
ಪ್ರಗತಿವಾಹಿನಿ ಸುದ್ದಿ: ಸಿಂದಗಿ ಕ್ಷೇತ್ರದ ಶಾಸಕ ಅಶೋಕ್ ಮನಗೂಳಿ ಕಾರು ಅಪಘಾತಕ್ಕೀಡಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಬೈಪಾಸ್ ಬಳಿ ನಡೆದಿದೆ.
ವಿಧಾನಸೌಧ ಪ್ರವೇಶ ಪಾಸ್ ಹೊಂದಿರುವ ಶಾಸಕರ ಖಾಸಗಿ ಇನ್ನೋವಾ ಕಾರು ಹಾಗೂ ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿಯಾಗಿದೆ. ಅಪಘಾತದ ವೇಳೆ ಕಾರಿನಲ್ಲಿ ಶಾಸಕ ಅಶೋಕ್ ಮನಗೂಳಿ ಇರಲಿಲ್ಲ. ಅವರ ಪುತ್ರಿ ಹಾಗೂ ಸಹೋದರನ ಮಗ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.