
ಪ್ರಗತಿವಾಹಿನಿ ಸುದ್ದಿ: ಯುವತಿಯ ಮದುವೆ ತಪ್ಪಿಸಿ, ನಾಲ್ಕು ವರ್ಷಗಳಿಂದ ಕಿರುಕುಳ ನೀಡಿ, ಆಸಿಡ್ ದಾಳಿ ಬೆದರಿಕೆ ಹಾಕಿದ್ದ ಹಿಂದೂ ಸಂಘಟನೆ ಮುಖಂಡನೊಬ್ಬನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಸಂತ್ರಸ್ತ ಯುವತಿ ನೀಡಿದ ದೂರುನ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣೆಯಲ್ಲಿ ಹಿಂದೂ ಮುಖಂಡ ಚಿಕ್ಕಬಳ್ಳಿ ಬಾಲಕೃಷ್ಣ ಎಂಬಾತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಚಿಕ್ಕಬಳ್ಳಿ ಬಾಲಕೃಷ್ಣ ಹಾಗೂ ಯುವತಿಗೆ ನಾಲ್ಕು ವರ್ಷಗಳ ಹಿಂದೆ ಮದುವೆ ನಿಶ್ಚಯವಾಗಿತ್ತು. ಬಾಲಕೃಷ್ಣ ಸುಳ್ಳುಗಳನ್ನು ಹೇಳಿ ಮದುವೆ ನಿಶ್ಚಯ ಮಾಡಿಕೊಂಡಿದ್ದ. ಆತ ಹೇಳಿದ್ದ ಸುಳ್ಳು ಕಥೆಗಳು, ವರ್ತನೆ ಬಗ್ಗೆ ಗೊತ್ತಾಗುತ್ತಿದಂತೆ ಯುವತಿ ಹಾಗೂ ಆಕೆಯ ಕುಟುಂಬದವರು ಮದುವೆಗೆ ನಿರಾಕರಿಸಿ ಹಿಂದೆ ಸರಿದಿದ್ದಾರೆ.
ಇದರಿಂದ ಕೋಪಗೊಂಡ ಬಾಲಕೃಷ್ಣ ಯುವತಿಗೆ ಕಿರುಕುಳ ನೀಡುವುದು, ಅವಾಚ್ಯವಾಗಿ ನಿಂದಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಬಾಯಿಗೆ ಬಂದಂತೆ ಮಾತನಾಡಿ ಅವಮಾನ ಮಾಡುವುದು ಮಾಡುತ್ತಿದ್ದನಂತೆ. ಸಾಲದ್ದಕ್ಕೆ ಯುವತಿಗೆ ಬೇರೆ ಮದುವೆ ಪ್ರಸ್ತಾಪ ಬಂದಾಗ ಅದನ್ನು ತಪ್ಪಿಸುತ್ತಿದ್ದನಮ್ತೆ. ಏಳು ಬಾರಿ ಯುವತಿಗೆ ಮದುವೆ ಪ್ರಸ್ತಾಪ ಬಂದಿದ್ದನ್ನು ತಪ್ಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೇ ನಿನಗೆ ಬೇರೆ ಮದುವೆಯಾಗಲು ಬಿಡಲ್ಲ, ಆಸಿಡ್ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾನಂತೆ. ಇದರಿಂದ ನೊಂದ ಯುವತಿ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.