯನ್ನು ಸರಕಾರ ಒಪ್ಪಿಕೊಂಡು ೨೦೨೨-೨೩ನೇ ಸಾಲಿನಲ್ಲಿ ಅನುದಾನ ಒದಗಿಸುವ ಬಗ್ಗೆ. – ದಿನಾಂಕ: ೦೧-೦೪-೨೦೦೬ರ ನಂತರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿದ ಹಾಗೂ ಅನುದಾನಕ್ಕೊಳಪಟ್ಟ ಸಿಬ್ಬಂದಿಯವರಿಗೆ ಆಡಳಿತ ಮಂಡಳಿಗಳು ತುಂಬಬೇಕಾದ ಶೇಕಡಾ ೧೦ ರಷ್ಟು ವಂತಿಗೆಯನ್ನು ತುಂಬದೇ ಇರುವದರಿಂದ ಇವರಿಗೆ ಪಿಂಚಣಿ ಸೌಲಭ್ಯ ಇರುವದಿಲ್ಲ. ಅದರಂತೆ ಆಡಳಿತ ಮಂಡಳಿಗಳ ವಂತಿಗೆಯನ್ನು ೧೯೮೬ ರಿಂದ ಇಲ್ಲಿಯವರೆಗೆ ಸರಕಾರವೇ ತುಂಬುತ್ತಿತ್ತು ಅದರಂತೆ ಮುಂದುವರೆಸುವ ಆದೇಶ ಹೊರಡಿಸುವದು.
೩. ಹಳೆ ಪಿಂಚಣಿ ಜಾರಿಗೊಳಿಸುವ ಕುರಿತು.
ದಿನಾಂಕ: ೦೧-೦೪-೨೦೦೬ ರ ನಂತರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಹೊಂದಿದ ಹಾಗೂ ಅನುದಾನಕ್ಕೊಳಪಟ್ಟ ಸಿಬ್ಬಂದಿಯವರಿಗೆ ಆಡಳಿತ ಮಂಡಳಿಗಳು ತುಂಬಬೇಕಾದ ಶೇಕಡಾ ೧೦ ರಷ್ಟು ವಂತಿಗೆಯನ್ನು ತುಂಬದೇ ಇರುವದರಿಂದ ಇವರಿಗೆ ಪಿಂಚಣಿ ಸೌಲಭ್ಯ ಇರುವದಿಲ್ಲ. ಅದರಂತೆ ಆಡಳಿತ ಮಂಡಳಿಗಳ ವಂತಿಗೆಯನ್ನು ೧೯೮೬ ರಿಂದ ಇಲ್ಲಿಯವರೆಗೆ ಸರಕಾರವೇ ತುಂಬುತ್ತಿತ್ತು ಅದರಂತೆ ಮುಂದುವರಿಸುವ ಆದೇಶ ಹೊರಡಿಸುವದು. ದಿನಾಂಕ: ೦೧-೦೪-೨೦೦೬ ರ ನಂತರ ಹಳೆ ಪಿಂಚಣಿ ಸ್ಕೀಮನ್ನು ರದ್ದು ಮಾಡಿ ಹೊಸ ಪಿಂಚಣಿ ಸ್ಕೀಮನ್ನು ಜಾರಿಯಲ್ಲಿ ಭಾರತ ದೇಶದಲ್ಲಿಯೇ ತರಲಾಯಿತು. ಪಶ್ಚಿಮ ಬಂಗಾಲ ಮತ್ತು ತ್ರಿಪುರಾದಲ್ಲಿ ಮಾತ್ರ ಹಳೆಯ ಪಂಚಣಿ ಸೌಲಭ್ಯವಿದೆ. ಈಗ ಕೇರಳ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಕೆಲ ಸಭೆಗಳಾಗಿ ಇದಕ್ಕೊಂದು ದಾರಿ ಹುಡುಕಲು ಪ್ರಯತ್ನಿಸುತ್ತಿದ್ದಾರೆಂದು ತಿಳಿದು ಬಂದಿದೆ. ತಾವು ಅಲ್ಲಿಂದ ಮಾಹಿತಿ ಪಡೆಯಬಹುದು. ನಮ್ಮ ರಾಜ್ಯದಲ್ಲಿ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ದಿನಾಂಕ: ೦೧-೦೪-೨೦೦೬ ರ ನಂತರ ನೇಮಕಾತಿ ಹೊಂದಿದವರು ಇದರಿಂದ ವಂಚಿರಾಗಿದ್ದಾರೆ. ಇದು ಸರಕಾರಿ ನೌಕರರಿಗೂ ಹಾಗೂ ಅನುದಾನಿತ ನೌಕರರಿಗೂ ಅನ್ವಯವಾಗುತ್ತದೆ. ಇದರಲ್ಲಿ ಪ್ರಮುಖವಾದ ವಿಷಯವೆಂದರೆ ನಾನು ಹಿಂದಿನ ವಿಷಯದಲ್ಲಿ ಪ್ರಸ್ತಾಪಿಸಿದಂತೆ ಆಡಳಿತ ಮಂಡಳಿಗಳು ನಡೆಸುತ್ತಿರುವ ಸಂಸ್ಥೆಗಳ ನೌಕರರಿಗೆ ಅವರ ಪಾಲಿನ ವಂತಿಗೆಯನ್ನು ಆಡಳಿತ ಮಂಡಳಿಗಳೇ ತುಂಬಬೇಕೆಂದು ಶರತ್ತನ್ನು ಹಾಕಿದ್ದರಿಂದ ಈಗಿನ ಕಾಲದಲ್ಲಿ ಸಂಸ್ಥೆಗಳನ್ನು ನಡೆಸುವದೇ ಕಷ್ಟವಾದ್ದರಿಂದ ಯಾವ ಆಡಳಿತ ಮಂಡಳಿಗಳು ಈ ವಂತಿಗೆಯನ್ನು ತುಂಬಿಲ್ಲವಾದ್ದರಿಂದ ಇವರು ಮುಂದೆ ನಿವೃತ್ತಿಯಾಗುವಾಗ ಇವರಿಗೆ ನಿವೃತ್ತಿ ವೇತನ ಸಹ ಒಮ್ಮೊಮ್ಮೆ ಸಿಗುವದು ಕಷ್ಟವಾಗುತ್ತದೆ. ಕೆಲ ಶಿಕ್ಷಕರು ತಮ್ಮ ಸರಕಾರದಿಂದ ತುಂಬುವಂತಹ ಪ್ರಕರಮಗಳು ಸಹ ನಡೆದಿವೆ. ಹೀಗಾಗಿ ೧೯೮೫ರ ಸರಕಾರದ ಆದೇಶದಂತೆ ಶೇಕಡಾ ೧೦ ರಷ್ಟು ವಂತಿಗೆಯನ್ನು ಸರಕಾರವೇ ತುಂಬಬೇಕು ಸರಕಾರ ಮಾಡುವ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿರುವದರಿಂದ ಇದು ಸರಕಾರದ ಕರ್ತವ್ಯವಾಗಿದೆಯಾದ್ದರಿಂದ ಆಡಳಿತ ಮಂಡಳಿಗಳು ತುಂಬಬೇಕಾದ ಶೇಕಡಾ ೧೦ ರಷ್ಟು ವಂತಿಗೆಯನ್ನು ಹಿಂದಿನಂತೆ ಸರಕಾರವೇ ತುಂಬಬೇಕೆಂದು ನಾನು ಈ ಮೂಲಕ ಒತ್ತಾಯಿಸುತ್ತೇನೆ. ಇದು ಎಲ್ಲರ ಸಮಸ್ಯೆಯಾದ್ದರಿಂದ ಇದಕ್ಕೆ ತಾವು ಹೆಚ್ಚು ಮುತುವರ್ಜಿ ವಹಿಸುತ್ತೀರೆಂದು ಭಾವಿಸಿರುವೆ.
೪. ಪದವಿಪೂರ್ವ ಕಾಲೇಜುಗಳಲ್ಲಿ ಬಿ.ಇಡಿ, ಪದವಿ ಪಡೆದ ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವದು.
ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳಿಗೆ ಬಿ.ಇಡಿ. ಕಡ್ಡಾಯಗೊಳಿಸಿದ ನಂತರ ಬಿ.ಇಡಿ. ಪದವಿಯನ್ನು ಪಡೆದ ಉಪನ್ಯಾಸಕರುಗಳ ನೇಮಕಾತಿಗಳನ್ನು ವೇತನಾನುದಾನಕ್ಕೆ ಒಳಪಡಿಸುವ ವಿಷಯಕ್ಕೆ ಸಂಬAಧಿಸಿದAತೆ ಇನ್ನು ಬಾಕಿ ಇರುವ ಸುಮಾರು ೩೦ ಜನ ಉಪನ್ಯಾಸಕರುಗಳ ನೇಮಕಾತಿಗಳನ್ನು ವೇತನಾನುದಾನಕ್ಕೆ ಒಳಪಡಿಸುವದು ಕೋವಿಡ್ ಕಾರಣದಿಂದ ತಡೆಹಿಡಿಯಲಾಗಿದ್ದು ಕೂಡಲೇ ವೇತನಾನುದಾನಕ್ಕೆ ಒಳಪಡಿಸಲು ಕ್ರಮ ವಹಿಸಬೇಕಾಗಿದೆ.
೫. ೧೯೯೪-೯೫ರವರೆಗೆ ಪ್ರಾರಂಭಿಸಿದ ಪರಿಶಿಷ್ಟ ಜಾತಿ/ಜನಾಂಗಗಳ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸಿದ್ದು, ಸಾಮಾನ್ಯ ಆಡಳಿತ ಮಂಡಳಿಗಳ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.
೬. ೧೯೮೫-೮೭ರವರೆಗೆ ಪಾರಂಭಿಸಿದ ಖಾಸಗಿ ಪಾಲಿಟೆಕ್ನಿಕ್‌ಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.

ಇಂದಿನಿಂದಲೇ ನೈಟ್ ಕರ್ಫ್ಯೂ ರದ್ದು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button