Kannada NewsKarnataka NewsNationalPolitics

*ಜನಪರ ಉದ್ದೇಶವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಜನಪರ ಉದ್ದೇಶ, ಅರ್ಥಗರ್ಭಿತ ಕಾರಣವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು. 

“ಎಸ್.ಎಂ ಕೃಷ್ಣ ಅವರು ಕಾವೇರಿ ನೀರಿಗಾಗಿ ಪಾದಯಾತ್ರೆ ಮಾಡಿದ್ದರು. ಭಾರತವನ್ನು ಒಂದುಗೂಡಿಸಲು, ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ, ಭ್ರಷ್ಟಾಚಾರ ವಿರುದ್ಧ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದ್ದರು. ನಾವು ಗಣಿ ಲೂಟಿ ಖಂಡಿಸಿ ರಾಜ್ಯ ಹಾಗೂ ದೇಶದ ಸಂಪತ್ತು ರಕ್ಷಣೆಗೆ ಬಳ್ಳಾರಿ ಪಾದಯಾತ್ರೆ ಮಾಡಿದೆವು. ಕಾವೇರಿ ಜಲಾನಯನದ 10 ಜಿಲ್ಲೆಗಳಿಗೆ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ನಾವು ಪಾದಯಾತ್ರೆ ಮಾಡಿದ್ದೆವು” ಎಂದು ತಿಳಿಸಿದರು. 

“ಈಗ ಬಿಜೆಪಿ, ಜೆಡಿಎಸ್ ಮಾಡುತ್ತಿರುವ ಪಾದಯಾತ್ರೆ ಸದ್ದಿದೆಯಾ? ಅವರ ಪಾದಯಾತ್ರೆಯ ವಿಚಾರವೇನು? ಹಿಂದುಳಿದ ವರ್ಗದ ನಾಯಕ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದನ್ನು ಸಹಿಸಲಾಗದೇ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಪಾದಯಾತ್ರೆಯಲ್ಲಿ ಬೇರೆ ಏನಾದರೂ ಮಹತ್ವದ ವಿಚಾರವಿದೆಯೇ? ಅವರ ತಟ್ಟೆಯಲ್ಲೇ ಹೆಗ್ಗಣ ಬಿದ್ದಿದ್ದರೂ ಬೇರೆಯವರ ತಟ್ಟೆ ನೋಡುತ್ತಿದ್ದಾರೆ. ಅವರ ಪಾದಯಾತ್ರೆಗೆ ಜನರಿಂದ ಸ್ಪಂದನೆಯಿಲ್ಲ. ಪಾದಯಾತ್ರೆಯಲ್ಲಿ ಜನತಾದಳದ ಕಾರ್ಯಕರ್ತರೇ ಇಲ್ಲ. ಅವರು ಪಾದಯಾತ್ರೆಯಲ್ಲಿ ಹೊಡೆದಾಡಲಿ ಏನಾದರೂ ಮಾಡಿಕೊಳ್ಳಲಿ” ಎಂದು ತಿಳಿಸಿದರು. 

“ರಾಮನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ನಡೆದ ಪಾದಯಾತ್ರೆಯಲ್ಲಿ ಎಷ್ಟು ಜನ ಜೆಡಿಎಸ್ ಕಾರ್ಯಕರ್ತರು ಇದ್ದರು ಎಂಬುದನ್ನು ಮಾಧ್ಯಮಗಳ ಬಳಿ ಇರುವ ವಿಡಿಯೋಗಳಲ್ಲಿ ನೋಡಿ. ರಾಜ್ಯದ ಬೇರೆ ಬೇರೆ ಭಾಗಗಳಿಂದ ಬಿಜೆಪಿ ಕಾರ್ಯಕರ್ತರನ್ನು ಪಾದಯಾತ್ರೆಗೆ ಕರೆಸಲಾಗಿದೆ. ಅವರಲ್ಲಿ ಹೊಂದಾಣಿಕೆ ಎಲ್ಲಿದೆ? ಒಗ್ಗಟ್ಟು ಎಲ್ಲಿದೆ? ಅವರ ನಡುವೆ ಸಮನ್ವಯತೆ ಇಲ್ಲ ಎಂದು ಅವರೇ ಹೇಳಿದ್ದಾರೆ. ಅವರು ಒಂದಾಗಿರಲಿ ಅಥವಾ ಬೇರೆಯಾಗಿರಲಿ ನಮಗೆ ಯಾವುದೇ ಅಭ್ಯಂತರವಿಲ್ಲ” ಎಂದು ತಿಳಿಸಿದರು.

ನನ್ನ ವಿರುದ್ಧದ ಕುಮಾರಸ್ವಾಮಿ ಆರೋಪಕ್ಕೆ ದಾಖಲೆ ಎಲ್ಲಿವೆ?

“ಈಗ ಅವರ ಪಾದಯಾತ್ರೆ ವೇಳೆ ಬಿಜೆಪಿ ಕಾಲದಲ್ಲಿ ಆಗಿರುವ ಭ್ರಷ್ಟಾಚಾರದ ಆರೋಪಗಳ ಬಗ್ಗೆ ನಾವು ಕೇಳಿರುವ ಪ್ರಶ್ನೆಗಳಿಗೆ ಅವರು ಉತ್ತರಿಸಿಲ್ಲ. ಕುಮಾರಸ್ವಾಮಿ ಅವರಿಗೆ ಪ್ರತ್ಯೇಕವಾಗಿ ಒಂದಷ್ಟು ಪ್ರಶ್ನೆ ಮಾಡಿದ್ದೇವೆ. ಅವರು ನನ್ನ ಬಗ್ಗೆ ನಮ್ಮ ಕುಟುಂಬದವರ ಬಗ್ಗೆ ಏನಾದರೂ ಟೀಕೆ ಮಾಡಲಿ. ಅವರು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ. ನಾನು ಅವರ ಸಹೋದರನ ಆಸ್ತಿ ಹೇಗೆ ಬಂತು, ಎಲ್ಲಿಂದ ಬಂತು ಎಂಬುದನ್ನು ಬಿಚ್ಚಿಡಬೇಕಲ್ಲವೇ? ನನ್ನ ಮೇಲೆ ಅವರು ಅನೇಕ ಆರೋಪ ಮಾಡುತ್ತಿದ್ದಾರೆ. ಆ ಆರೋಪಗಳಿಗೆ ದಾಖಲೆ ಬೇಕಲ್ಲವೇ? ಅವರ ಅಕ್ರಮಗಳ ಬಗ್ಗೆ ಮಾಧ್ಯಮಗಳೇ ವರದಿ ಮಾಡುತ್ತಿವೆಯಲ್ಲ” ಎಂದು ಕಿಡಿಕಾರಿದರು.

ಕುಮಾರಸ್ವಾಮಿ ಪಲಾಯನವಾದಿಯಾಗಿದ್ದಾರಾ ಎಂದು ಕೇಳಿದಾಗ, “ಹಾಗೆಂದು ನಾನು ಹೇಳುತ್ತಿಲ್ಲ. ಕುಮಾರಸ್ವಾಮಿ ಅವರ ಬಾಯಲ್ಲಿ ಬಂದಿರುವ ಮಾತುಗಳನ್ನು ಮಂಡ್ಯದಲ್ಲಿ ತೋರಿಸಿದ್ದೇನೆ” ಎಂದು ತಿಳಿಸಿದರು.

ಬ್ಲಾಕ್ ಅಂಡ್ ವೈಟ್ ಟಿವಿ ಹಾಗೂ ವಿಸಿಆರ್ ಶಿವಕುಮಾರ್ ಆಸ್ತಿ ಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಕೇಳಿದಾಗ, “ಅವರು ಏನಾದರೂ ಹೇಳಿಕೊಳ್ಳಲಿ. ಈ ಬಗ್ಗೆ ಕನಕಪುರಕ್ಕೆ ಬಂದು ವಿಚಾರಿಸಲಿ. ನಮ್ಮ ತಂದೆ, ತಾತಾ ಹುರುಳಿ ಅಳೆಯುತ್ತಿದ್ದರೋ, ರಾಗಿ ಅಳೆಯುತ್ತಿದ್ದರೋ, ಕಡಲೇಕಾಯಿ ಅಳೆಯುತ್ತಿದ್ದರೋ ಅವೆಲ್ಲವೂ ಬೇರೆ ವಿಚಾರ. ನಾವು ಈಗಲೂ ತಿನ್ನುವುದು ಹುರುಳಿ, ಕಡಲೇಕಾಯಿ ಎಣ್ಣೆ ಹಾಗೂ ರಾಗಿಯನ್ನೇ. ನಾವು ಬೇರೆ ಬೆಳೆಯುತ್ತಿದೆವು ಎಂದು ಹೇಳುವುದಿಲ್ಲ. ನಮ್ಮ ಆಸ್ತಿ ಎಷ್ಟಿತ್ತು ಎಂದು ನಮ್ಮ ಊರಿನಲ್ಲಿ ಕೇಳಲಿ” ಎಂದು ತಿಳಿಸಿದರು.

ಕುಮಾರಸ್ವಾಮಿ ಅವರ ಪಾಲಿಗೆ ಶಿವಕುಮಾರ್ ಒನ್ ಲೈನ್ ಅಜೆಂಡಾ ಆಗಿರುವುದೇಕೆ ಎಂದು ಕೇಳಿದಾಗ, “ಅವರು ಅದನ್ನೇ ಅಜೆಂಡವಾಗಿ ಇಟ್ಟುಕೊಳ್ಳಲಿ ಬಿಡಿ” ಎಂದು ತಿಳಿಸಿದರು.

ಕುಮಾರಸ್ವಾಮಿ ವಿಚಾರದಲ್ಲಿ ರಾಜ್ಯಪಾಲರ ನಡೆ ಏನೆಂದು ಕಾದು ನೋಡಬೇಕು

ಕುಮಾರಸ್ವಾಮಿ ಅವರು 2007ರಲ್ಲಿ ಸಿಎಂ ಆಗಿದ್ದಾಗ ಸಂಡೂರು 550 ಎಕರೆ ಅಕ್ರಮವಾಗಿ ಗಣಿಗಾರಿಕೆಗೆ ನೀಡಿದ ಬಗ್ಗೆ ರಾಜ್ಯಪಾಲರು ವಿಚಾರಣೆಗೆ ನೀಡಲು ಹಿಂದೇಟು ನೀಡುತ್ತಿದ್ದಾರೆ ಎಂದು ಕೇಳಿದಾಗ, “ಈ ವಿಚಾರವಾಗಿ ಮಾಧ್ಯಮ ವರದಿ ಬಂದಿದೆ ಎಂದು ಕೇಳಿದೆ. ನಾನು ಅದನ್ನು ನೋಡಿಲ್ಲ. ಆ ಪ್ರಕರಣದಲ್ಲಿ ಚಾರ್ಜ್ ಶೀಟ್ ಆಗಿದೆ, ಸುಪ್ರೀಂ ಕೋರ್ಟ್ ನಿಂದ ವಿಚಾರಣೆಗೆ ಬಂದಿದೆ, ಈ ಬಗ್ಗೆ ತನಿಖೆ ಮಾಡಲು ಹೇಳಿದ್ದರಂತೆ. ಸುಪ್ರೀಂ ಕೋರ್ಟ್ ವಿಚಾರಣೆ ನಂತರ ಲೋಕಾಯುಕ್ತ ತನಿಖೆ ಮಾಡಿ ಕುಮಾರಸ್ವಾಮಿ ಅವರ ವಿಚಾರಣೆಗೆ ರಾಜ್ಯಪಾಲರ ಅನುಮತಿ ಕೇಳಿದರಂತೆ. ರಾಜ್ಯಪಾಲರು ಆ ಕಡತವನ್ನು ತಮ್ಮಲ್ಲೇ  ಇರಿಸಿಕೊಂಡಿದ್ದಾರೆ ಎಂದು ನನಗೆ ಮಾಹಿತಿ ನೀಡಿದರು. ಇದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಪರಿಶೀಲಿಸಬೇಕು. ಜಂತಕಲ್ ಹಾಗೂ ಇತರೆ ಗಣಿ ವಿಚಾರವಾಗಿ ಮಧ್ಯಮ ಸ್ನೇಹಿತರೆ ನನಗೆ ಮಾಹಿತಿ ಕಳುಹಿಸಿದ್ದು, ಅದನ್ನು ಸಂಪೂರ್ಣವಾಗಿ ಪರಿಶೀಲಿಸಬೇಕಿದೆ. ಈ ವಿಚಾರವಾಗಿ ರಾಜ್ಯಪಾಲರು ಯಾವ ತೀರ್ಮಾನ ಮಾಡುತ್ತಾರೆ ಎಂದು ಕಾದುನೋಡೋಣ” ಎಂದು ತಿಳಿಸಿದರು.

ಕುಟುಂಬದವರ ರಕ್ಷಣೆ, ನಮ್ಮನ್ನು ಒಳಗೆ ಹಾಕಿಸಲು ಪ್ರಯತ್ನ ನಡೆಯುತ್ತಿದೆ

ದೇವೇಗೌಡರು ನಿನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, “ತಮ್ಮ ಕುಟುಂಬದವರನ್ನು ರಕ್ಷಣೆ ಮಾಡಿಕೊಳ್ಳಲು ಅವರು ಹೋಗಲೇ ಬೇಕಲ್ಲವೇ? ನಮ್ಮ ವಿರುದ್ಧ ದೂರು ನೀಡಿ, ಡಿ.ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯನವರನ್ನು ಒಳಗೆ ಹಾಕಲೇಬೇಕು ಎಂಬ ಪ್ರಯತ್ನಗಳು ನಡೆಯುತ್ತಲೇ ಇವೆ. ನಾನು ಎಲ್ಲದಕ್ಕೂ ಸಿದ್ಧವಿದ್ದೇನೆ” ಎಂದು ತಿಳಿಸಿದರು.

ದಿನಾ ಸಾಯುವವರಿಗೆ ಅಳುವವರಾರು?

ಸಿಎಂ ಹಾಗೂ ಡಿಸಿಎಂ ಅವರನ್ನು ಚಕ್ರವ್ಯೂಹಕ್ಕೆ ಸಿಲುಕಿಸಿದರೆ ಸರ್ಕಾರ ಪತನ ಸುಲಭ ಎಂಬುದು ಅವರ ಲೆಕ್ಕಾಚಾರವೇ ಎಂದು ಕೇಳಿದಾಗ, “ನಮ್ಮ ಹಳ್ಳಿ ಕಡೆ ಹೇಳುವಂತೆ ದಿನಾ ಸಾಯುವವರಿಗೆ ಅಳುವವರಾರು? ದಿನಾ ಬೆಳಗ್ಗೆ ಇವರ ಗೋಳು ಇದ್ದದ್ದೆ. ಮುಂಚೆಯಿಂದಲೂ ಇದರ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಈಗಲೂ ಹೋರಾಟ ಮುಂದುವರಿಸುತ್ತೇವೆ” ಎಂದು ತಿಳಿಸಿದರು.

ಶುಭಗಳಿಗೆ ನೋಡಿಕೊಂಡು ದಾಖಲೆ ಬಿಡುಗಡೆ

ಕುಮಾರಸ್ವಾಮಿ ಸಹೋದರನ ಆಶ್ತಿ ದಾಖಲೆ ಬಿಡುಗಡೆ ಮಾಡುತ್ತೀರಾ ಎಂದು ಕೇಳಿದಾಗ, “ಖಂಡಿತವಾಗಿಯೂ ಮಾಡಲೇಬೇಕು. ಅದಕ್ಕೆ ಶುಭದಿನ, ಶುಭ ಗಳಿಗೆ, ಶುಭ ನಕ್ಷತ್ರ ನೋಡಿ ಬಿಡುಗಡೆ ಮಾಡಬೇಕು. ಅದಕ್ಕಿಂತ ಮುಂಚೆ ನಮ್ಮ ಬಗ್ಗೆ ಮಾಡುತ್ತಿರುವ ಆರೋಪಗಳ ಬಗ್ಗೆ ದಾಖಲೆ ಬಿಚ್ಚಿ ಎಂದು ಹೇಳಿದ್ದೇನೆ” ಎಂದು ತಿಳಿಸಿದರು.

ಸದನದಲ್ಲಿ ಚರ್ಚೆ ಮಾಡಲು ನೀವು ಆಹ್ವಾನ ಕೊಟ್ಟರೂ ಅವರು ಬರಲಿಲ್ಲ ಎಂದು ಕೇಳಿದಾಗ, “ಈ ವಿಚಾರವಾಗಿ ಚರ್ಚೆ ಮಾಡಲು ಎರಡು ಬಾರಿ ಅಧಿವೇಶನಕ್ಕೆ ಬನ್ನಿ ಎಂದು ಆಹ್ವಾನ ನೀಡಿದೆ. ಅವರು ಬರಲಿಲ್ಲ. ಈಗ ಅವರ ಅಣ್ಣನ ಬಳಿ ದಾಖಲೆ ಕೊಟ್ಟು ಕಳಿಸಿ ಚರ್ಚೆ ಮಾಡಲಿ. ನಾನು ಸುಮ್ಮನೆ ಮಾಧ್ಯಮಗಳ ಮುಂದೆ ಮಾತನಾಡಿದರೆ ಅದು ಒಂದೆರಡು ದಿನ ಸುದ್ದಿಯಾಗಿ ಮರೆಯಾಗುತ್ತದೆ. ಆದರೆ, ಸದನದಲ್ಲಿ ಚರ್ಚೆಯಾದರೆ ಅದು ದಾಖಲೆಯಾಗಿ ಉಳಿದು ಮುಂದಿನ ತಲೆಮಾರಿನವರು ತಿಳಿಯಬಹುದು. ನನಗೆ ಈಗ ಸಮಯವಿಲ್ಲ. ಅವರ ಎಲ್ಲಾ ದಾಖಲೆ ತೆಗೆಸುತ್ತೇನೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button