*ಇಂಡಿಗೋ ಮುಖ್ಯಸ್ಥರೊಂದಿಗೆ ವಿಮಾನಯಾನ ಸೇವೆಯ ಕುರಿತು ಚರ್ಚಿಸಿದ ಸಂಸದ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುಂಬೈ, ಚನೈ, ಪುಣೆ, ಸೂರತ್ ನಗರಗಳಿಗೆ ಇಂಡಿಗೋ ವಿಮಾನಯಾನ ಸೇವೆಯನ್ನು ಒದಗಿಸುವಂತೆ ಇಂಡಿಗೋ ಸಂಸ್ಥೆಯ ಮುಖ್ಯಸ್ಥರಾದ (ಮಾರಾಟ ವಿಭಾಗ) ಅನಶೂಲ ಸೇಟಿ ಇವರೊಡನೆ ದೂರವಾಣಿಯಲ್ಲಿ ಚರ್ಚಿಸಲಾಗಿದೆ ಎಂದು ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಅವರು ತಿಳಿಸಿದ್ದಾರೆ.
ಮುಂಬೈ ನಗರಕ್ಕೆ ಬೆಳಗಾವಿಯಿಂದ ದಿನನಿತ್ಯ ನೂರಾರು ಜನ ವ್ಯಾಪಾರಸ್ಥರು, ವ್ಯಾಪಾರ ವಹಿವಾಟಕ್ಕೆಂದು ಮುಂಬೈ ನಗರಕ್ಕೆ ಪ್ರಯಾಣಿಸುತ್ತಿರುತ್ತಾರೆ. ಆದರೆ ಮುಂಬೈ ನಗರಕ್ಕೆ ಸದ್ಯ ಯಾವುದೇ ವಿಮಾನಯಾನ ಸೇವೆ ಲಭ್ಯವಿಲ್ಲ, ಆದಕಾರಣ ಬೆಳಗಾವಿಯಿಂದ ಮುಂಬೈ ನಗರಕ್ಕೆ ಇಂಡಿಗೋ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸಿದ್ದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಚರ್ಚೆಯಲ್ಲಿ ತಿಳಿಸಲಾಯಿತು. ಅದರಂತೆ ಪೂಣೆ, ಸೂರತ್, ಚನೈದಂತಹ ಪ್ರಮುಖ ನಗರಗಳಿಗೂ ಸಹ ವಿಮಾನ ಸೇವೆ ಒದಗಿಸುವ ಬಗ್ಗೆ ಸಾರ್ವಜನಿಕರಿಂದ ಬೇಡಿಕೆಯಿದ್ದು, ಇದನ್ನು ಸಹ ಪರಗಣಿಸುವಂತೆ ಇಂಡಿಗೋ ಸಂಸ್ಥೆಯ ಮುಖ್ಯಸ್ಥರಲ್ಲಿ ಪ್ರಸ್ತಾಪಿಸಲಾಯಿತು.
ಮುಂಬರುವ ದಿನಗಳಲ್ಲಿ ಬೆಳಗಾವಿಯಿಂದ – ಮುಂಬೈ ನಗರಕ್ಕೆ ಇಂಡಿಗೋ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುವ ಬಗ್ಗೆ ಸ್ಪಷ್ಟ ಭರವಸೆಯನ್ನು ಇಂಡಿಗೋ ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಸೇಟಿ ಅವರು ನೀಡಿದ್ದು ಮತ್ತು ಅದೇ ರೀತಿಯಾಗಿ ಚನೈ, ಪುಣೆ, ಸುರತ್ ಗಳಂತಹ ಪ್ರಮುಖ ನಗರಗಳಿಗೂ ಈ ಸೇವೆಯನ್ನು ವಿಸ್ತರಿಸುವ ಬಗ್ಗೆ ವಿಷಯ ಅವಲೋಕಿಸುವುದಾಗಿ ತಿಳಿಸಿರುವ ಬಗ್ಗೆ ಜಗದೀಶ ಶೆಟ್ಟರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



