Latest

ಭಾರತದ ಯಾವ ಭಾಗವನ್ನೂ ಚೀನಾ ಅತಿಕ್ರಮಣ ಮಾಡಿಲ್ಲ; ಮಾಡಲು ಬಿಡಲ್ಲ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಭಾರತದ ಯಾವುದೇ ಭಾಗವನ್ನೂ ಚೀನಾ ಅತಿಕ್ರಮಣ ಮಾಡಿಕೊಂಡಿಲ್ಲ, ಇದಕ್ಕೆ ಅವಕಾಶವನ್ನೂ ನೀಡುವುದಿಲ್ಲ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಸರ್ವಪಕ್ಷ ಸಭೆಯಲ್ಲಿ ಮಾತನಾಡಿರುವ ಪ್ರಧಾನಿ ಮೋದಿ, ಚೀನಾದವರು ನಮ್ಮ ದೇಶದೊಳಗೆ ಬಂದು ನಮ್ಮ ಯಾವುದೇ ಜಾಗ ಅತಿಕ್ರಮಣ ಮಾಡಿಕೊಂಡಿಲ್ಲ. ಗಡಿ ಭಾಗದಲ್ಲಿ ನಮ್ಮ 20 ಸೈನಿಕರು ಹುತಾತ್ಮರಾಗಿದ್ದರು. ಅವರು ಪ್ರಾಣತ್ಯಾಗ ಮಾಡುವುದಕ್ಕೂ ಮೊದಲು ಭಾರತದ ಮೇಲೆ ಕಣ್ಣಿಟ್ಟವರಿಗೆ ತಕ್ಕ ಪಾಠ ಕಲಿಸಿ ಹೋಗಿದ್ದಾರೆ. ನಮ್ಮ ಜಾಗವವನ್ನು ಯಾರೂ ಕಸಿಯಲು ಸಾಧ್ಯವಿಲ್ಲ ಎಂದು ಹೇಳಿದರು.

“ನಾವು ನಮ್ಮ ಸೇನೆಗೆ ಹಾಗೂ ಅಧಿಕಾರಿಗಳಿಗೆ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಿದ್ದೇವೆ. ಅಲ್ಲದೆ, ಚೀನಾಗೆ ನಮ್ಮ ನಿಲುವು ಏನೆಂಬುದನ್ನೂ ಸ್ಪಷ್ಟಪಡಿಸಿದ್ದೇವೆ. ಭಾರತ ಯಾವಾಗಲೂ ಶಾಂತಿ ಹಾಗೂ ಸ್ನೇಹದಿಂದ ಇರಲು ಬಯಸುತ್ತದೆ. ಆದರೆ, ದೇಶ ರಕ್ಷಣೆ ನಮ್ಮ ಮೊದಲ ಆದ್ಯತೆ. ಗಡಿ ಭಾಗದಲ್ಲಿ ಈಗಾಗಲೇ ಮೂಲಸೌಕರ್ಯ ಹೆಚ್ಚಿದ್ದು, ಭಾರತ ಮೊದಲಿಗಿಂತಲೂ ಬಲಗೊಂಡಿದೆ ಎಂದರು.

ಭಾರತದ ಗಡಿ ಪ್ರದೇಶ ಲಡಾಕ್​ನ ಗಾಲ್ವನ್ ​ಕಣಿವೆ ಭಾಗದಲ್ಲಿ ಭಾರತ-ಚೀನಾ ಎರಡು ದೇಶಗಳ ಸೇನೆಯ ನಡುವೆ ಸಂಘರ್ಷ ಏರ್ಪಟ್ಟಿತ್ತು. ಈ ವೇಳೆ ಭಾರತದ ಸುಮಾರು 20 ಸೈನಿಕರು ಹುತಾತ್ಮರಾಗಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button