Kannada NewsKarnataka NewsLatest

7.27 ಕೋಟಿ ರೂ. ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಶಾಸಕ ಅಭಯ ಪಾಟೀಲ ಚಾಲನೆ​

ಪ್ರಗತಿವಾಹಿನಿ ಸುದ್ದಿ,​ ಬೆಳಗಾವಿ -ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಚನ್ನಮ್ಮ ನಗರ ಹಾಗೂ ಟಿಳಕವಾಡಿಗಳಲ್ಲಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಮತ್ತು ಅಲಂಕಾರಿಕ ಲೈಟ್ ಅಳವಡಿಕೆ ಕಾಮಗಾರಿಗೆ ಶಾಸಕ ಅಭಯ ಪಾಟೀಲ ಭಾನುವಾರ ಚಾಲನೆ ನೀಡಿದರು. 

ಕೃಷ್ಣ ಕಾಲನಿ, ಸುಭಾಶ್ಚಂದ್ರ ನಗರ, 3ನೇ ರೈಲ್ವೆ ಗೇಟ್, ಪವಾರ್ ಚಾಳ, ವ್ಯಾಕ್ಸಿನ್ ಡಿಪೋ ಹಾಗೂ ಲೇಲೆಗ್ರೌಂಡ್ ಪ್ರದೇಶಗಳಲ್ಲಿ ಪ್ಯಾಕೇಜ್ 5ರ ಅಡಿಯಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸುಮಾರು 88.24 ಕಿಮೀ ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ, 165 ಫೀಡರ್ ಪಿಲ್ಲರ್ ಪ್ಯಾನೆಲ್ ನಿರ್ಮಾಣ, 11 ಟ್ರಾನ್ಸಫಾರ್ಮರ್ ಶಿಫ್ಟಿಂಗ್, 7 ಮೀಟರ್ ನ 19  ಹಾಗೂ 9 ಮೀಟರ್ ನ 276  ಅಲಂಕಾರಿಕ ಬೀದಿ ದೀಪದ ಕಂಬಗಳನ್ನು ಅಳವಡಿಸಲಾಗುತ್ತದೆ. 7.27 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಈ ಕಾಮಗಾರಿಗಳನ್ನು ನಡೆಸಲಾಗುತ್ತಿದೆ.  
ಚನ್ನಮ್ಮ ನಗರದ ಸರ್ವಾಂಗೀಣ ಅಭಿವೃದ್ಧಿಗೆ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮುಖ್ಯ ರಸ್ತೆ ಸೇರಿದಂತೆ ಎಲ್ಲ ರಸ್ತೆ ಕಾಮಗಾರಿಗಳನ್ನೂ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಇನ್ನಿತರ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅಭಯ ಪಾಟೀಲ ಈ ಸಂದರ್ಭದಲ್ಲಿ ತಿಳಿಸಿದರು.
ಚನ್ನಮ್ಮ ನಗರದ ಕುಡಿಯುವ ನೀರಿನ ಸಮಸ್ಯೆ ಮತ್ತು ತ್ಯಾಜ್ಯ ವಿಲೇವಾರಿ ಸಮಸ್ಯೆಗಳಿಗೆ ಕೂಡ ಆದಷ್ಟು ಶೀಘ್ರ ಮುಕ್ತಿ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ತ್ವರಿತಗತಿಯಲ್ಲಿ ಕಾಮಗಾರಿ

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಶಿಧರ ಕುರೇರ್ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ನಡೆಸಬೇಕು ಎಂದೂ ಅವರು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಗುತ್ತಿಗೆದಾರರು, ಚನ್ನಮ್ಮ ನಗರದ ಹಿರಿಯ ನಾಗರಿಕರು, ಸಾರ್ವಜನಿಕರ ಹೆಚ್ಚಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಮಂಡೋಳಿ ರಸ್ತೆಗೆ 3 ತಿಂಗಳ ಗಡುವು

ಇದಕ್ಕೂ ಮೊದಲು ಮಂಡೋಳಿ ರಸ್ತೆಯ ಸ್ಮಾರ್ಟ್ ಸಿಟಿ ಕಾಮಗಾರಿಗಳ ಸಂಬಂಧ ಸಾರ್ವಜನಿಕರೊಂದಿಗೆ ಶಾಸಕ ಅಭಯ ಪಾಟೀಲ ಹಾಗೂ ಎಂಡಿ ಶಶಿಧರ ಕುರೇರ ಸಮಾಲೋಚನೆ ನಡೆಸಿದರು. ಕಾಮಗಾರಿ ವಿಳಂಬವಾಗಿರುತ್ತಿರುವ ಕುರಿತು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಪೂರ್ಣ ಕಾಮಗಾರಿಗಳನ್ನು 3 ತಿಂಗಳೊಳಗೆ ಮುಗಿಸಬೇಕು ಎಂದು ಗುತ್ತಿಗೆದಾರರಿಗೆ ತಾಖೀತು ಮಾಡಿದ ಅಭಯ ಪಾಟೀಲ ಹಾಗೂ ಕುರೇರ್, ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button