Kannada NewsKarnataka NewsLatest

ಬೆಳಗಾವಿಯನ್ನು ಸರ್ವಾಂಗ ಸುಂದರವಾಗಿ ರೂಪಿಸಲು ಜನರು ಆಶಿರ್ವದಿಸಿದ್ದಾರೆ – ಕಾರಜೋಳ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಜನರು ಪ್ರಧಾನಿ ಮೋದಿಯವರ ಕಾರ್ಯತತ್ಪರತೆಗೆ ಹಾಗೂ ಬೆಳಗಾವಿಯ ಅಭಿವೃದ್ಧಿ ಗಾಗಿ ಬಿಜೆಪಿಗೆ ಪ್ರಚಂಡ ಬೆಂಬಲ ವನ್ನು ನೀಡಿ ಆಶೀರ್ವದಿಸಿದ್ದಾರೆ ಎಂದು ಬೆಳಗಾವಿ ಮಹಾನಗರ ಚುನಾವಣಾ ಉಸ್ತುವಾರಿ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ  ಹೇಳಿದ್ದಾರೆ.
ನಾವು ಪ್ರಗತಿ ಬಗ್ಗೆ ಮಾತಾಡಿದೆವು. ಬೆಳಗಾವಿ ಮಹಾನಗರವನ್ನು ಸರ್ವಾಂಗ ಸುಂದರವಾಗಿ ರೂಪಿಸಲು ಜನರು ಆಶಿರ್ವದಿಸಿದ್ದಾರೆ.  ನಾವು ಎಲ್ಲ ಸಮುದಾಯದವರನ್ನು ನಮ್ಮ ಜೊತೆಗೆ ಸೇರಿಸಿ ಅವರ ಹಿತದ ಬಗ್ಗೆ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ಕಾಂಗ್ರೆಸ್ ದಲಿತರನ್ನು ಮತ್ತು ಹಿಂದುಳಿದವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಪರಿಗಣಿಸುತ್ತದೆ. ಈ ಸಮುದಾಯದವರು ಸ್ವಾಭಿಮಾನವನ್ನು ಮೆರೆದು ಕಾಂಗ್ರೆಸ್ ಗೆ ಸರಿಯಾದ  ಪಾಠವನ್ನು ಕಲಿಸಿದ್ದಾರೆ ಎಂದೂ ಸಚಿವರು ಹೇಳಿದರು.
ಬಿಜೆಪಿಯು ಬೆಳಗಾವಿಯ ಸಮಗ್ರ ಅಭಿವೃದ್ಧಿ ಪರವಾಗಿದೆ ಎಂದೂ ಕಾರಜೋಳ ಹೇಳಿದರು.
ಕೊರೊನಾ ಸಂಕಷ್ಟ , ಪ್ರವಾಹ ಹಾಗೂ ಮಳೆಯಿಂದಾಗಿರುವ ನಷ್ಟದ ಮಧ್ಯೆಯೂ ಕೂಡ ಅಭಿವೃದ್ಧಿ ಪರ ಚಿಂತನೆ ಮಾಡಿರುವ ಸರ್ಕಾರ ನಮ್ಮದು. ನಮ್ಮ ಸರ್ಕಾರದ ಆಡಳಿತವು ಜನಪರ ಮತ್ತು ಅಭಿವೃದ್ಧಿ ಪರ ಎಂಬುದಕ್ಕೆ ಇಂದಿನ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ್ ಕಟೀಲ್ ಅವರು ಬೆಳಗಾವಿ ಮಹಾನಗರ ಪಾಲಿಕೆಯ ಉಸ್ತುವಾರಿ ವಹಿಸಿದ್ದರು. ನನ್ನ ಮೇಲಿನ ಭರವಸೆ, ಪಕ್ಷದ ನಾಯಕರ ಭರವಸೆ ಮತ್ತು ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಕಾರ್ಯಕರ್ತರು, ಶಾಸಕರು, ಸಂಸದರು ಎಲ್ಲರೂ ನಿರಂತರವಾಗಿ ಪ್ರಯತ್ನಿಸಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದೂ ಕಾರಜೋಳ ಹೆಳಿದ್ದಾರೆ.
ದೇಶದಲ್ಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರ ಆಡಳಿತ, ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರ ಆಡಳಿತಕ್ಕೆ ಇಂದು ಜನ ಮನ್ನಣೆ ನೀಡಿದ್ದಾರೆ ಎಂದು  ಕಾರಜೋಳ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button