Karnataka NewsLatest

ಮಹಾದಾಯಿ: ಒತ್ತಡ ತರಲು ರಾಜೀನಾಮೆಗೂ ಸಿದ್ಧರಾಗಿ

 ಗಡಿವಿವಾದ: ಮುಖ್ಯಮಂತ್ರಿಗಳು ಸುವರ್ಣ ಸೌಧದಲ್ಲೇ ಉನ್ನತ ಮಟ್ಟದ ಸಭೆ ಕರೆಯಲಿ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಗಡಿವಿವಾದ ಮತ್ತು ಮಹಾದಾಯಿ ವಿವಾದ ಸಂಬಂಧ ಇಂದು ಶುಕ್ರವಾರ ಜನೇವರಿ 10 ರಂದು ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದಲ್ಲಿ  ಮಠಾಧೀಶರ ಸಾನಿಧ್ಯದಲ್ಲಿ  ಚಿಂತನ ಸಭೆ ನಡೆಯಿತು.
  ಗದಗದ ತೋಂಟದಾರ್ಯ ಮಠದ ಜಗದ್ಗುರುಗಳಾದ ಡಾ.ಸಿದ್ದರಾಮ ಮಹಾಸ್ವಾಮಿಗಳು ಹಾಗೂ ಮುಂಬಯಿ ಕರ್ನಾಟಕದ ಏಳು ಜಿಲ್ಲೆಗಳ ಇಪ್ಪತ್ತಕ್ಕೂ ಅಧಿಕ ಮಠಾಧೀಶರ ಸಾನಿಧ್ಯದಲ್ಲಿ ನಡೆದ ಈ ಸಭೆಯು ಮಹಾದಾಯಿ ವಿವಾದ ಇತ್ಯರ್ಥವಾಗದೇ ಇರುವದಕ್ಕೆ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳನ್ನೇ ಹೊಣೆಗಾರರನ್ನಾಗಿ ಮಾಡಿತು.
             ಮಹಾದಾಯಿ ವಿವಾದವು ಕಗ್ಗಂಟಾಗಲು ರಾಜಕೀಯ  ಮುಖಂಡರ ಅನಾಸಕ್ತಿ ಮತ್ತು ಇಚ್ಛಾಶಕ್ತಿಯ ಕೊರತೆಯೇ ಕಾರಣವಾಗಿದ್ದು ಜನಪರ ಹೋರಾಟದಿಂದ ಮಾತ್ರ ಕೇಂದ್ರದ ಮೇಲೆ ಒತ್ತಡ ತರಲು ಸಾಧ್ಯವೆಂದು ಸಭೆಯಲ್ಲಿ ಮಾತನಾಡಿದ ಪ್ರಮುಖರು ಅಭಿಪ್ರಾಯಪಟ್ಟರು.
         ಮಹಾದಾಯಿ ನ್ಯಾಯಮಂಡಳಿಯು ತನ್ನ ತೀರ್ಪು ನೀಡಿ 17 ತಿಂಗಳಾದವು. ಇನ್ನೂ ಕೇಂದ್ರವು ಅಧಿಸೂಚನೆ ಪ್ರಕಟಿಸಿಲ್ಲ. ಸದ್ಯ ಮೇಲ್ಮನವಿಗಳು ಸುಪ್ರೀಮ್ ಕೋರ್ಟ ಮುಂದಿವೆ. ನ್ಯಾಯಾಲಯದಲ್ಲಿ ಇತ್ಯರ್ಥ ಆಗಲು ವಿಳಂಬವಾಗಬಹುದು. ಪ್ರಧಾನಿ ಅವರು ಕರ್ನಾಟಕ ಮತ್ತು ಗೋವೆ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಹ್ವಾನಿಸಿ ವಿವಾದವನ್ನು ಬಗೆಹರಿಸಬೇಕು.ಪ್ರಧಾನಿ ಮೇಲೆ ಒತ್ತಡ ತರಲು ರಾಜ್ಯದ 28 ಸಂಸದರು ಹಾಗೂ ಮುಂಬಯಿ ಕರ್ನಾಟಕದ ಕೇಂದ್ರ ಸಚಿವರು ಅಗತ್ಯ ಬಿದ್ದರೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲೂ ಸಹ ಸಿದ್ಧರಾಗಬೇಕು ಎಂದು ಸಭೆಯು ಆಗ್ರಹಿಸಿತು.
         ನೆರೆಯ ಮಹಾರಾಷ್ಟ್ರವು ಮತ್ತೆ ಗಡಿವಿವಾದವನ್ನು ಕೆದಕುವ ಮೂಲಕ ಗಡಿಭಾಗದಲ್ಲಿಯ ಭಾಷಾ ಸೌಹಾರ್ದವನ್ನು ಹಾಳು ಮಾಡಲು ಯತ್ನಿಸುತ್ತಿದೆ. ಇಂಥ ಸಂದರ್ಭದಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ” ಬೆಳಗಾವಿಯ ಒಂದು ಇಂಚೂ ನೆಲವನ್ನೂ  ಬಿಟ್ಟು ಕೊಡುವದಿಲ್ಲ” ಎಂಬ ಹೇಳಿಕೆಯನ್ನು ಕೊಡುವದನ್ನು ಬಿಟ್ಟು ಗಡಿಭಾಗದ ಕನ್ನಡಿಗರಿಗೆ ಬಲತುಂಬುವ ಕೆಲಸಕ್ಕೆ ಮುಂದಾಗಬೇಕು. ಗಡಿಗೆ ಸಂಬಂಧಿಸಿದ ಗಡಿ ಸಂರಕ್ಷಣಾ ಆಯೋಗ ಮತ್ತು ಗಡಿ ಅಭಿವೃದ್ಧಿ ಪ್ರಾಧಿಕಾರಗಳನ್ನು ಬೆಳಗಾವಿಯ ಸುವರ್ಣ ಸೌಧಕ್ಕೆ ಸ್ಥಳಾಂತರಿಸಬೇಕು. ಈ ಸಂಬಂಧ ಚರ್ಚಿಸಲು ಮುಖ್ಯಮಂತ್ರಿಗಳು ಸುವರ್ಣ ಸೌಧದಲ್ಲೇ ಉನ್ನತ ಮಟ್ಟದ ಸಭೆಯನ್ನು ಕರೆಯಬೇಕು ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು.
         ರೈತ ನಾಯಕ ಸಿದಗೌಡ ಮೋದಗಿ, ಕಳಸಾ ಬಂಡೂರಿ ಹೋರಾಟಗಾರ ವಿಜಯ ಕುಲಕರ್ಣಿ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಸಿದ್ದನಗೌಡ ಪಾಟೀಲ ಮುಂತಾದವರು ಮಾತನಾಡಿದರು.
       ನಾಗನೂರು ಮಠದ ಕಿರಿಯ ಸ್ವಾಮೀಜಿ ಡಾ.ಅಲ್ಲಮಪ್ರಭು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂದಿನ ಸಭೆಯ ನಿರ್ಣಯಗಳನ್ನು ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ , ಕೇಂದ್ರ ಮಂತ್ರಿಗಳಾದ ಸುರೇಶ ಅಂಗಡಿ ಮತ್ತು ಪ್ರಲ್ಹಾದ ಜೋಶಿ ಅವರಿಗೆ ಕಳಿಸಿಕೊಡಲು ತೀರ್ಮಾನಿಸಲಾಗಿದೆ.
ಮುಂದಿನ ಬೆಳವಣಿಗೆಗಳನ್ನು ನೋಡಿಕೊಂಡು ಮುಂದಿನ ಕ್ರಮಗಳನ್ನು ಕೈಕೊಳ್ಳಲಾಗುವದೆಂದು ತೋಂಟದಾರ್ಯ ಜಗದ್ಗುರುಗಳು ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.
ಯಾವುದೇ ರಾಜಕಾರಣಿಗಳನ್ನು ಸಭೆಗೆ ಆಹ್ವಾನಿಸಿರಲಿಲ್ಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button