Kannada NewsKarnataka News

ಮತ್ತೆ ಕಲ್ಯಾಣ ಚಳವಳಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ವಿಶ್ವಗುರು ಬಸವಣ್ಣನವರ ಮೂಲ ಆಶಯವಾಗಿರುವ ಮೇಲು ಕೀಳುಗಳಿಲ್ಲದ ಸಮಾನತೆಯ ಸಮಾಜ ನಿರ್ಮಾಣವೇ ಮತ್ತೆ ಕಲ್ಯಾಣ ಚಳುವಳಿಯ ಆಶಯವಾಗಿದೆ ಎಂದು ಗದುಗಿನ ತೋಂಟದಾರ್ಯ ಶ್ರೀ ಸಿದ್ದರಾಮ ಸ್ವಾಮೀಜಿಗಳು ಹೇಳಿದ್ದಾರೆ.
ಗುರುವಾರ ಎಸ್.ಜಿ.ಬಾಳೇಕುಂದ್ರಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಮತ್ತೆ ಕಲ್ಯಾಣ ಕಾರ್ಯಕ್ರಮದ ಪೂರ್ವ ಸಿದ್ದತಾ ಸಭೆಯ ಸಾನಿಧ್ಯ ವಹಿಸಿ, ಆಶೀರ್ವಚನ ನೀಡಿದ ಅವರು, ಸಾಣೇಹಳ್ಳಿ ಶ್ರೀಗಳ ನೇತೃತ್ವದಲ್ಲಿ ಆಗಷ್ಟ್ 1 ರಿಂದ 30 ರವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಆಗಷ್ಟ 26 ರಂದು ಕಾರ್ಯಕ್ರಮ ನಡೆಯಲಿದೆ ಎಂದರು.
ದೇವರು ಧರ್ಮಗಳ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆಗಳು ನಿಲ್ಲಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬುದೆ ಬಸವಣ್ಣನವರ ಆಶಯವಾಗಿತ್ತು. ಈಗ ನಾವು 21 ನೇ ಶತಮಾನದಲ್ಲಿ 12 ನೇ ಶತಮಾನದ ಬಸವಾದಿ ಶರಣರ ಆಶಯಗಳನ್ನು ನೆನಪಿಸಿಕೊಂಡು, ಅವುಗಳನ್ನು ಮರುಸ್ಥಾಪಿಸಬೇಕಾಗಿದೆ. ಬಸವಾದಿ ಶರಣರ ಆಶಯಗಳನ್ನು ನಮ್ಮ ಇಂದಿನ ಯುವ ಪೀಳಿಗೆಗೆ ಹಾಗೂ ಭವಿಷ್ಯದ ಯುವ ಜನಾಂಗಕ್ಕೆ ತಲುಪಿಸಬೇಕಾಗಿದೆ ಎಂದರು.
ಬಸವಾದಿ ಶರಣರ ಆಶಯಗಳನ್ನು ಯುವ ಜನರಿಗೆ ಮನವರಿಕೆ ಮಾಡಿಕೊಡುವ ದಿಸೆಯಲ್ಲಿ ಮತ್ತೆ ಕಲ್ಯಾಣದಲ್ಲಿ ಕಾಲೇಜಿ ವಿದ್ಯಾರ್ಥಿ-ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮ ನಡೆಸಲಾಗುವುದು. ನಂತರ ಸಾಮರಸ್ಯದ ನಡೆ. ವೇದಿಕೆ ಕಾರ್ಯಕ್ರಮ. ವಚನ ಸಂದೇಶ ಮತ್ತು ಬಸವಾದಿ ಶರಣರ ಆಶಯಗಳನ್ನು ಪರಿಚಯಿಸುವ ನಾಟಕಗಳ ಪ್ರದರ್ಶನ ನಡೆಯಲಿದೆ. ಈ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಮಾತನಾಡಿ, ಮತ್ತೆ ಕಲ್ಯಾಣ ಎಂಬ ನೆನಪೆ ಒಂದು ರೋಮಾಂಚನ. 21 ನೇ ಶತಮಾಣದಲ್ಲಿ ನಿಂತು ನಾವಿಂದು 12 ನೇ ಶತಮಾನದ ಬಸವಾದಿ ಶರಣರ ಆಶಯಗಳನ್ನು ಈಡೇರಿಸಬೇಕಾಗಿದೆ. ಅನುಭವ ಮಂಟಪದ ವೈಭವವನ್ನು ಮರುಕಳಿಸಬೇಕಾಗಿದೆ ಎಂದರು.
ನ್ಯಾಯವಾದಿ ಬಸವರಾಜ ರೊಟ್ಟಿ ಮಾತನಾಡಿ, ಮತ್ತೆ ಕಲ್ಯಾಣ ಎಂಬುದೆ ಒಂದು ಅದ್ಭುತವಾದ ನೆನಪು. ಬಸವಾದಿ ಶರಣರ ಆಶಯದ ಸಮಾನತೆಯ ಸಮಾಜ ನಿರ್ಮಾಣ ಮಾಡುವ ಉದ್ದೇಶದ ಮತ್ತೆ ಕಲ್ಯಾಣ ಕಾರ್ಯಕ್ರಮದ ಯಶಸ್ವಿಗಾಗಿ ಸಮಾಜದ ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ. ಸಮಾಜದ ಜನರು ಈ ಕಾರ್ಯಕ್ರಮದ ಯಶಸ್ವಿಗಾಗಿ ತನು ಮನ ಧನದಿಂದ ಸಹಕರಿಸಬೇಕು ಎಂದು ಮನವಿ ಮಾಡಿದರು.
ನಾಗನೂರು ರುದ್ರಾಕ್ಷಿಮಠದ ಶ್ರೀ ಸಾವಳಗೀಶ್ವರ ಸ್ವಾಮೀಜಿ, ಶೆಗುಣಸಿಯ ಮಹಾಂತದೇವರು, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷ ಅರವಿಂದ ಪರುಶೆಟ್ಟಿ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಅರುಣ ಕಟಾಂಬಳೆ, ಸಂಗಮೇಶ ವಾಲಿ, ಎಸ್.ವೈ.ಹಂಜಿ, ಸಿದಗೌಡ ಮೋದಗಿ ಮುಂತಾದವರು ಉಪಸ್ಥಿತರಿದ್ದರು.
ಮಹಾನಂದ ಪರುಶೆಟ್ಟಿ ವಚನ ಪ್ರಾರ್ಥನೆ ಮಾಡಿದರು. ಶಂಕರ ಗುಡಸ್ ಸ್ವಾಗತಿಸಿದರು. ಅಶೋಕ ಮಳಗಳಿ ವಂದಿಸಿದರು. ಅನೇಕ ಗಣ್ಯರು ಭಾಗವಹಿಸಿದ್ದರು.

 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ. ಹೆಚ್ಚಿನ ಸುದ್ದಿಗಳಿಗಾಗಿ pragativahini.com ನೋಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button