Kannada NewsKarnataka News

ಕಿತ್ತೂರು ಉತ್ಸವದಲ್ಲಿ ಮೂರು ದಿನ ಏನೇನು ಕಾರ್ಯಕ್ರಮ?

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು: ದಿ.೨೩ ರಿಂದ ಮೂರು ದಿನಗಳ ಕಾಲ ನಡೆಯುವ ಐತಿಹಾಸಿಕ ಕಿತ್ತೂರು ಉತ್ಸವದಲ್ಲಿ ಪಾಲ್ಗೊಳ್ಳಲು ಗಣ್ಯ ವ್ಯಕ್ತಿಗಳು ಹಾಗೂ ಕಲಾವಿದರು ಉತ್ಸುಕರಾಗಿದ್ದು ನಾಡಿನ ಜನತೆ ಉತ್ಸವದ ರಸದೌತಣ ಸವಿಯುವ ನಿರೀಕ್ಷೆಯಲ್ಲಿದ್ದಾರೆ.

ದಿ. ೨೩ ರಂದು ಬೆಳಿಗ್ಗೆ ಬೈಲಹೊಂಗಲದ ಚನ್ನಮ್ಮಜಿ ಸಮಾಧಿ ಸ್ಥಳದಿಂದ ವೀರರಾಣಿ ಚನ್ನಮ್ಮಾಜಿ ವಿಜಯ ಜ್ಯೋತಿಯನ್ನು ಶಾಸಕ ಮಹಾಂತೇಶ ಎಸ್ ಕೌಜಲಗಿ ಅವರು ಬೀಳ್ಕೊಡಲಿದ್ದು ನಂತರ ಜ್ಯೋತಿಯನ್ನು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ಉಸ್ತುವಾರಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ ಶೆಟ್ಟರ ಅವರು ಕಿತ್ತೂರಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾ ವರ್ತುಳದಲ್ಲಿ ಬರಮಾಡಿಕೊಳ್ಳಲಿದ್ದಾರೆ.

ನಂತರ ಸಚಿವರು ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನೆರೆವೇರಿಸುವರು. ೧೦.೩೦ಕ್ಕೆ ಜಾನಪದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇನತರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಜಾನಪದ ಕಲಾವಾಹಿನಿಯನ್ನು ಉದ್ಘಾಟನೆಗೊಳಿಸುವರು.

೧೧ ಗಂಟೆಗೆ ಕೋಟೆ ಆವರಣದಲ್ಲಿನ ವಸ್ತು ಪ್ರದರ್ಶನವನ್ನು ರೇಲ್ವೆ ಸಚಿವ ಸುರೇಶ ಚ ಅಂಗಡಿ ಅವರು ಉದ್ಘಾಟನೆಗೊಳಿಸುವರು.
ಬೆಳಿಗ್ಗೆ ೮.೩೦ಕ್ಕೆ ರಾಣಿ ಚನ್ನಮ್ಮಾಜಿ ತವರು ಊರಾದ ಕಾಕತಿಯಲ್ಲಿ ಕಾಕತಿಯ ಶಿವಪೂಜಿ ಮಠದ ರಾಚಯ್ಯ ಮಹಾಸ್ವಾಮಿಗಳು ಹಾಗೂ ಉದಯ ಸ್ವಾಮಿಗಳ ಸಾನಿಧ್ಯದಲ್ಲಿ ಚನ್ನಮ್ಮಾಜಿ ಮೂರ್ತಿ ಪೂಜೆ ನೆರವೇರಲಿದೆ. ಶಾಸಕ ಸತೀಶ ಜಾರಕಿಹೊಳಿ ಅವರು ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಜಿ ಪಂ ಸದಸ್ಯ ಸಿದ್ದಗೌಡ ಸುಣಗಾರ, ತಾ ಪಂ ಸದಸ್ಯ ಯಲ್ಲಪ್ಪ ಕೋಳೆಕರ ಹಾಗೂ ಗ್ರಾ ಪಂ ಅಧ್ಯಕ್ಷೆ ಸುಮನ್ ಶಹಾಪೂರಕರ ಆಗಮಿಸುತ್ತಾರೆ.
ಸಂಜೆ ೭ ಗಂಟೆಗೆ ಕಿತ್ತೂರು ಕೋಟೆ ಆವರಣದಲ್ಲಿನ ಉತ್ಸವ ಉದ್ಘಾಟನಾ ಸಮಾರಂಭವು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜರುಗಲಿದ್ದು, ಉದ್ಘಾಟಕರಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗಮಿಸಲಿದ್ದಾರೆ.

ಶಾಸಕ ಮಹಾಂತೇಶ ದೊಡಗೌಡರ ಅವರ ಅಧ್ಯಕ್ಷತೆಯಲ್ಲಿ ಸಾರಿಗೆ ಸಚಿವರು ಹಾಗೂ ಉಪ ಮುಖ್ಯಮಂತ್ರಿಗಳಾದ ಲಕ್ಷ್ಮಣ ಸಂ ಸವದಿ ಅವರು, ರೇಲ್ವೆ ಸಚಿವರಾದ ಸುರೇಶ ಅಂಗಡಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ರಾಜ್ಯ ಪ್ರವಾಸೋದ್ಯಮ ಸಚಿವ ಸಿ ಟಿ ರವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇನತರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ, ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಜಿ. ಪಂ ಅಧ್ಯಕ್ಷೆ ಆಶಾ ಐಹೊಳೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ, ಸಂಸದ ಅನಂತಕುಮಾರ ಹೆಗಡೆ, ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಹಾಗೂ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರು ಭಾಗವಹಿಸಲಿದ್ದಾರೆ.
ದಿ. ೨೩ ರ ಮಧ್ಯಾನ್ಹ ೩.೩೦ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು ಪ್ರಾರಂಭದಲ್ಲಿ ಇಂಚಲದ ಶಿವಾನಂದ ಭಾರತಿ ಭಜನಾ ಮಂಡಳಿಯಿಂದ ಭಜನಾ ಕಾಯಕ್ರಮ, ನಂತರ ಧಾರವಾಡದ ಜ್ಯೋತಿ ಗಲಗಲಿ ಅವರಿಂದ ಭರತ ನಾಟ್ಯ, ಸವದತ್ತಿಯ ಮೋಹನ ಪಾಟೀಲ ಅವರಿಂದ ಭಜನಾ, ಬೀಳಗಿ ಪುಟ್ಟರಾಜ ಭಜಂತ್ರಿ ಅವರಿಂದ ಶಹನಾಯಿ ವಾದನ, ಜಕನಾಯಕನಕೊಪ್ಪದ ಚನ್ನವೃಷಭೇಂದ್ರ ಭಜನಾ ಮಂಡಳಿಯಿಂದ ಭಜನೆ, ಧಾರವಾಡದ ಮಲ್ಲಿಕಾರ್ಜುನ ತರಲಗಟ್ಟಿ ಅವರಿಂದ ಸಪ್ತ ಸಿತಾರ ವಾದನ, ಕಪ್ಪಲಗುದ್ದಿಯ ಕುಮಾರ ಬಡಿಗೇರ ಅವರಿಂದ ಸುಗಮ ಸಂಗೀತ, ಗಿರಿಯಾಲದ ಸಿದ್ದು ಇಟಗಿ ಅವರಿಂದ ಚಿತ್ರ ಸಂಭಾಷಣೆ, ಬೆಳಗಾವಿಯ ಯಾದವೇಂದ್ರ ಪೂಜೇರ ಅವರಿಂದ ಶಾಸ್ತ್ರೀಯ ಸಂಗೀತ, ಬಾಗಲಕೋಟೆಯ ಮಂಜುಳಾ ಸಂಬಾಳಮಠ ಅವರಿಂದ ವಚನ ಗಾಯನ, ಬೆಳಗಾವಿಯ ರವಿ ಭಜಂತ್ರಿ ಅವರಿಂದ ಹಾಸ್ಯ ಸಂಜೆ, ಧಾರವಾಡದ ಬಸಲಿಂಗಯ್ಯಾ ಹಿರೇಮಠ ಜಾನಪದ ಸಂಗೀತ ಲೋಕ, ಬೆಂಗಳೂರಿನ ಶ್ರೀಹರಿ ಮತ್ತು ಚೇತನಾ ತಂಡದಿಂದಕಥಕ ನೃತ್ಯ ರೂಪಕ, ಮೈಸೂರಿನ ಸುಮಾ ರಾಜಕುಮಾರ ಅವರಿಂದ ಮಾತನಾಡುವ ಬೊಂಬೆ, ಬೆಳಗಾವಿಯ ಬಿಟ್ ಬ್ರೇಕರ‍್ಸ್ ಅವರಿಂದ ರಾವಣ ಸಂಹಾರ ನೃತ್ಯ, ಬೈಲಹೊಂಗಲದ ಆನಂದ ಬಡಿಗೇರ ಅವರಿಂದ ಕಾವ್ಯ-ಕುಂಚ-ಗಾಯನ, ಬೆಳಗಾವಿಯ ಅರುಣ ಶಿರಗಾಪೂರ ಅವರಿಂದ ಸಂಗೀತ ಸುಧೆ, ಝೀ ಟಿವಿ ಖ್ಯಾತಿಯ ಕಿತ್ತೂರಿನ ನಾಗರಾಜ ಜೋರಾಪೂರ ಅವರಿಂದ ರಸಮಂಜರಿ ಕಾರ್ಯಕ್ರಮ ಕೊನೆಯದಾಗಿ ಡಾವಣಗೇರಿಯ ಚಿಂದೋಡಿ ಶಂಭುಲಿಂಗಪ್ಪ ಅವರಿಂದ ಕಿವುಡ ಮಾಡಿದ ಕಿತಾಪತಿ ಎಂದ ಹಾಸ್ಯ ನಾಟಕ ಜರುಗುವುದು.

ದಿ. ೨೪ ರಂದು ಕೋಟೆ ಆವರಣದಲ್ಲಿನ ವೇದಿಕೆಯಲ್ಲಿ ಬೆಳಿಗ್ಗೆ ೧೧ ಗಂಟೆಗೆ ರೈತರ ತವಕ ತಲ್ಲಣಗಳು ಹಾಗೂ ನರೆ ಹಾವಳಿ ಕುರಿತು ರಾಜ್ಯ ಮಟ್ಟದ ಕೃಷಿ ವಿಚಾರ ಸಂಕಿರಣ ಜರುಗಲಿದೆ. ಧಾರವಾಡದ ಪತ್ರಾಗಾರ ಇಲಾಖೆಯ ಸಹಾಯಕ ನಿರ್ದೇಶಕರಾದ ಮಂಜುಳಾ ಎಲಿಗಾರ ಅವರು ಉದ್ಘಾಟನೆಗೊಳಿಸುವರು. ಡಾ. ಎನ್ ಸಿ ಸೀತಾರಾಮ್ ಅಧ್ಯಕ್ಷತೆ ವಹಿಸುವರು.

ಅತಿಥಿಗಳಾಗಿ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಎಸ್ ಎಫ್ ದೊಡಗೌಡರ, ತಾಲೂಕಾ ಕೃಷಿ ಸಮಾಜ ಅಧ್ಯಕ್ಷ ಗುರು ಮೆಟಗುಡ್ಡ, ಚಂದ್ರಗೌಡ ಪಾಟೀಲ, ಬಿ ಬಿ ಬೆಳಕೂಡ ಎಮ್ ಎಂ ತಿರಕಣ್ಣವರ ಆಗಮಿಸುತ್ತಾರೆ. ನರೆ ಹಾವಳಿ-ತವಕ ತಲ್ಲಣ ಕುರಿತು ಡಾ. ಸತೀಶ ಪಾಟೀಲ ಹಾಗೂ ಸಾಲರಹಿತವಾಗಿ ರೈತರ ಬದುಕು ಕುರಿತು ಪ್ರೇಮಾ ಅಂಗಡಿ, ಅವರು ಮಾತನಾಡುತ್ತಾರೆ.
ಅದೇ ದಿನ ೧೧ ಗಂಟೆಗೆ ಕ್ರೀಡಾ ಕಾರ್ಯಕ್ರಮಗಳು ಕಲ್ಮಠ ಕಾಲೇಜು ಮೈದಾನದಲ್ಲಿ ಜರಗಲಿದ್ದು, ಪುರುಷ ಹಾಗೂ ಮಹಿಳೆಯರ ಮುಕ್ತ ವಾಲಿಬಾಲ್ ಕ್ರೀಡೆಯನ್ನು ಜಿ ಪಂ ಅಧ್ಯಕ್ಷೆ ಆಶಾ ಐಹೊಳೆ ಉದ್ಘಾಟಿಸುವರು. ಮುಕ್ತ ಪುರುಷ ಹಾಗೂ ಮಹಿಳಾ ಕಬಡ್ಡಿಯನ್ನು ತಾ ಪಂ ಅಧ್ಯಕ್ಷೆ ನೀಲವ್ವಾ ಫಕೀರನ್ನವರ ಅವರು ಉದ್ಘಾಟಿಸುವರು.
ಮದ್ಯಾನ್ಹ ೩. ೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಆರಂಭದಲ್ಲಿ ಬಸ್ಸಾಪೂರದ ಬಸವೇಶ್ವರ ತಂಡದಿಂದ ಭಜನೆ, ಉಮೇಶ ಇಟಗಿ ಅವರಿಂದ ಸಂಗೀತ ಕಾರ್ಯಕ್ರಮ, ಬೆಳವಡಿಯ ಸ್ವಾತಿ ಕಿಡಿದಾಳ ಅವರಿಂದ ಗೀತ ರೂಪಕ, ನೇಗಿನಹಾಳದ ಈರಪ್ಪಜ್ಜ ಭಜನಾ ಮಂಡಳದಿಂದ ಭಜನಾ ಕಾರ್ಯಕ್ರಮ, ಹೊಸೆಟ್ಟಿಯ ಸಿದ್ದಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಕಲ್ಲಾಪೂರ ಗ್ರಾಮದ ಕಲ್ಮೇಶ್ವರ ಭಜನಾ ಮಂಡಳದಿಂದ ಭಜನಾ ಕಾರ್ಯಕ್ರಮ, ಬೆಳಗಾವಿಯ ನೈನಾ ಗಿರಿಗೌಡರ ಅವರಿಂದ ಭಾವಗೀತೆಗಳು, ಗೋಕಾಕದ ಮರೆವ್ವ ಮುತ್ತೆಪ್ಪಗೋಳ ಅವರಿಂದ ಡೊಳ್ಳಿನ ಪದಗಳು, ಹೊಣಗಾದ ಪರಶುರಾಮ ವಾಜಂತ್ರಿ ಅವರಿಂದ ಟರ್ಪೆಂಟ್ ವಾದನ, ಬೆಳಗಾವಿಯ ಗುರುನಾಥ ಶಾಸ್ತ್ರೀ ಅವರಿಂದ ಕಥಾ ಕೀರ್ತನ, ರಾಯಬಾಗದ ಮಿಲಿಂದ ಸಂಗಣ್ಣವರ ಅವರಿಂದ ಜಾನಪದ ಸಂಗೀತ, ಬೆಳಗಾವಿಯ ಹಿಂದೂಸ್ತಾನಿ ಥಾಟ್ಸ್ ಅವರಿಂದ ಸ್ವರಾಂಜಲಿ ಸುಗಮ ಸಂಗೀತ, ಸಿಕೆ ಮೆಕ್ಕೆದ ಅವರಿಂದ ಜಾನಪದ, ಕುಂದಾಪೂರ ಸ್ಟೆಪ್ ಒನ್ ಸ್ಟೆಪ್ ಅವರಿಂದ ಡಾನ್ಸ್ ಧಮಾಕಾ, ಬೆಂಗಳೂರಿನ ಶ್ವಿನಿ ಸುರೇಶ ತಂಡದಿಂದ ಸಮೂಹ ನೃತ್ಯ, ಕರ್ನಾಟಕದ ಎಲ್ಲ ಜಿಲ್ಲೆಗಳ ಕಲಾವಿದರಿಂದ ರಂಗ ಸೌರಭ ಎಂಬ ಜಾನಪದ ಲೋಕ, ಮಂಗಳೂರಿನ ದಿವ್ಯಾ ರಾಮಚಂದ್ರ ಅವರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಅದಿತಿ ಖಂಡೆಗಲ್ ಅವರಿಂದ ರಸಮಂಜರಿ ಕಾಯಕ್ರಮ, ಕೊನೆಯದಾಗಿ ಸಾಣಿಕೊಪ್ಪ ಗ್ರಾಮದ ಬಸವೇಶ್ವರ ನಾಟ್ಯ ಸಂಘದಿಂದ ನಿಜಗುಣ ಶಿವಯೋಗಿ ಸಣ್ಣಾಟ ಜರುವುದು.
ದಿ. ೨೫ ರ ಬೆಳಿಗ್ಗೆ ೧೧ ಗಂಟೆಗೆ ಕೋಟೆ ಆವರಣದ ವೇದಿಕೆಯಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ ಜರುಗುವುದು. ರೈತರ ತವಕ ತಲ್ಲಣಗಳು ಮತ್ತು ನೆರೆ ಹಾವಳಿ ವಿಷಯ ಕುರಿತು ನಡೆಯುವ ಈ ಗೋಷ್ಠಿಯನ್ನು ಧಾರವಾಡದ ಡಾ. ಲೀಲಾ ಕಲಕೋಟಿ ಅವರು ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಬೈಲಹೊಂಗಲದ ಡಾ. ಸಂಗಮನಾಥ ಲೋಕಾಪೂರ ಆಗಮಿಸುವರು. ಧಾರವಾಡದ ಸಾಹಿತಿ ಡಾ. ವಿದ್ಯಾ ಕುಂದರಗಿ ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ ೩ ಗಂಟೆಗೆ ಕಿತ್ತೂರಿನ ಕೆ.ಇ.ಬಿ ಗ್ರೀಡ್ ಮಿನಿ ವಿಧಾನಸೌದ ಕಟ್ಟಡದ ಪಕ್ಕದ ಅಖಾಡಾ ರಾಷ್ರ್ಟೀಯ ಹೆದ್ದಾರಿ ಪಕ್ಕದ ಆವರಣದಲ್ಲಿ ಪುರುಷ ಹಾಗೂ ಮಹಿಳಾ ಕುಸ್ತಿಗಳನ್ನು ಶಾಸಕ ಮಹಾಂತೇಶ ದೊಡಗೌಡರ ಉದ್ಘಾಟಿಸುವರು. ನಂತರ ೩ ೩೦ಕ್ಕೆ ಕೋಟೆ ಆವರಣದ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಳ್ಳುವವು. ಆರಂಭದಲ್ಲಿ ಶಿವು ಭಜಂತ್ರಿ ಅವರಿಂದ ಜಾನಪದ ಗೀತೆ, ಖಾನಾಪೂರದ ಗಂಗಪ್ಪಾ ಮಾದಿಗರ ಅವರಿಂದ ಗೀಗೀ ಪದ, ಚಿಕ್ಕನಂದಿಹಳ್ಳಿ ಗಂಗವ್ವಾ ಕೋಲಕಾರ ಅವರಿಂದ ಸೋಬಾನ ಪದ ರಾಯಬಾಗದ ಪರಶುರಾಮ ಸಂಗಣ್ಣವರ ಅವರಿಂದ ಜನಪದ ಸಂಗೀತ ನಡೆಯುವುದುದು. ರಾತ್ರಿ ಗಂಟೆಗೆ ಸಮಾರೋಪ ಸಮಾರಂಭ ಜರುಗುವುದು.

ಈ ಸಮಾರಂಭದ ಸಾನಿಧ್ಯವನ್ನು ನಿಚ್ಚಣಕಿ ಮಡಿವಾಳೇಶ್ಬರ ಮಠದ ಪಂಚಾಕ್ಷರಿ ಮಹಾಸ್ವಾಮಿಗಳು ಹಾಗೂ ಕಾದವರವಳ್ಳಿ ಶಿಮೀಮಠದ ಡಾ. ಪಾಲಾಕ್ಷ ಶಿವಯೋಗೀಶ್ವರು ವಹಿಸುವರು. ಸಚಿವರಾದ ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ, ಸಿ ಟಿ ರವಿ, ಶಶಿಕಲಾ ಜೊಲ್ಲೆ ಉಪಸ್ಥಿತಿಯಲ್ಲಿ ಹಾಗೂ ಶಾಸಕ ಮಹಾಂತೇಶ ದೊಡಗೌಡರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗುವುದು.

ಇದೇ ಸಂದರ್ಭದಲ್ಲಿ ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಪುರಸ್ಕಾರ ನೀಡಲಾಗುವುದು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆದು ಬೆಂಗಳೂರಿನ ರಮ್ಯ ವಶಿಷ್ಟ ಅವರಿಂದ ರೂಹಿ ಸೂಫಿ-ಸೂಪಿ ಸಂಗೀತ, ಹಾವೇರಿಯ ಶರಣ ಬಡ್ಡಿ ಅವರಿಂದ ಕುಚಪುಡಿ ನೃತ್ಯ, ಧಾರವಾಡದ ಶಿವು ಹಿಪ್ಪರಗಿ ಅವರಿಂದ ಕಂಶಾಳೆ ನೃತ್ಯ ರೂಪಕಗಳು, ಬೆಂಗಳೂರಿನ ಜ್ಯೋತಿರ್ಲಿಂಗ ಹೊನಕೊಟ್ಟಿ ಅವರಿಂದ ಜನಪದ, ಬೆಂಗಳೂರಿನ ಪದ್ಮಾ ತಂಡದಿಂದ ಸಮೂಹ ನೃತ್ಯ, ಮೈಸೂರಿನ ಕಾರ್ತಿಕ ಉಪಮನ್ಯು ಅವರಿಂದ ನೃತ್ಯ ರೂಪಕ, ಬೆಂಗಳೂರಿನ ಗುರುಕಿರಣ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ನೇಸರಗಿಯ ವಾಲ್ಮೀಕಿ ತಂಡದಿಂದ ಕೃಷ್ಣ ಪಾರೀಜಾತ ಹಾಗೂ ಅಂಕಲಗಿಯ ಬಲಭೀಮ ನಾಟಕ ತಂಡದಿಂದ ನಾಟಕ ಪ್ರದರ್ಶನ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button