*ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಂಸದ ಜಗದೀಶ್ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರಕಾರದ ಇಲಾಖೆಗಳಾದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ, ನೈರುತ್ಯ ರೇಲ್ವೆ ಇಲಾಖೆ, ವಿಮಾನಯಾನ ಇಲಾಖೆ ಕೈಗೊಂಡಿರುವ ವಿವಿಧ ಅಭಿವೃದ್ಧಿ ಪರ ಕಾಮಗಾರಿಗಳ ಅನುಷ್ಠಾನದ ಬಗ್ಗೆ ಸಂಸದ ಜಗದೀಶ್ ಶೆಟ್ಟರ್ ಪ್ರಗತಿ ಸಭೆ ನಡೆಸಿದರು.
ಇಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಮೊದಲಿಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಾಯಿತು. ಈ ಇಲಾಖೆಯನ್ವಯ ಬೆಳಗಾವಿ ನಗರದಲ್ಲಿ ಕೈಕೊಳ್ಳಲಾಗಿತ್ತಿರುವ ರಿಂಗ್ ರಸ್ತೆ/ ಬೈಪಾಸ್ ನಿರ್ಮಾಣದ ಪ್ರಗತಿ ಹಂತದ ಬಗ್ಗೆ ಸಂಸದರು ಮಾಹಿತಿ ಪಡೆದರು.
ಹೋನಗಾ-ಝಾಡಶಹಾಪೂರ ನಡುವೆ ನಿರ್ಮಾಣ ಮಾಡಲಾಗುತ್ತಿರುವ ರಸ್ತೆ ಕಾಮಗಾರಿಯ ಬಗ್ಗೆ ಅಗತ್ಯವೆನಿಸಿರುವ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿಯನ್ನು ಸಂಸದರು ಪಡೆದುಕೊಂಡು, ಶೀಘ್ರ ಈ ಮಾರ್ಗದ ಎಲ್ಲ ಭೂಸ್ವಾಧೀನ ಕಾರ್ಯವನ್ನು ಪೂರ್ಣಗೊಳಿಸುವ ಬಗ್ಗೆ ಸೂಚನೆಯನ್ನು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನೀಡಿದರು. ಅದರಂತೆ ಹಲಗಾ-ಮಚ್ಚೆ ನಡುವೆ ಇರುವ 9 ಕಿ ಮಿ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸಹ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.
ಬೆಳಗಾವಿ(ಶೇಗುಣಮಟ್ಟಿ) -ಹುನಗುಂದ -ರಾಯಚೂರು ಮಾರ್ಗದಲ್ಲಿ ನಿರ್ಮಿಸಲಾಗುವ ಬೆಳಗಾವಿ ಲೋಕಸಭಾ ವ್ಯಾಪ್ತಿಯ 43 ಕಿ.ಮೀ ರಸ್ತೆ ಕಾಮಾಗಾರಿ ಪೂರ್ವ ಅವಶ್ಯವಾದ ಭೂಸ್ವಾಧೀನ ಕಾರ್ಯದ ಬಗ್ಗೆ ಮಾಹಿತಿಯನ್ನು ಸಂಸದರು ಪಡೆದುಕೊಂಡು, ಆದಷ್ಟು ಬೇಗನೆ ಭೂಸ್ವಾಧೀನ ಕಾರ್ಯ ಮುಗಿಸಿ, ಕಾಮಗಾರಿ ಪ್ರಾರಂಭಕ್ಕೆ ಅನುಕೂಲತೆ ಕಲ್ಪಿಸಲು ಸೂಚಿಸಿದರು.
ಮುಂದುವರೆದು ಬೆಳಗಾವಿ ನಗರದಲ್ಲಿ ಹೋಟೆಲ್ ಸಂಕಮ್ ಮಾರ್ಗವಾಗಿ ಫ್ಲೈ ಓವರ್ ನಿರ್ಮಾಣದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ಯಾವುದೇ ಕಾಮಗಾರಿ ಪ್ರಾರಂಭವಾದ ನಂತರ ನಿರಂತರವಾಗಿ ಸಾಗಿ, ಮುಗಿಯುವ ಹಂತ ತಲುಪುವ ಹಾಗೆ ನೋಡಿಕೊಂಡು ಸಾರ್ವಜನಿಕರಿಗೆ ಅನುಕೂಲವಾಗುವ ಹಾಗೆ ಮಾಡುವಂತೆ ಸಂಸದರು ಸೂಚಿಸಿದರು.
ಬೆಳಗಾವಿ-ಕಿತ್ತೂರು-ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣ
ಈ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಸದ್ಯ ಸುಮಾರು 1200 ಏಕರೆ ಜಮೀನುಗಳ ಸ್ವಾಧೀನತೆ ಅವಶ್ಯಕತೆ ಇದ್ದು ಇದಕ್ಕನುಗುಣವಾಗಿ ಭೂಸ್ವಾಧೀನ ಕಾರ್ಯ ಬಗ್ಗೆ ಸಭೆಯಲ್ಲಿ ಅವಲೋಕಿಸಿ, ಜಮೀನು ನೀಡುವ ಹಿಡುವಳಿದಾರರಿಗೆ ಸರಕಾರವು ನೀಡಬೇಕಾದ ಪರಿಹಾರ ಧನವನ್ನು ಆದಷ್ಟು ಬೇಗನೆ ವಿತರಿಸುವ ಬಗ್ಗೆ ವಿಷಯ ಪರಿಗಣಿಸಿ ರೈತರಿಗೆ ಅನುಕೂಲತೆ ಕಲ್ಪಸುವಂತೆ ಸರಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಮತ್ತು ಮೂಲಭೂತ ಸೌಕರ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಬೆಳಗಾವಿ ಸಂಸದರು ಮಾತುಕತೆ ನಡೆಸಿ ಒತ್ತಾಯಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಯೋಜನಾ ನಿರ್ದೇಶಕರಾದ ಭೂವನೇಶ ಕುಮಾರ, ಬೆಳಗಾವಿ ವಿಮಾಣ ನಿಲ್ದಾಣ ನಿರ್ದೇಶಕರಾದ ತ್ಯಾಗರಾಜನ್, ಭೂಸ್ವಾಧೀನ ಅಧಿಕಾರಿಗಳಾದ ಚೌವ್ಹಾಣ, ರಾಜಶ್ರೀ ಜೈನಾಪೂರ, ನೈರುತ್ಯ ವಲಯದ ರೇಲ್ವೆ ಅಭಿಯಂತರರಾದ ನಿಸ್ಸಾಮುದ್ದಿನ್ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.