Latest

ಸುಗ್ರಿವಾಜ್ಞೆ ಮೂಲಕ ಗೋಹತ್ಯೆ ನಿಷೇಧ ಜಾರಿ : ಸಚಿವ ಪ್ರಭು ಚವ್ಹಾಣ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಕುತಂತ್ರದಿಂದ ಕಳೆದ ಅಧಿವೇಶನದಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಪರಿಷತ್ತಿನಲ್ಲಿ ಅಂಗೀಕಾರವಾಗಲಿಲ್ಲ ಆದರೇ ಗೋವುಗಳ ಸಂರಕ್ಷಣೆಗೆ ಬಿಜೆಪಿ ಬದ್ಧವಾಗಿದೆ ಸುಗ್ರಿವಾಜ್ಞೆ ತರುವ ಮೂಲಕ ಮಸೂದೆ ಜಾರಿಗೊಳಿಸಲಾಗಿದೆ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಇಂದು ನಡೆದ ಸಚಿವ ಸಂಪುಟದಲ್ಲಿ ಗೋಹತ್ಯೆ ಮಸೂದೆಗೆ ಸುಗ್ರಿವಾಜ್ಞೆ ಮೂಲಕ ಜಾರಿಗೆ ತರಲು ಅನುಮೋದನೆ ದೊರೆತಿದೆ  ಎಂದು ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತಪಡಿಸಿದ್ದಾರೆ. ಗೋವು ನಮ್ಮ ಭಾರತೀಯ ಸಂಸ್ಕೃತಿಯ, ಶ್ರದ್ದೆಯ ಹಾಗೂ ರೈತರ ಜೀವನಾಧಾರದ ಮೂಲವಾಗಿದೆ. ವರ್ಷದಿಂದ ವರ್ಷಕ್ಕೆ ಗೋವುಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿರುವುದು ನೀಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಪಕ್ಷಭೇದವನ್ನು ಮರೆತು ಗೋವುಗಳ ಸಂರಕ್ಷಣೆಗೆ ಎಲ್ಲರೂ ಮುಂದಾದರೆ ನಾಡಿನ ಪಶುಸಂಪತ್ತು ವೃದ್ಧಿಸುತ್ತದೆ. ಕೇವಲ ರಾಜಕೀಯ ದುರುದ್ದೇಶಕ್ಕೆ ಮಸೂದೆಯನ್ನು ವಿರೋಧಿಸಿ ಸಮಾಜದಲ್ಲಿ ಜನಸಾಮಾನ್ಯರ ನಡುವೆ ತಪ್ಪು ಕಲ್ಪನೆ ಮೂಡಿಸುವುದು ಅಸಹನೀಯ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದರು.

Home add -Advt

ಬಿಜೆಪಿ ಸರ್ಕಾರದ ಅವಧಿಯಲ್ಲಿ 2010 ರಲ್ಲಿ ಗೋಹತ್ಯೆ ನಿಷೇಧ ಮಸೂದೆ ಮಂಡನೆ ಮಾಡಿದಾಗ ಕೇಂದ್ರ ಸರ್ಕಾರಕ್ಕೆ ಇದ್ದ ಆಕ್ಷೇಪಣೆಗಳನ್ನು ಈಗಿನ ಮಸೂದೆಯಲ್ಲಿ ಸರಿಪಡಿಸಲಾಗಿದೆ. ಹಳೆಯ ಮಸೂದೆಯಲ್ಲಿ ಎಮ್ಮೆ /ಕೋಣಗಳ ಹತ್ಯೆಗೂ ನಿಷೇಧವಿತ್ತು ಆದರೆ 2020ರ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕದಲ್ಲಿ 13 ವರ್ಷದ ಎಮ್ಮೆ/ಕೋಣಗಳಿಗೆ ನಿರ್ಬಂಧ ವಿರುತ್ತದೆ. ಹಾಗಾಗಿ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಇದ್ದ ಆಕ್ಷೇಪಕಣೆ ಇಲ್ಲಿ ಪರಿಗಣನೆಗೆ ತೆಗೆದುಕೊಂಡು ಮಸೂದೆ ರೂಪಿಸಲಾಗಿದೆ ಹೀಗಿದ್ದಾಗಲೂ ಇದನ್ನು ಕಾಂಗ್ರೆಸ್ ವಿರೊಧಿಸುತ್ತಿರುವುದು ನಾಚಿಕೆಗೇಡು ಎಂದರು.

2019 ರ ಜಾನುವಾರು ಗಣತಿ ಪ್ರಕಾರ 2,38,296 ಗೋವುಗಳನ್ನು ಪ್ರತಿವರ್ಷ ವಧೆ ಮಾಡಲಾಗುತ್ತಿದೆ. ಒಂದು ದಿನದ ವಿಳಂಬವು 662 ಗೋವುಗಳ ವಧೆಗೆ ಕಾರಣವಾಗುತ್ತದೆ. ಇದೇ ವೇಗದಲ್ಲಿ ಗೋವುಗಳ ವಧೆ ನಡೆಯುತ್ತ ಹೋದರೆ ಮುಂದಿನ ದಿನಗಳಲ್ಲಿ ಗೋವುಗಳನ್ನು ಪುಸ್ತಕಗಳಲ್ಲಿ ನೋಡುವ ಸಮಯ ದೂರವಿಲ್ಲ. ಅಕ್ರಮ ಗೋವುಗಳ ಸಾಗಣೆ ಮತ್ತು ವಧೆ ತಡೆಯುವುದು ನಮ್ಮ ತುರ್ತು ಆದ್ಯತೆಯಾಗಿದೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಜಾರಿಗೆ ಬಂದರೆ ಈ ಅಕ್ರಮಗಳಿಗೆ ಕಡಿವಾಣ ಬೀಳಲಿದೆ ಎಂದರು.

ಗೋವುಗಳ ಸಂರಕ್ಷಣೆಗೆ ಉತ್ತರಪ್ರದೇಶ ಮತ್ತು ಗುಜರಾತ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾದ ಪ್ರಯೋಗಗಳು ನಡೆಯುತ್ತಿದ್ದು ಗೋವುಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡುಬಂದಿದೆ. ಉದ್ಯೋಗ ಸೃಷ್ಟಿ, ಗೋವಿನ ದೇಶಿ ಉತ್ಪನ್ನಗಳ ಮಾರಾಟ ಮತ್ತು ಬಳಕೆ ಸಹ ಹೆಚ್ಚುತ್ತಿದೆ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ನನ್ನ ಎಲ್ಲ ಸಚಿವ ಸಂಪುಟ ಸಹೋದ್ಯೋಗಿಗಳಿಗೆ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರಿಗೆ ರಾಜ್ಯದ ಎಲ್ಲ ಗೋವುಗಳ ಸಂರಕ್ಷಣೆಯಲ್ಲಿ ತೊಡಗಿರುವುವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

Related Articles

Back to top button