ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ರಾಷ್ಟ್ರಪತಿ ಭಾಷಣ ದೇಶದ 130 ಕೋಟಿ ಜನರ ಸಂಕಲ್ಪ.ಇಂಥ ಸಂಕಷ್ಟದ ಸಂದರ್ಭದಲ್ಲಿ ರಾಷ್ಟ್ರಪತಿ ಭಾಷಣ ದೈರ್ಯ ತುಂಬಿದೆ ಎಂದು ಹೇಳಿದರು.
ಕೊನೆಯ ಬ್ರಿಟೀಷ್ ಕಮಾಂಡರ್ ಒಂದು ಮಾತು ಹೇಳಿದ್ದರು. ಭಾರತ ಅನೇಕ ದೇಶಗಳ ಮಾಹಾದ್ವೀಪ ಎಂದು. ಭಾರತ ಒಂದು ಪವಾಡದ ಪ್ರಜಾಪ್ರಭುತ್ವ ರಾಷ್ಟ್ರ. ವಿವಿಧತೆಯಿಂದ ತುಂಬಿರುವ ದೇಶ. ಆದರೂ ಭಾರತ ಒಂದು ಗುರಿಯತ್ತ ಮುನ್ನುಗ್ಗುತ್ತಿದೆ. ಸ್ವಾತಂತ್ರ್ಯದ 75 ವರ್ಷದಲ್ಲಿ ನಮ್ಮ ದೇಶ ವಿಶ್ವಕ್ಕೆ ಒಂದು ಆಶಾಕಿರಣವಾಗಿದೆ. ಎರಡು ವಿಶ್ವಯುದ್ಧದಿಂದ ಪ್ರಪಂಚ ತತ್ತರಿಸಿ ಹೋಗಿತ್ತು. ಮಾನವ ಸಂಕುಲ ಕಷ್ಟಕ್ಕೆ ಸಿಲುಕಿತ್ತು. ಬಳಿಕ ಜಗತ್ತು ಶಾಂತಿಯತ್ತ ಹೆಜ್ಜೆ ಇಡಲು ನಿರ್ಧರಿಸಿತು. ವಿಶ್ವಯುದ್ಧದ ಬಳಿಕ ಸೇನಾ ಶಕ್ತಿ ಹೆಚ್ಚಳಕ್ಕೆ ಮುಂದಾದವು. ಸಣ್ಣ ಪುಟ್ಟ ದೇಶಗಳೂ ಕೂಡ ಸೇನಾ ಶಕ್ತಿ ಹೆಚ್ಚಿಸಿದವು. ನಾವು ಪ್ರಬಲ ದೇಶವಾಗಿ ಹೊರಹೊಮ್ಮಬೇಕು. ಕೇವಲ ಜನಸಂಖ್ಯೆಯಿಂದ ಪ್ರಬಲ ದೇಶವಾಗಲು ಸಾಧ್ಯವಿಲ್ಲ. ನಾವು ಆತ್ಮನಿರ್ಭರ ಭಾರತಕ್ಕೆ ಬಲ ನೀಡಬೇಕು. ಆತ್ಮನಿರ್ಭರವಾಗುವುದು ರಾಜಕೀಯ ವಿಚಾರವಲ್ಲ. ಇದಕ್ಕಾಗಿ ಅಗತ್ಯ ಬದಲಾವಣೆಯಾಗಬೇಕು. ಆತ್ಮನಿರ್ಭರ ಭಾರತದ ಮೂಲಕ ಜಗತ್ತಿನ ಅಭಿವೃದ್ಧಿಯಾಗಬೇಕು ಎಂದರು.
ದೇವರ ಕೃಪೆಯಿಂದ ನಾವು ಕೊರೊನಾದಿಂದ ಬಚಾವಾಗಿದ್ದೇವೆ. ವೈದ್ಯರು, ನರ್ಸ್ ಗಳು, ದೇವರ ರೂಪವಾಗಿದ್ದಾರೆ. ಅಂಬುಲೆನ್ಸ್ ಚಾಲಕರೂ ದೇವರ ರೂಪದಲ್ಲಿ ಬಂದರು. ಸಫಾಯಿ ಕರ್ಮಚಾರಿ ಕೂಡ ದೇವರ ರೂಪದಲ್ಲಿ ಬಂದಿದ್ದರು. ದೇವರು ಬೇರೆ ಬೇರೆ ರೂಪದಲಿ ಬಂದು ಸಹಾಯ ಮಾಡಿದ್ದಾನೆ.ಕೊರೊನಾ ಸಂದರ್ಭದಲ್ಲಿ 8 ತಿಂಗಳವರೆಗೆ 75 ದಶಲಕ್ಷ ಜನರಿಗೆ ಪಡಿತರ ದೊರೆತಿದೆ ಎಂದು ಹೇಳಿದರು.
ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ತಂದೆವು. ಕೊರೊನಾ ಸಂದರ್ಭದಲ್ಲಿ 3 ಕೃಷಿ ಕಾನೂನನ್ನು ಜಾರಿಗೆ ತಂದೆವು. ರೈತರ ಹಿತದೃಷ್ಟಿಯಿಂದ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಈ ಕಾನೂನು ಮುಖ್ಯವಾಗಿದೆ. ಆದರೆ ಈ ಕಾಯ್ದೆಗಳ ಬಣ್ಣಗಳ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಅದರ ಬದಲು ಕಾನೂನಾತ್ಮಕ ಲಾಭದ ಬಗ್ಗೆ ಚರ್ಚೆ ನಡೆಯಬೇಕಿದೆ. ಹೊಸ ಕಾಯ್ದೆಯಿಂದ ಯಾರಿಗೂ ತೊಂದರೆಯಾಗಲ್ಲ. ಹಳೆ ಮಂಡಿಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ಎಪಿಎಂಸಿಯನ್ನು ಮುಚ್ಚುವುದೂ ಇಲ್ಲ. ಎಲ್ಲಿ ಲಾಭವಾಗುತ್ತದೆಯೋ ಅಲ್ಲಿಯೇ ಕೃಷಿ ಉತ್ಪನ್ನ ರೈತರು ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಹೋರಾಟ ನಡೆಸುತ್ತಿರುವ ರೈತರ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ಕಾರಾವಿಲ್ಲದೇ ವಿಪಕ್ಷಗಳು ಕಾಯ್ದೆ ವಿರೋಧಿಸುತ್ತಿದ್ದಾರೆ. ಕೃಷಿ ಕಾಯ್ದೆ ಜಾರಿಯಿಂದ ರೈತರ ಯಾವ ಹಕ್ಕನ್ನೂ ಕಸಿದುಕೊಳ್ಳಲಾಗಿಲ್ಲ. ಸೂಕ್ತ ಸಲಹೆ ನೀಡಿದರೆ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮ್ಮ ಸರ್ಕಾರ ಕಾನೂನು ಜಾರಿ ನಿರ್ಧಾರ ಮಾಡಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ