
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಧಾರವಾಡ ಎಎಸ್ ಪಿ ನಾರಾಯಣ ಭರಮನಿ ಅವರು ಬೆಳಗಾವಿ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆಯ ನೂತನ ಡಿಸಿಪಿಯಾಗಿ ಎನ್.ವಿ.ಭರಮನಿ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಧಾರವಾಡ ಜಿಲ್ಲೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಭರಮನಿ ಅವರಿಗೆ ರಾಜ್ಯ ಸರಕಾರ ಬೆಳಗಾವಿ ಡಿಸಿಪಿಯಾಗಿ ನೇಮಕ ಮಾಡಿತ್ತು. ಅದರಂತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಡಿಸಿಪಿ ನಿರಂಜನ ರಾಜೆ ಅರಸ ಅಧಿಕಾರ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಡಿಸಿಪಿ ನಾರಾಯಣ ಭರಮನಿ, ರಾಜ್ಯ ಸರಕಾರ ನನಗೆ ಬೆಳಗಾವಿ ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ನಿಯುಕ್ತಿ ಮಾಡಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ತಿಳಿಸಿದರು.
ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೆ ಒಳಗಾಗಿದ್ದ ನಾರಾಯಣ ಭರಮನಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು.