ಸಚಿವ ಸ್ಥಾನಕ್ಕಾಗಿ ಬಿಜೆಪಿಗೆ ಬಂದಿಲ್ಲ: ಎಂಟಿಬಿ ನಾಗರಾಜ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಚಿವ ಸ್ಥಾನಕ್ಕಾಗಿ ನಾನು ಬಿಜೆಪಿ ಸೇರಿಲ್ಲ, ಅದಕ್ಕಾಗಿ ನಾನು ಸಿಎಂ ಯಡಿಯೂರಪ್ಪ ಮೇಲೆ ಯಾವುದೇ ಒತ್ತಡವನ್ನೂ ಹಾಕಿಲ್ಲ. ಮೈತ್ರಿ ಸರ್ಕಾರದಿಂದ ಬೇಸತ್ತು ನಾನು ಬಿಜೆಪಿಗೆ ಬಂದಿದ್ದೇನೆ ಹೊರತು ಸಚಿವ ಸ್ಥಾನಕ್ಕಾಗಿ ಅಲ್ಲ ಎಂದು ಮಾಜಿ ಶಾಸಕ ಎಂಟಿಬಿ ನಾಗರಾಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಗಮ ಮಂಡಳಿ ಸ್ಥಾನ ಕೊಡಿ ಎಂದೂ ಒತ್ತಡ ಹಾಕುತ್ತಿಲ್ಲ. ಯಾವ ಹುದ್ದೆಯನ್ನೂ ಕೇಳಿಲ್ಲ. ಯಾವ ಸ್ಥಾನ ಕೊಟ್ಟರೂ ಸಂತೋಷ. ಸೋತವರಿಗೆ ಸಚಿವ ಸ್ಥಾನ ಇಲ್ಲ ಎನ್ನುವ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದಿದ್ದೇನೆ ಎಂದರು.

ಸೋತ ಬಳಿಕವೂ ಅನರ್ಹ ಪಟ್ಟ ಹಾಗೇ ಉಳಿಯಿತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಮ್ಮೆ ನಾಮಪತ್ರ ಸಲ್ಲಿಸಿ ಸ್ವೀಕಾರವಾದರೆ, ಚುನಾವಣೆಯಲ್ಲಿ ಗೆಲ್ಲಲಿ ಸೋಲಲಿ, ಸುಪ್ರೀಂಕೋರ್ಟ್ ಆದೇಶ ರದ್ದಾಗುತ್ತದೆ. ಆ ನಂತರ ಯಾವುದೇ ಹುದ್ದೆ ಪಡೆಯಬಹುದು. ಕಾನೂನುತಜ್ಞರು ಅಭಿಪ್ರಾಯ ತಿಳಿಸಿದ್ದಾರೆ. ಸುಪ್ರೀಂ ನಿವೃತ್ತ ನ್ಯಾಯಮೂರ್ತಿಗಳಿಂದಲೂ ಅಭಿಪ್ರಾಯ ಪಡೆದಿದ್ದೇನೆ. ಈ ಕುರಿತು ಸಿಎಂ ಬಳಿಯೂ ಈ ಬಗ್ಗೆ ಚರ್ಚಿಸಿದ್ದು, ಪರಿಶೀಲನೆ ಮಾಡೋಣ ಎಂದಿದ್ದಾರೆ ಎಂದರು.

ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಬಂದಿರುವುದು ಸಂತಸ ತಂದಿದೆ. ಬಿಜೆಪಿಯ ಹೆಚ್ಚು ಅಭ್ಯರ್ಥಿಗಳು ಗೆದ್ದಿದ್ದಾರೆ. ಕಾಂಗ್ರೆಸ್​​ ಪಕ್ಷ ಠೇವಣಿ ಕಳೆದುಕೊಂಡಿದೆ. ಗೆಲುವಿನ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂದರು.

ಇನ್ನು ನನ್ನ ಸೋಲಿಗೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರೇ ಕಾರಣ. ಇವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ. ಅವರು ಪಕ್ಷ ದ್ರೋಹಿಗಳು ಎಂದು ಅವರ ವಿರುದ್ಧ ಬಿಜೆಪಿಯ ಕೆಲವು ನಾಯಕರಿಗೂ ಪತ್ರ ಬರೆದಿದ್ದೇನೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ನಾಯಕರು ಸಮಯ ಸಂದರ್ಭ ಬಂದಾಗ‌ ಶರತ್ ಬಚ್ಚೆಡಗೌಡರನ್ನು ಉಚ್ಛಾಟನೆ ಮಾಡಲಾಗುತ್ತದೆ ಎಂಬ ಭರವಸೆ ನೀಡಿದ್ದಾರೆ ಎಂದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button