
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ₹1616 ಕ್ವಿಂಟಲ್ ಬೆಂಬಲ ಬೆಲೆಯಲ್ಲಿ 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಅನುಮೋದನೆ ನೀಡಿದೆ.
ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ಜೂನ್ 9ರಂದು, ಕರ್ನಾಟಕದಲ್ಲಿ ಮಾವು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು ನೆರವಿಗೆ ಧಾವಿಸುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾದ ಕೇಂದ್ರ ಕೃಷಿ ಸಚಿವರು, ರಾಜ್ಯದಲ್ಲಿ 2025-26ರ ಮಾರುಕಟ್ಟೆ ವರ್ಷಕ್ಕೆ ಮಾರುಕಟ್ಟೆ ಹಸ್ತಕ್ಷೇಪ ಯೋಜನೆ (MIS) ಅಡಿಯಲ್ಲಿ ಕ್ವಿಂಟಲ್ಗೆ ₹1616 ಬೆಂಬಲ ಬೆಲೆಯಲ್ಲಿ ಗರಿಷ್ಠ 2,50,000 ಮೆಟ್ರಿಕ್ ಟನ್ಗಳಷ್ಟು ಮಾವು ಖರೀದಿಗೆ ಅನುಮೋದನೆ ನೀಡಿದ್ದಾರೆ. ಅಲ್ಲದೇ ಈ ಸಂಬಂಧ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೂ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ಅಲ್ಲದೇ, ಸಚಿವ ಜೋಶಿ ಅವರ ಮನವಿ ಪುರಸ್ಕರಿಸಿ ಕೃಷಿ ಸಚಿವರು ಬರೆದಿರುವ ಪತ್ರದಲ್ಲಿ ʼಕರ್ನಾಟಕದ ಮಾವು ಬೆಳೆಗಾರರ ಸಂಕಷ್ಟ ಅರಿತು ಅವರ ಕಲ್ಯಾಣಕ್ಕಾಗಿ ಗಮನ ಸೆಳೆದಿರುವುದು ನಿಜಕ್ಕೂ ನಿಮ್ಮ ನೈಜ ಕಾಳಜಿಯನ್ನು ತೋರುತ್ತದೆʼ ಎಂದು ಸಂತಸ ಸಹ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಮಾವು ಬೆಳೆಗಾರರ ಸಂಕಷ್ಟ ಅರಿತು ತಕ್ಷಣವೇ ಸ್ಪಂದಿಸಿದ್ದಾರೆ. ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚೌಹಾಣ್ ಅವರು ತ್ವರಿತವಾಗಿ ಬೆಂಬಲ ಬೆಲೆ ಘೋಷಿಸಿ ಮಾವು ಖರೀದಿಗೆ ಅವಕಾಶ ಕಲ್ಪಿಸಿದ್ದಾರೆ. ಇದಕ್ಕಾಗಿ ಈರ್ವರೂ ನಾಯಕರಿಗೆ ಸಚಿವ ಪ್ರಲ್ಹಾದ ಜೋಶಿ ಅವರು ಧನ್ಯವಾದ ಸಹ ಅರ್ಪಿಸಿದ್ದಾರೆ.