Belagavi NewsBelgaum NewsKannada NewsKarnataka NewsLatest

*ವೈದ್ಯಕೀಯ ವೃತ್ತಿ ಸಮಾಜ ಮುಖಿಯಾಗಲಿ: ಕಾರಂಜಿ ಮಠದ ಗುರುಸಿದ್ಧ ಶ್ರೀಗಳು*

ನೀಟ್ ದಲ್ಲಿ ರ್‍ಯಾಂಕ್ ವಿಜೇತ ಬೈಲಹೊಂಗಲದ ವಿದ್ಯಾರ್ಥಿಗಳಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವೈದ್ಯ ವೃತ್ತಿ ಪವಿತ್ರವಾದ ಸೇವೆ ಅದು ಸಮಾಜಕ್ಕೆ ಮೀಸಲಾಗಿಟ್ಟರೆ ಇನ್ನೂ ಶ್ರೇಷ್ಠವೆಂದು ಕಾರಂಜಿ ಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ನುಡಿದರು.


ಅವರು ದೇವರಾಜ್ ಅರಸ್ ಬಡಾವಣೆ ನಾಗನೂರು ರುದ್ರಾಕ್ಷಿ ಮಠದ ಶ್ರೀಮತಿ ಚಿನ್ನಮ್ಮ ಹಿರೇಮಠ್ ವೃದ್ಧಾಶ್ರಮದಲ್ಲಿ ಹಮ್ಮಿಕೊಂಡಿದ್ದ ಬೆಳಗಾವಿ ಜಿಲ್ಲೆ ಬೈಲಹೊಂಗಲ್ಲಿನ ಪ್ರತಿಭಾವಂತ ವೈದ್ಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಪುಸ್ತಕ, ಸಮವಸ್ತ್ರ ಹಾಗೂ ವೈದ್ಯಕೀಯ ಸಾಮಗ್ರಿಗಳನ್ನು ಅರ್ಪಿಸಿ ಆಶೀರ್ವಚನ ನೀಡಿದರು.


ರಾಷ್ಟ್ರಮಟ್ಟದಲ್ಲಿ ಅಗ್ರ ಶ್ರೇಯಾಂಕವನ್ನು ಪಡೆಯುವುದರ ಮೂಲಕ ವೈದ್ಯಕೀಯ ಸೀಟುಗಳನ್ನು ಪಡೆದು ತಂದೆ ತಾಯಿಗಳ ಕನಸನ್ನು ಈಡೇರಿಸಿದ್ದೀರಿ. ಮುಂದಿನ ಐದು ವರ್ಷಗಳ ವೈದ್ಯಕೀಯ ಕೋರ್ಸ್ ಯಶಸ್ವಿಯಾಗಿ ಪೂರೈಸಬೇಕು. ಕೇವಲ ವೈದ್ಯರಾಗುವುದು ಮಾತ್ರವಲ್ಲ ಸಮಾಜದ ಸೇವೆಯಲ್ಲಿ ತಮ್ಮನ್ನು ತೊಡಗಿಸುವಂಥ ಆಗಬೇಕು. ಹಣವನ್ನು ಗಳಿಸುವುದು ಮಾತ್ರ ವೈದ್ಯರ ಕೆಲಸವಲ್ಲ ರೋಗಿಯ ಮನಸ್ಸಿಗೆ ಹಿತವಾದ ಮಾತುಗಳನ್ನಾಡುತ್ತಾ ಚಿಕಿತ್ಸೆಯನ್ನು ನೀಡಿದ್ದೆ ಆದರೆ ರೋಗ ವಾಸಿಯಾಗುವುದರಲ್ಲಿ ಸಂದೇಹವಿಲ್ಲ. ಒಂದು ಕಾಲದಲ್ಲಿ ವೈದ್ಯರು ನಾಡಿ ಬಡಿತಿ ನ ಮೂಲಕ ಚಿಕಿತ್ಸೆಯನ್ನು ನೀಡುತ್ತಿದ್ದರು ಇಂದು ಪ್ರತಿಯೊಂದು ಚಿಕಿತ್ಸೆಯಪೂರ್ವದಲ್ಲಿ ಅನೇಕ ಪರೀಕ್ಷೆಗಳನ್ನು ಮಾಡಲು ತಿಳಿಸುತ್ತಿದ್ದಾರೆ. ರೋಗಿಯಿಂದ ಅತಿ ಹೆಚ್ಚು ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ತನು ಮನದಿಂದ ಆವೃತ್ತಿಯನ್ನು ಸಮಾಜಕ್ಕೆ ಅರ್ಪಿಸುವಂತಾಗಬೇಕು. ನಮ್ಮ ಸಂಸ್ಕಾರವನ್ನು ಪರಂಪರೆಯನ್ನು ಎಂದಿಗೂ ಮರೆಯಬಾರದು. ವೈದ್ಯ ದೇವುೋಭವ ಎಂಬ ಮಾತಿಗೆ ಆದರ್ಶವಾಗಿ ಬದುಕಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಖ್ಯಾತ ಬಂಜೆತನ ಹಾಗೂ ಸ್ತ್ರೀರೋಗ ತಜ್ಞರು ಜನನಿ ಟ್ರಸ್ಟ್ ನ ಕಾರ್ಯದರ್ಶಿಗಳಾದ ಡಾ. ದತ್ತು ಪ್ರಸಾದ್ ಗಿಜರೇ ಅವರು ಮಾತನಾಡಿ, ಪ್ರತಿ ವರ್ಷ ರಾಮಣ್ಣವರ ಟ್ರಸ್ಟ್ ನೀಟ್ ಪರೀಕ್ಷೆಯಲ್ಲಿರ್‍ಯಾಂಕ್ ಪಡೆದ ಬೈಲಹೊಂಗಲದ ವೈದ್ಯ ವಿದ್ಯಾರ್ಥಿಗಳನ್ನು ಕರೆದು ಸನ್ಮಾನ ಮಾಡುತ್ತಿದೆ, ಅದರ ಉದ್ದೇಶ ಸಮಾಜ ಸೇವೆಯಲ್ಲಿ ನೀವು ತೊಡಗಬೇಕು. ಇಂದು ವೈದ್ಯಕೀಯ ಕೋರ್ಸುಗಳನ್ನು ಕಲಿಯಲು ಸಾಕಷ್ಟು ಅನುಕೂಲತೆಗಳನ್ನು ಕಲ್ಪಿಸಿಕೊಡಲಾಗಿದೆ. ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ, ಪಠ್ಯಕ್ಕೆ ಪೂರಕವಾದ ಅನೇಕ ಗ್ರಂಥಗಳನ್ನು ಅಭ್ಯಾಸ ಮೂಲಕ, ಹಾಗೂ ದೈವಿಕ ಚಿಂತನೆಗಳನ್ನ ಗಮನದಲ್ಲಿಟ್ಟುಕೊಂಡು ವೈದ್ಯ ಅಧ್ಯಯನವನ್ನು ಪೂರೈಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಾದವರು ಅನ್ಯ ಚಟಗಳಿಗೆ ದಾಸರಾಗದೆ, ಅತ್ಯಂತ ನಿಷ್ಠೆಯಿಂದ ಬದ್ಧತೆಯಿಂದ ಈ ವೃತ್ತಿ ಕೋರ್ಸವನ್ನು ಪೂರೈಸುವುದು ಅಷ್ಟೇ ಮುಖ್ಯ. ಇಂದು ವೈದ್ಯಕೀಯ ವೃತ್ತಿಯನ್ನ ಮುಂದುವರ್ಸಿಕೊಂಡು ಹೋಗುವುದು ಅಷ್ಟು ಸುಲಭವಾಗಿಲ್ಲ, ಎಂಡಿ ಕೋರ್ಸುಗಳು ಸಂಖ್ಯೆ ವಾಗಿ ತೆರೆದುಕೊಂಡಿವೆ. ನಮ್ಮ ಉತ್ತಮವಾದ ಪ್ರಾಕ್ಟೀಸ್ ನಮ್ಮನ್ನು ಬೆಳೆಸುತ್ತದೆ. ಜೊತೆಗೆ ಪ್ರತಿನಿತ್ಯ ಯೋಗ ಧ್ಯಾನ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ನಾವು ತೊಡಗಿದ್ದಿಯಾದರೆ ವೈದ್ಯಕೀಯ ವೃತ್ತಿ ಯಶಸ್ವಿಗೊಳ್ಳುತ್ತದೆ. ನಿಸ್ವಾರ್ಥವಾಗಿ ನಮ್ಮನ್ನು ಸಮಾಜಕ್ಕೆ ಸಮರ್ಪಿಸಿಕೊಂಡು ದುಡಿಯಬೇಕೆಂದು ಹೇಳಿದರು.


ನಾಡಿನ ಖ್ಯಾತ ಸಾಹಿತಿ ಡಾ. ಗುರುದೇವಿ ಹುಲೆಪ್ನವರ ಮಠ ಅವರು ಮಾತನಾಡಿ ತಂದೆ ತಾಯಿಗಳ ಗುರು ಹಿರಿಯರ ಆದರ್ಶ ಪಥದಲ್ಲಿ ನೀವು ಮುನ್ನಡೆಯಬೇಕು. ನಿಮ್ಮ ಜೀವನದ ಅಮೂಲ್ಯವಾದ ಸಾಧನೆಗೆ ಸಾಕ್ಷಿಯಾಗಿದ್ದೀರಿ. ಮುಂದೆಯೂ ವೈದ್ಯಕೀಯ ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿಕೊಳ್ಳಬೇಕು. ನಿಮ್ಮೆಲ್ಲರಿಗೂ ಸ್ಪೂರ್ತಿಯ ಸೆಳೆಯಾಗಿರುವ ಡಾ. ಮಹಾಂತೇಶ್ ರಾಮಣ್ಣವರ ದಾರಿಯಲ್ಲಿ ಮುನ್ನಡೆಯಬೇಕು ಎಂದು ಹೇಳಿದರು.

ಸ್ವಾಗತ ಕೋರಿ ಪ್ರಸ್ತಾವಿಕ ನುಡಿಗಳನ್ನು ಆಡಿದ ಡಾ. ಮಹಂತೇಶ್ ರಾಮಣ್ಣವರ್ ಅವರು ವೃದ್ಧಾಶ್ರಮದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ಸಂದೇಶವನ್ನು ರವಾನಿಸಲಾಗುತ್ತಿದೆ. ಸಮಾಜ ಸೇವೆಗೆ ನಮ್ಮ ಬದುಕು ಮೀಸಲಾಗಿರಬೇಕು, ಜೀವನದಲ್ಲಿ ನಾವು ಏನೆಲ್ಲವನ್ನು ಗಳಿಸಬಹುದು ಆದರೆ ತಂದೆ ತಾಯಿಗಳನ್ನು ಋಣವನ್ನು ತೀರಿಸಲಾಗುವುದಿಲ್ಲ. ನಮ್ಮ ಬದುಕು ಸಮಾಜಮುಖಿಯಾಗಲಿ, ಪವಿತ್ರವಾದ ವೃತ್ತಿಯನ್ನು ಪಡೆಯುವ ಪೂರ್ವದಲ್ಲಿ ಪರಿಸರಮದಿಂದ ಅಭ್ಯಾಸ ಎಂದು ಕಿವಿಮಾತು ಹೇಳಿದರು.


ವೇದಿಕೆ ಮೇಲೆ ಮುದ್ರಾಶ್ರಮದ ಸಂಯೋಜಕರಾದ ಎಂ ಎಸ್ ಚೌಗುಲಾ, ಪ್ರೊಫೆಸರ್ ಕಿರಣ್ ಚೌಗಲಾ, ಯುನಿವರ್ಸಲ್ ಬುಕ್ಸ್ ಮತ್ತು ಮೆಡಿಕಲ್ ಎಕ್ವಿಪ್ಮೆಂಟ್ಸ್ ಸೋಮಶೇಖರ್ ಕನಗಲಿ, ಡಾ ಮಹೇಶ್ ಗುರಣ್ ಗೌಡರ ಉಪಸ್ಥಿತರಿದ್ದರು.

ವೈದ್ಯಕೀಯ ವಿದ್ಯಾರ್ಥಿ ಯೋಗ್ಯ ಶೆಟ್ಟಿ ನಿರೂಪಿಸಿದರು. ನಿಖಿಲ್ ಹೂಲಿ ಪ್ರಾರ್ಥಿಸಿದನು. ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button