Belagavi NewsBelgaum NewsKannada NewsKarnataka News

ಗ್ರಾಮ ಸಹಾಯಕರ ಸಂಘದಿಂದ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮ ಸಹಾಯಕರ ಸಂಘ, ಸವದತ್ತಿ ತಾಲೂಕ ಗ್ರಾಮ ಸಹಾಯಕರ ಸಂಘ, ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟ ಸಮಿತಿ ಹಾಗೂ ವಿವಿಧ ಪದಾಧಿಕಾರಿಗಳು ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್.ಸಂಗ್ರೇಶಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ಮನವಿ ಸಲ್ಲಿಸಿ ಮಾತನಾಡಿ, ಕರ್ನಾಟಕ ರಾಜ್ಯ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತಿರುವ ರಾಜ್ಯದ ಸು.೧೦೪೫೦ ಗ್ರಾಮ ಸಹಾಯಕರಿಗೆ ರಾಜ್ಯದಲ್ಲಿ ಜರಗುವ ಗ್ರಾಮ ಪಂಚಾಯತಿ, ತಾಲೂಕ, ಜಿಲ್ಲಾ ಪಂಚಾಯತಿ, ಪುರಸಭೆ, ಪಟ್ಟಣ ಸಭೆ, ಕಾರ್ಪೋರೇಶನ್, ಬಿಬಿಎಂಪಿ, ಎಂ.ಎಲ್.ಎ, ಎಂ.ಪಿ, ರಾಜ್ಯ ಸರಕಾರ ನಡೆಸುವ ಎಲ್ಲ ಚುನಾವಣೆಯಲ್ಲಿ ಗ್ರಾಮ ಸಹಾಯಕರು ಒಂದು ವರ್ಷ ಮುಂಚಿತವಾಗಿ ಚುನಾವಣೆ ಮುಗಿಯುವವರೆಗೆ ಕಾರ್ಯ ನಿರ್ವಹಿಸುತ್ತಾರೆ.

ಆದರೆ ರಾಜ್ಯ ಚುನಾವಣಾ ಆಯೋಗ ಎಲ್ಲ ಇಲಾಖೆಯವರಿಗೆ ಭತ್ಯೆ ನೀಡುತ್ತಾರೆ. ಆದರೆ ಕಂದಾಯ ಇಲಾಖೆಯ ಗ್ರಾಮ ಸಹಾಯಕರಿಗೆ ಮಾತ್ರ ಯಾವುದೇ ಭತ್ಯೆ ನೀಡುತ್ತಿಲ್ಲ. ನಮಗೆ ಕೆಲಸ ನಿರ್ವಹಿಸಿದ ಕೆಲಸಕ್ಕೆ ಚುನಾವಣಾ ಭತ್ಯೆ ನಿಡಬೇಕು ಎಂದು ಮನವಿ ಮಾಡಿದರು. ರಾಜ್ಯ ಕಂದಾಯ ಇಲಾಖೆಯ ಗ್ರಾಮ ಸಹಾಯಕರ ಸಂಘದ ಕಾನೂನು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮಡಿವಾಳಪ್ಪ ವಣ್ಣೂರ ಮಾತನಾಡಿ, ಚುನಾವಣಾ ಭತ್ಯೆ ಪ್ರತ್ಯೇಕವಾಗಿ ನೀಡಬೇಕು, ಚುನಾವಣೆಯಲ್ಲಿ ಅವಘಡ ಸಂಭವಿಸಿದರೆ ಪರಿಹಾರ ಕೊಡಬೇಕು, ಕೇಂದ್ರ ಸ್ಥಾನದಿಂದ, ಹೋಬಳಿ, ತಾಲೂಕು, ಜಿಲ್ಲಾ ಕಛೇರಿಗೆ ಚುನಾವಣಾ ಕೆಲಸ ನಿಮಿತ್ಯ ನಿಯೋಜನೆ ಮಾಡಿದರೆ ವಿಶೇಷ ಭತ್ಯೆ, ಅವಘಡ ಸಂಭವಿಸಿದರೆ ಪರಿಹಾರ, ಆರೋಗ್ಯ ವಿಮೆ ನೀಡುವುದರ ಜತೆಗೆ ನಿವೃತ್ತಿ ಅಂಚಿನಲ್ಲಿರುವ ಗ್ರಾಮ ಸಹಾಯಕರನ್ನು ಚುನಾವಣಾ ಕೆಲಸಕ್ಕೆ ನಿಯೋಜನೆ ಮಾಡಬಾರದು ಎಂದು ವಿನಂತಿಸಿದರು.

ಬೆಳಗಾವಿ ಜಿಲ್ಲಾ ಸಂಘಟನಾ ಕಾರ‍್ಯದರ್ಶಿ ಹಜರತಶೇಖ ಸನದಿ, ತಾಲೂಕಾ ಗೌರವಧ್ಯಕ್ಷ ಈರಣ್ಣ ಕರಿಕಟ್ಟಿ, ಕಾರ್ಯದರ್ಶಿ ಮಾರುತಿ ಬೆಟಸೂರ, ಸುರೇಶ ಅರ್ಟಗಲ್, ಮಾಬುಸುಭಾನಿ ಕುಷ್ಟಗಿ, ಪ್ರಕಾಶ ಬೆನಕೊಪ್ಪ, ಶ್ರೀಶೈಲ ಗೊರವನಕೊಳ್ಳ, ಬಸವರಾಜ ಹಾದಿಮನಿ, ಬಾಬು ಸನದಿ, ಜಿಲ್ಲಾ, ತಾಲೂಕ, ರಾಜ್ಯ ಸಂಘದ ವಿವಿಧ ಪದಾದಿಕಾರಿಗಳು ಉಪಸ್ಥಿತರಿದ್ದರು. ಕರ್ನಾಟಕ ರಾಜ್ಯ ಚುನಾವಣಾ ಆಯುಕ್ತರಾಗಿ ಪಟ್ಟಣಕ್ಕೆ ಮೊದಲ ಬಾರಿ ಆಗಮಿಸಿದ ಜಿ.ಎಸ್.ಸಂಗ್ರೇಶಿ ಅವರನ್ನು ಗ್ರಾಮ ಸಹಯಕರ ಸಂಘದಿಂದ ಸನ್ಮನಿಸಲಾಯಿತು.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button