Kannada NewsKarnataka NewsLatest

*ಬೆಂಗಳೂರು ಸಿಟಿ ಇನ್ಸಿಟ್ಯೂಟ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಅನಾವರಣ: ನಾಲ್ವಡಿ ಕುರಿತ ಕಿರು ಚಿತ್ರ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ: ಉದ್ಯಾನ ನಗರಿಯಲ್ಲಿ ‌ಗಣರಾಜ್ಯೊತ್ಸವದಂದು, ಬೆಂಗಳೂರು ಸಿಟಿ ಇನ್ಸಿಟ್ಯೂಟ್ ನಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಅನಾವರಣ ಹಾಗು ನಾಲ್ವಡಿ ಕುರಿತ ಕಿರು ಚಿತ್ರ ಪ್ರದರ್ಶನ ನಡೆಯಲಿದ್ದು, ಆ ಕುರಿತಾಗಿ ಇಂದು ಸಿಟಿ ಇನ್ಸಿಟ್ಯೂಟ್ ಅಧ್ಯಕ್ಷ ಶ್ರೀ ಕೆ ಸುಕುಮಾರ್ ಅವರು‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ, ಕಾರ್ಯಗಳ ಮಾಹಿತಿಯನ್ನು ಹಂಚಿಕೊಂಡರು.

ಆಧುನಿಕ ಭಾರತದ ಐತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿದಿಡಬೇಕಾದದ್ದು ಮೈಸೂರು ರಾಜ ಸಂಸ್ಥಾನದದ ಆಡಳಿತವನ್ನು. ಜನಪರ ಆಡಳಿತಕ್ಕೆ ಅಂದು ವಿಶ್ವ ಪ್ರಸಿದ್ಧವಾಗಿದ್ದ ಮೈಸೂರಿನ ರಾಜ ವಂಶಸ್ಥರು, ಈ ದೇಶದಲ್ಲಿ ಪ್ರಜಾಪ್ರಭುತ್ವ, ಕೈಗಾರಿಕೀಕರಣ, ನೀರಾವರಿ, ಆಧುನಿಕ ಶಿಕ್ಷಣ, ವೈಜ್ಞಾನಿಕ ನಗರ ನಿರ್ಮಾಣ, ಆಡಳಿತ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಬೀರಿದ್ದಾರೆ. ಅದರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆ, ಈ ನಾಡಿಗೆ ಅವರ ಕೊಡುಗೆ ಅದ್ವಿತೀಯ. ಕರ್ನಾಟಕದ ಮನೆ-ಮನಗಳಲ್ಲೂ ಪ್ರಾತಸ್ಮರಣಿಯರಾಗಿರುವ ನಾಲ್ವಡಿಯವರ ನಿಜ ರೂಪದ ಪ್ರತಿಮೆ, ಗಣರಾಜ್ಯೋತ್ಸವದಂದು (ಜನವರಿ 26) ನಗರದ ಸಿಟಿ ಇನ್ಸಿಟ್ಯೂಟ್ ನಲ್ಲಿ ಅನಾವರಣಗೊಳ್ಳಲಿದೆ.

ಅಂದು ಸಂಜೆ 6.30ಕ್ಕೆ ನಡೆಯಲಿರುವ ಈ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ, ಮೈಸೂರು ರಾಜವಂಶಸ್ಥೆ, ರಾಜಮಾತೆ ಗೌರವಾನ್ವಿತ ಡಾ ಪ್ರಮೋದಾದೇವಿ ಒಡೆಯರ್ ಅವರು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳೆತ್ತರದ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ, ಹಾಗು ಖ್ಯಾತ ಸಂಗೀತ ನಿರ್ದೇಶಕ ನಾದ ಬ್ರಹ್ಮ ಡಾ. ಹಂಸಲೇಖಾ ಅವರಿಗೆ ಸಂಸ್ಥೆಯ ಗೌರವ ಸದಸ್ಯತ್ವ ನೀಡಲಾಗುವುದು.

“ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಯ ಗೌರವಾರ್ಥವಾಗಿ ಅವರ ಈ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ. ಅವರ ದೂರದೃಷ್ಟಿ, ಸಾಧನೆ, ಬದುಕು, ಮೌಲ್ಯಗಳು, ನಾಯಕತ್ವ, ಸಮಾಜದ ಬಗ್ಗೆಗಿನ ಕಾಳಜಿ ನಮಗೆಲ್ಲರಿಗೂ ಸದಾ ದಾರಿದೀಪ. ಇವೆಲ್ಲರದ ಸಂಕೇತವಾಗಿ ಅವರ ಪ್ರತಿಮೆ ಅನಾವರಣಗೊಳಿಸಲಾಗುತ್ತಿದೆ,” ಎಂದು ಅವರು ತಿಳಿಸಿದರು.

ಇದೆ ಸಂದರ್ಭದಲ್ಲಿ ನಾದ ಬ್ರಹ್ಮ ಡಾ. ಹಂಸಲೇಖ ನಿರ್ದೇಶಿಸಿರುವ ಜಯಹೇ ನಾಲ್ವಡಿ ಕೃಷ್ಣರಾಜ ಒಡೆಯರ್ ಕಿರು ಚಿತ್ರದ ಪ್ರದರ್ಶನ ನಡೆಯಲಿದೆ. ಈ ಕಿರು ಚಿತ್ರ ನಾಲ್ವಡಿ ಅವರ ಸಾಧನೆಗಳನ್ನು ಬೆಳ್ಳಿತೆರೆಯಲ್ಲಿ ಪ್ರಸ್ತುತ ಪಡಿಸುತ್ತ ಅವರಿಗೆ ಈ ನಾಡಿನ ಕೃತಜ್ಞತೆ ಅರ್ಪಿಸುತ್ತದೆ.

ಸಭಾ ಕಾರ್ಯಕ್ರಮದ ಬಳಿಕ, ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳ ಭರಪೂರ ಮನೋರಂಜನೆ ಇದೆ. ಮುಂಬೈ, ಕೋಲ್ಕೊತಾ, ಚೆನ್ನೈನ ಖ್ಯಾತ ನೃತ್ಯ ತಂಡಗಳ ಪ್ರದರ್ಶನ, ಕನ್ನಡದ ಹೆಮ್ಮೆಯ ಬಾಲ ಕಲಾವಿದ ಅರ್ಜುನ್ ಇಟಗಿ ಹಾಡು, ನೋಡುಗರನ್ನು ಮನೋರಂಜನಾ ಲೋಕದಲ್ಲಿ ತೇಲಾಡಿಸಲಿದೆ.

ಮಾಜ್ಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ, ಪ್ರಸಿದ್ಧ ಕ್ರೀಡಾಪಟುಗಳಾದ ಅನಿಲ್ ಕುಂಬ್ಳೆ, ಪ್ರಕಾಶ್ ಪಡುಕೋಣೆ
ರಾಜಧಾನಿ ಬೆಂಗಳೂರಿನ ಪ್ರಖ್ಯಾತ ಆಸ್ಪತ್ರೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್,
ಹೀಗೆ ಖ್ಯಾತನಾಮರು ಸದಸ್ಯರಾಗಿರುವ ಸಿಟಿ ಇನ್ಸಿಟ್ಯೂಟ್ ಗೆ ಶತಮಾನಗಳ ಇತಿಹಾಸವಿದೆ. ಈ ದೇಶದ ಪ್ರತಿಷ್ಠಿತ ಕ್ಲಬ್ ಗಳಲ್ಲೊಂದಾದ ಇದಕ್ಕೆ 1902ರಲ್ಲಿ ಅಂದಿನ ಮೈಸೂರು ದೊರೆಗಳಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಎರಡೂವರೆ ಎಕರೆ ಭೂಮಿಯನ್ನು ನಗರದ ಹೃದಯ ಭಾಗದಲ್ಲಿ ಮಂಜೂರು ಮಾಡಿ, ಪ್ರೋತ್ಸಾಹ ನೀಡಿದ್ದರು.

ಪತ್ರಿಕಾಗೋಷ್ಠಿಯಲ್ಲಿ ಸಿಟಿ ಇನ್ಸಿಟ್ಯೂಟ್ ಅಧ್ಯಕ್ಷ ಶ್ರೀ ಕೆ ಸುಕುಮಾರ ಅವರ ಜೊತೆಯಲ್ಲಿ ಉಪಾಧ್ಯಕ್ಷ ಶ್ರೀ ಎಸ್ ಸಿ ಚಂದ್ರಶೇಖರ್, ಗೌರವ ಕಾರ್ಯದರ್ಶಿ ಲಕ್ಷ್ಮೀಶ ಚಂದ್ರ, ಗೌರವ ಖಜಾಂಚಿ ವಿರೂಪಾಕ್ಷ ಬಿ ಪಿ, ಈ ಬಗ್ಗೆ ಮಾಹಿತಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button