*ಮಹಿಳೆ ಕೈಕಟ್ಟಿ ಕುಳಿತಿದ್ದರೆ ಜಪಾನ್ ಪ್ರಗತಿ ಸಾಧ್ಯವಾಗುತ್ತಿರಲಿಲ್ಲ: ಭೋರಸೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ವಿಭಾಗ ಮಟ್ಟದ ಗೃಹ ಇಲಾಖೆ ಸಿಬ್ಬಂದಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಾಂತ್ವನ ಮತ್ತು ಸಖಿ ಕೇಂದ್ರದ ಸಿಬ್ಬಂದಿಗೆ ಹಾಗೂ ಬೆಳಗಾವಿ ವಿಭಾಗದ 7 ಜಿಲ್ಲೆಯ ಅಕ್ಕ ಪಡೆ ಸಿಬ್ಬಂದಿಗೆ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಯುವುದು ಹಾಗೂ ಅಕ್ಕ ಪಡೆ ಕಾರ್ಯನಿರ್ವಹಣೆ ಬಗ್ಗೆ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗೃಹ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ಆಯುಕ್ತರ ಕಛೇರಿಯಲ್ಲಿ ಕಾರ್ಯಕ್ರಮ ನಡೆಯಿತು.
ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಭೋರಸೆ, ರಾಜ್ಯ ಮಟ್ಟದ ಅಕ್ಕ ಪಡೆ ಸಂಯೋಜಕರಾದ ಶೈನಿ ರಾಜೇಂದ್ರ ಕುಮಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಉಪನಿರ್ದೇಶಕ ಚೇತನ್ಕುಮಾರ್ ಎಂ.ಎನ್ ಹಾಗೂ ಬೆಳಗಾವಿ ವಿಭಾಗದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರುಗಳು ಉಪಸ್ಥಿತರಿದ್ದರು.
ಬೆಳಗಾವಿ ಜಿಲ್ಲಾ ಪೊಲೀಸ್ ಆಯುಕ್ತರಾದ ಭೂಷಣ ಗುಲಾಬರಾವ್ ಭೋರಸೆ ಕಾರ್ಯಕ್ರಮವನ್ನು ಉದ್ಟಾಟಿಸಿ, ದೇಶದ ಪ್ರಗತಿ ಸಾಧಿಸಲು ಮಹಿಳೆಯರ ಪಾತ್ರ ದೊಡ್ಡದು ಎಂದು, ಜಪಾನ ದೇಶದ ಎರಡನೇ ಮಹಾಯುದ್ಧದ ನಂತರದ ಪರಿಸ್ಥಿತಿಯನ್ನು ಉದಾಹರಣೆ ನೀಡಿದರು. ಮಹಿಳೆ ಕೈ ಕಟ್ಟಿ ಕುಳಿತಿದ್ದರೆ ಜಪಾನ್ ದೇಶ ಇಂದು ಇಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ ಎಂದು ವಿವರಿಸಿದರು.
ನಮ್ಮ ದೇಶದಲ್ಲಿ ಮಹಿಳೆ ಮತ್ತು ಹೆಣ್ಣು ಮಗುವಿನ ಸಂರಕ್ಷಣೆ ಮತ್ತು ಸುರಕ್ಷತೆ ಮಹತ್ವ ತಿಳಿಸಿದರು.
ರಾಜ್ಯ ಸಂಯೋಜಕರಾದ ಶೈನಿ ರಾಜೇಂದ್ರ ಕುಮಾರ ಇವರು ಅಕ್ಕ ಪಡೆಯ ಬಗ್ಗೆ ಪ್ರಸ್ತಾವಿಕವಾಗಿ ವಿವರಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಚೇತನ್ಕುಮಾರ್ ಎಂ ಎನ್ ಮಹಿಳೆಯರ ಶಕ್ತಿಯನ್ನು ಹಾಗೂ ಮಹಿಳೆಯ ಸಾಮರ್ಥ್ಯವನ್ನು ಪುರಾಣದ ಉಲ್ಲೇಖ ನೀಡಿ ತಿಳಿಸಿದರು.
ಕಾರ್ಯಕ್ರಮವನ್ನು ಪಾರ್ವತಿ ಹೊನವಾಡ ನಿರೂಪಿಸಿದರು ಹಾಗೂ ಸುಚೇತಾ ಕುಲಕರ್ಣಿ ವಂದನಾರ್ಪಣೆ ಮಾಡಿದರು.


