*ಸಮುದಾಯ ಭವನ ಜಮೀನಿಗಾಗಿ ಇಪ್ಪತ್ತಕ್ಕೂ ಹೆಚ್ಚು ಜನರಿಂದ ಹಲ್ಲೆ: ಇಬ್ಬರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸಮುದಾಯ ಭವನ ಜಮೀನಿಗಾಗಿ ಇಪ್ಪತ್ತಕ್ಕೂ ಹೆಚ್ಚು ಜನರಿಂದ ಏಕಾಏಕಿ ಹಲ್ಲೆ ಮಾಡಲಾಗಿದ್ದು, ಈ ಗಲಾಟೆಯಲ್ಲಿ ಇಬ್ಬರು ಯುವಕರಿಗೆ ಗಾಯವಾಗಿರುವ ಘಟನೆ ಬೆಳಗಾವಿ ನಗರದ ಗಣಾಚಾರಿ ಗಲ್ಲಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ರಾಜು ತಳವಾರ, ಸುದೇಶ ಲಾಠೆ ಎಂಬುವರ ತಲೆಗೆ ಗಾಯವಾಗಿದ್ದು, ಇಬ್ಬರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮಹಾನಗರ ಪಾಲಿಕೆಯ ಜಾಗವನ್ನು ಕೆಲವರು ಅತಿಕ್ರಮಣ ಮಾಡಿದ್ದಾರೆ ಎನ್ನಲಾಗಿದೆ. ಇದೆ ಕಾರಣಕ್ಕೆ ಸ್ಥಳೀಯರ ಜೊತೆ ಸೇರಿಕೊಂಡು ಪಾಲಿಕೆ ಅಧಿಕಾರಿಗಳು ಸರ್ವೇ ಮಾಡಿಸಿ ಭವನ ನಿರ್ಮಾಣಕ್ಕೆ ಮುಂದಾಗಿದ್ದರು ಈ ವೇಳೆಯಲ್ಲಿ ಇಪ್ಪತ್ತಕ್ಕೂ ಹೆಚ್ಚು ಜನರಿಂದ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.
ಬೆಳಗಾವಿ ಖಡೇಬಜಾರ್ ಪೊಲೀಸ ಠಾಣೆ ಪಕ್ಕದಲ್ಲಿಯೇ ಗಲಾಟೆ ಆಗಿದ್ದು, ಘಟನೆ ನಡೆದ ಬಳಿಕ ಮಹಿಳೆಯರು, ಸ್ಥಳೀಯ ಮುಖಂಡರು ಮಕ್ಕಳ ಮೇಲೆ ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಖಡೇಬಜಾರ್ ಪೊಲೀಸ ಠಾಣೆಗೆ ಆಗಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಪೊಲೀಸರ ಮನವೊಲಿಕೆ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲೇ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.