
ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ, ಮನುಷತ್ವ, ಮಾನವೀಯತೆಯನ್ನು ಮರೆತು ನಿಷ್ಕರುಣಿಯಂತೆ ಮನುಷ್ಯ ವರ್ತಿಸುತ್ತಿದ್ದಾನೆ. ಇಲ್ಲೋರ್ವ ಮಗ ಮಹಾಶಯ ವೃದ್ಧ, ಮಾನಸಿಕ ಅಸ್ವಸ್ಥ ತಾಯಿಯನ್ನು ರಸ್ತೆ ಬಿದಿ ಬಿಟ್ಟು ಹೋಗಿದ್ದಾನೆ.
ರಸ್ತೆ ಬದಿಯ ಮುಳ್ಳು, ಪೊದೆಗಳ ನಡುವೆ ಕುಳಿತು ವೃದ್ಧ ತಾಯಿ ತನ್ನ ಮಗ ಬರುತ್ತಾನೆ ಎಂದು ಕಾಯುತ್ತಿರುವ ದೃಶ್ಯ ಎಂತವರ ಕರುಳು ಹಿಂದುವಂತಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ಈ ಘಟನೆ ನಡೆದಿದೆ. 70-80 ವರ್ಷದ ವೃದ್ಧ ತಾಯಿಯನ್ನು ಮಗ ತಾನು ಈಗ ಬರುತ್ತೇನೆ ಎಂದು ಹೇಳಿ ರಸ್ತೆ ಬದಿ ಕೂರಿಸಿ ಹೊರಟು ಹೋಗಿದ್ದಾನೆ. ಪಾಪ ಆ ತಾಯಿ ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ ಎಂದು ಕಾಯುತ್ತಿದ್ದಾರೆ.
ಎಷ್ಟು ಹೊತಾದರೂ ಮಗನ ಸುಳಿವಿಲ್ಲ. ಇದನ್ನು ಕಂಡ ಸ್ಥಳೀಯರು ವೃದ್ಧೆ ಬಳಿ ಬಂದು ವಿಚಾರಿಸಿದಾಗ ನನ್ನ ಮಗ ಈಗ ಬರುತ್ತೇನೆ ಎಂದು ಹೋಗಿದ್ದಾನೆ, ಅವನು ಬಂದು ಕರೆದುಕೊಂಡು ಹೋಗುತ್ತಾನೆ ಎಂದಿದ್ದಾರೆ. ವೃದ್ಧ ತಾಯಿಯ ಸ್ಥಿತಿ ಮನಕಲುವಂತಿದೆ. ಸ್ಥಳೀಯರು ವೃದ್ಧೆಯನ್ನು ರಕ್ಷಿಸಿ ಆಹಾರ ನೀಡಿದ್ದಾರೆ. ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಸ್ಥಳಕ್ಕಾಗಮಿಸಿ ವೃದ್ಧೆಯನ್ನು ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.