*ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ: ದೂರು ನೀಡಿದ್ದಕ್ಕೆ ಗಲಾಟೆ, ಕೊಲೆ: ಖ್ಯಾತ ಜೋತಿಷಿ ಕಮಲಾಕರ್ ಭಟ್ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಕ್ಕೆ ಆಕೆಯ ಪತಿ ಹಾಗೂ ಮಗಳು ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ ಗಲಾಟೆ ಮಾಡಿಸಿ ಓರ್ವ ವ್ಯಕ್ತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಖ್ಯಾತ ಜೋತಿಷಿ ಕಮಲಾಕರ ಭಟ್ ನನ್ನು ಬಂಧಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪದಲ್ಲಿ ಈ ಘಟನೆ ನಡೆದಿದೆ. ಸಿದ್ದಾಪುರ ಪೊಲೀಸರು ಜೋತಿಷಿ ಕಮಲಾಕರ ಭಟ್, ಸುಚಿತ್ರಾ ನಾಯ್ಕ್, ಆಕೆಯ ತಂದೆ ಲೋಕನಾಥ್ ಸೇರಿದಂತೆ ಏಳು ಜನರನ್ನು ಬಂಧಿಸಿದ್ದಾರೆ.
ಸುಚಿತ್ರಾ ನಾಯ್ಕ್ ಎಂಬ ಮಹಿಳೆಗೆ ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೆ ಸುಚಿತ್ರಾ ಇಬ್ಬರು ಮಕ್ಕಳೊಂದಿಗೆ ಸಿದ್ದಾಪುರದಲ್ಲಿ ವಾಸವಾಗಿದ್ದಳು. ಟಿವಿಯಲ್ಲಿ ಜೋತಿಷ್ಯಗಳನ್ನು ಹೇಳುತ್ತಿದ್ದ ಕಮಲಾಕರ ಭಟ್ ಪರಿಚಯವಾಗಿ ಇಬ್ಬರ ನಡುವೆ ಅಕ್ರಮ ಸಂಬಂಧಕ್ಕೆ ತಿರುಗಿದೆ. ಕಮಲಾಕರ ಭಟ್ ಆಗಾಗ ಸುಚಿತ್ರಾ ಮನೆಗೆ ಬಂದು ಅಲ್ಲಿಯೇ ಇದ್ದು ಹೋಗುತ್ತಿದ್ದನಂತೆ. ಸುಚಿತ್ರಾ ಹಾಗೂ ಕಮಲಾಕರ ಭಟ್ ನಡುವೆ ಸ್ನೇಹಕ್ಕೂ ಮೀರಿದ ಸಲುಗೆ ಶುರುವಾಗಿತ್ತು. ಇದನ್ನು ಕಂಡು ಸುಚುತ್ರಾ ಮಕ್ಕಳು ಶಾಕ್ ಆಗಿದ್ದರು. ಅಲ್ಲದೇ ತಾಯಿ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಮಕ್ಕಳಿಬ್ಬರು ತನ್ನ ಹಾಗೂ ಕಮಲಾಕರ್ ಭಟ್ ಸಂಬಂಧವನ್ನು ವಿರೋಧಿಸಿದ್ದಕ್ಕೆ ಸುಚಿತ್ರಾ ಮಕ್ಕಳಿಗೆ ಚಿತ್ರಹಿಂಸೆ ನೀಡಲಾರಂಭಿಸಿದ್ದಳಂತೆ.
ತಾಯಿಯ ಕಾಟ, ಹಿಂಸೆಗೆ ನೊಂದ ಹಿರಿಯ ಮಗಳು ಈ ವಿಷಯವನ್ನು ಬೆಂಗಳೂರಿನಲ್ಲಿದ್ದ ತಂದೆ ಮಹೇಶ್ ನಾಯ್ಕ್ ಗೆ ಹೇಳಿದ್ದಳಂತೆ. ನನ್ನ ಹಾಗೂ ತಂಗಿಯನ್ನು ಆದಷ್ಟು ಬೇಗ ಈ ಮನೆಯಿಂದ ಕರೆದುಕೊಂಡು ಹೋಗಿ. ನಮಗೆ ತಾಯಿ ಕೊಡುವ ಹಿಂಸೆ ತಡೆಯಲು ಸಾಧ್ಯವಿಲ್ಲ. ನಾವು ಇಲಿಯೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಳಂತೆ. ತಾಯಿ ಹಾಗೂ ಕಮಲಾಕರ್ ಭಟ್ ನಡುವಿನ ಅಕ್ರಮ ಸಂಬಂಧದ ಬಗ್ಗೆಯೂ ತಂದೆಗೆ ಹೇಳಿ ಕಣ್ಣೀರಿಟ್ಟಿದ್ದಳಂತೆ.
ವಿಷಯ ತಿಳಿದು ಊರಿಗೆ ಬಂದ ಮಹೇಶ್, ಮಗಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದ. ಬಳಿಕ ತನ್ನ ಸಹೋದರ ವಸಂತ್ ಮನೆಗೆ ಹೋಗಿದ್ದ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವಿಚಾರ ಗೊತ್ತಾಗುತ್ತಿದ್ದಂತೆ ಕಮಲಾಕರ್ ಭಟ್, ಸುಚಿತ್ರಾ ಪ್ಲಾನ್ ಮಾಡಿ ಹುಡುಗರ ಗ್ಯಾಂಗ್ ನ್ನು ಕಳುಹಿಸಿ ಮಹೇಶ್ ಮೇಲೆ ಹಲ್ಲೆ ನಡೆಸಿದ್ದರು. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಮಹೇಶ್ ಸಹೋದರ ವಸಂತ್ ಬಿಡಿಸಲು ಬಂದಿದ್ದಾರೆ. ಜಗಳ ಬಿಡಿಸಲು ಬಂದ ಆತನ ಮೇಲೂ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಗಂಭೀರವಾಗಿ ಹಲ್ಲೆಗೊಳಗಾದ ವಸಂತ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಪ್ರಕರಣ ಸಂಬಂಧ ಕಮಲಾಕರ್ ಭಟ್, ಸುಚಿತ್ರಾ ಸೇರಿ ಒಟ್ಟು 7 ಜನರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.


