Belagavi NewsBelgaum NewsElection NewsKannada NewsKarnataka NewsLatestPolitics

ನೇಹಾ ಕೊಲೆಯಿಂದ ಕರ್ನಾಟಕದಲ್ಲಿ ಶಾಂತಿಗೆ ಗ್ಯಾರಂಟಿ ಇಲ್ಲವಾಗಿದೆ: 

ಗೃಹ ಸಚಿವರು ರಾಜೀನಾಮೆ ಕೊಡಬೇಕು- ಶಾಸಕಿ ಶಶಿಕಲಾ ಜೊಲ್ಲೆ ಒತ್ತಾಯ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ: ಹುಬ್ಬಳ್ಳಿ ನೇಹಾ ಕೊಲೆ ಘಟನೆಯಿಂದ ಕರ್ನಾಟಕ ಶಾಂತಿಗೆ ಗ್ಯಾರಂಟಿ ಇಲ್ಲವಾಗಿದೆ. ಹೀಗಾಗಿ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಸಚಿವೆ, ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಒತ್ತಾಯಿಸಿದರು.

ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಹರಿಹಾಯ್ದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದು 11 ತಿಂಗಳಲ್ಲಿ ಹಿಂದುಗಳ ಮೇಲೆ ಅನ್ಯಾಯ ಆಗುತ್ತಾ ಬಂದಿದೆ. ತಡೆಯಲು ಸರಕಾರ ವಿಫಲವಾಗಿದೆ ಎಂದರು.

21 ನೆಯ ಶತಮಾನದಲ್ಲಿ ಪುರುಷರ ಸಮನಾಗಿ ಮಹಿಳೆ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನೇಹಾ ಕೊಲೆ ಆಗಿರುವುದು ಖಂಡನೀಯ. ಭಯಾನಕ ರೀತಿಯಲ್ಲಿ ಕೊಲೆ ಮಾಡಿರುವ ಆರೋಪಿಗೆ ಕಠಿಣ ಶಿಕ್ಷೆ ಆಗಲು ಬಿಜೆಪಿ ಒತ್ತಾಯಿಸುತ್ತದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲವಾಗಿದೆ. ಸಿಎಂ., ಡಿಸಿಎಂ ಮತ್ತು ಗೃಹ ಸಚಿವರೆ  ಇದಕ್ಕೆ ಜವಾಬ್ದಾರಿ ಆಗುತ್ತಾರೆ. ಕಾಂಗ್ರೆಸ್ ಸರಕಾರದ 11 ತಿಂಗಳಲ್ಲಿ ಹೃದಯವಿದ್ರಾವಕ ಘಟನೆ ನಡೆದಿವೆ ಎಂದರು.

ಜೀವನದಲ್ಲಿ ಸಾಧನೆ ಮಾಡುವ ಕನಸು ಹೊತ್ತಿದ್ದ ನೇಹಾ ಎಷ್ಟೊಂದು ನೋವು ಅನುಭವಿಸಿರಬಹುದು. ಬಿಜೆಪಿ ಇದನ್ನು ಖಂಡಿಸುತ್ತದೆ. ಕಾಂಗ್ರೆಸ್ ನಗರ ಪಾಲಿಕೆ ಸದಸ್ಯನ ಮಗಳಿಗೆ ಈ ರೀತಿ ಆದರೆ, ಸಾಮಾನ್ಯ ಜನರ ಪರಿಸ್ಥಿತಿ ಏನು? ಸ್ವತ: ಕಾಂಗ್ರೆಸ್ ಸದಸ್ಯರೇ ಸರಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ ಎಂದರು.

ಕಾಂಗ್ರೆಸ್ ಸರಕಾರ ಗ್ಯಾರಂಟಿ ಕೊಟ್ಟಿದ್ದೇವೆಂದು ಹೇಳುತ್ತಿರಬಹುದು. ಆದರೆ ಕರ್ನಾಟಕ ಶಾಂತಿಗೆ ಗ್ಯಾರಂಟಿ ಇಲ್ಲ. ನೀರಿಗೆ ಗ್ಯಾರಂಟಿ ಇಲ್ಲ. ರೈತರ ಬದುಕಿಗೆ ಗ್ಯಾರಂಟಿ ಇಲ್ಲವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಚಂದ್ರಶೇಖರ ಕವಟಗಿ, ಅಮೃತ ಕುಲಕರ್ಣಿ, ಅಪ್ಪಾಸಾಹೇಬ ಚೌಗಲಾ, ಶಾಂಭವಿ ಅಶ್ವಥಪೂರ ಮುಂತಾದವರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button