Belagavi NewsBelgaum NewsKannada NewsKarnataka NewsPolitics

*ಬೈಲಹೊಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅತ್ಯಧಿಕ ಮುನ್ನಡೆ ಖಚಿತ: ಶಾಸಕ ಮಹಾಂತೇಶ್ ಕೌಜಲಗಿ*

ಕಾಂಗ್ರೆಸ್ ಅಭ್ಯರ್ಥಿ ಮೃಣಾಲಹೆಬ್ಬಾಳಕರ್ ಪರ ಅಬ್ಬರದ ಪ್ರಚಾರ

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಪಕ್ಷದ ‌ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರಿಗೆ ಮತ ಹಾಕಿದರೆ ನನಗೆ ಮತ ಹಾಕಿದಂತೆ, ಬೈಲಹೊಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುನ್ನಡೆ ಖಚಿತ ಎಂದು ಶಾಸಕ ಮಹಾಂತೇಶ್ ಕೌಜಲಗಿ ವಿಶ್ವಾಸ ವ್ಯಕ್ತಪಡಿಸಿದರು.

ಬೈಲಹೊಂಗಲ ವಿಧಾನಸಭಾ ವ್ಯಾಪ್ತಿಯ ಯಕ್ಕುಂಡಿ, ಬಡ್ಲಿ‌ ಹಾಗೂ ಬೈಲಹೊಂಗಲ ಪಟ್ಟಣದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಶಾಸಕರು, ಈ ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದರು.

ಕಳೆದ 10‌ ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ‌ಆಡಳಿತ‌ ನಡೆಸುತ್ತಿದ್ದು, ಬಡವರ,‌ ದೀನ ದಲಿತರ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳು ಮನೆ ಮನೆಗೆ ತಲುಪುತ್ತಿವೆ. ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರವನ್ನು ಮತ್ತಷ್ಟು ಬಲಪಡಿಸಬೇಕು ಎಂದು‌ ಶಾಸಕರು ಕರೆ ನೀಡಿದರು.

ಶೆಟ್ಟರ್ ಹುಬ್ಬಳ್ಳಿಗೆ, ಮೃಣಾಲ್‌ ದೆಹಲಿಗೆ
ಇದೇ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳ್ಕರ್ ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸೋಣ, ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಿ ಮನೆಗೆ ಕಳುಹಿಸೋಣ ಎಂದು ಕರೆ ನೀಡಿದರು. ಮೃಣಾಲ್‌ ಹೆಬ್ಬಾಳ್ಕರ್ ಗೆದ್ದರೆ, ನನ್ನ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಜಿಲ್ಲೆಯ ಎಲ್ಲ ಶಾಸಕರ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದಾನೆ.‌ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸು‌ ಹೊಂದಿದ್ದಾನೆ ಎಂದು ಹೇಳಿದರು.

ಭ್ರಷ್ಟ ಬಿಜೆಪಿ ಸರ್ಕಾರ, ಕೋವಿಡ್ ವೇಳೆ ಜನರ ರಕ್ತ ಹೀರಿತ್ತು. ಇದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮಹಾಜನತೆ ಬಿಜೆಪಿಗೆ ತಕ್ಕ ಉತ್ತರ ನೀಡಿದ್ದರು. ಈ ಚುನಾವಣೆಯಲ್ಲೂ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಹೇಳಿದರು. ಕಳೆದ ಅವಧಿಯಲ್ಲಿ 40 ಪರ್ಸೆಂಟ್ ತಿಂದು ಮನೆಯಲ್ಲಿ ಕುಳಿತಿರುವ ಬಿಜೆಪಿಗರು ಸುಖಾಸುಮ್ಮನೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು‌ ಆರೋಪಿಸಿದರು. ಬಿಜೆಪಿ ಅವಧಿಯ ಭ್ರಷ್ಟಾಚಾರಕ್ಕೆ ನಲುಗಿ ಸಂತೋಷ ಪಾಟೀಲ್ ಎಂಬ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಭ್ರಷ್ಟಾಚಾರಕ್ಕೆ ಇದಕ್ಕಿಂತ ಇನ್ನೊಂದು ಉದಾಹರಣೆ ಬೇಕೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಸರ್ಕಾರದಿಂದ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಲಾಭ ಆಗುತ್ತಿದೆ. ಇದನ್ನು ಸಹಿಸದ ಬಿಜೆಪಿಯವರು ಲೋಕಸಭೆ ಆದ್ಮೇಲೆ ಗ್ಯಾರಂಟಿ ಯೋಜನೆಗಳು ಬಂದ್ ಆಗಲಿವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಿಜೆಪಿಯವರು ಮೋದಿ ನೋಡಿ ವೋಟ್ ಹಾಕಿ, ಶೆಟ್ಟರ್ ನೋಡ್ಬೇಡಿ ಅಂತ ಹೇಳ್ತಿದ್ದಾರೆ ಎಂದು ಸಚಿವರು ಟೀಕಿಸಿದರು. ಕಾಂಗ್ರೆಸ್ ಪಕ್ಷ ಎಂದರೆ ಬದ್ದತೆ ಹೊಂದಿರುವ ಪಕ್ಷ, ಶೆಟ್ಟರ್ ಅವರನ್ನು‌ ವಾಪಸ್ ಹುಬ್ಬಳ್ಳಿಗೆ, ಮೃಣಾಲ್‌ ದೆಹಲಿಗೆ ಕಳುಹಿಸೋಣ ಎಂದು ಕರೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕ್ ಪಾಟೀಲ್, ಮಹಾಂತೇಶ ಮತ್ತಿಕೊಪ್ಪ, ಗ್ರಾಮ ಪಂಚಾಯತ್ ಅಧ್ಯಕ್ಷ ಚಿದಂಬರ ಆಡಿನ್, ಯಲ್ಲನಗೌಡ ಪಾಟೀಲ, ಅನಿಲ ಮೇಕಲಮರ್ಡಿ, ಕರೆಪ್ಪ ಸವದತ್ತಿ‌, ಕೃಷ್ಣ ಮಾಸ್ತರ, ರಮೇಶ ಚವ್ಹಾಣ ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button