Kannada NewsKarnataka NewsLatest

ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಗುಣಾತ್ಮಕ ಶಿಕ್ಷಣ ತಲುಪಲಿ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಾನವನ ಸರ್ವಾಂಗೀಣ ಅಭಿವೃದ್ದಿ ಹಾಗೂ ಸಮಾಜದ ಪ್ರಗತಿಯಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೇಶದ ಪ್ರಗತಿ ಶಿಕ್ಷಣ ಕ್ಷೇತ್ರದಲ್ಲಿನ ಉನ್ನತಿಯನ್ನು ಅವಲಂಭಿಸಿದೆ.

ಗ್ರಾಮೀಣ ಪ್ರದೇಶದ ಜನರು ಸೇರಿದಂತೆ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಗುಣಾತ್ಮಕ ಶಿಕ್ಷಣ ದೊರೆಯುವಂತಾಗಬೇಕು ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಿಸಲು ಸಾಧ್ಯ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.

ಇಲ್ಲಿನ ಶಿವಬಸವ ನಗರದ ಶ್ರೀ ಸಿದ್ಧರಾಮೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ೧೯ ರಂದು ೨೦೧೯-೨೦೨೦ ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ’ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್ಮ ಮಾತನಾಡಿ, ವ್ಯಕ್ತಿ ಎಷ್ಟೇ ವಿದ್ಯಾವಂತನಾದರೂ ಅವನಲ್ಲಿ ನಯ, ವಿನಯ, ಮಾನವೀಯ ಮೌಲ್ಯಗಳು ರೂಪುಗೊಳ್ಳದೇ ಹೋದರೆ ಅಂತಹ ವಿದ್ಯೆ ನಿಷ್ಪ್ರಯೋಜಕ ಎಂದು ತಿಳಿಸಿದರು.

ವಿಜಯಪುರದ ಶಿಕ್ಷಣ ತಜ್ಞ ಪಾವನ ಕೃಷ್ಣಾರಾವ್ ಕುಲಕರ್ಣಿ ಮಾತನಾಡಿ, ಪಾಲಕರು ಮಗುವಿಗೆ ಕೇವಲ ಜನ್ಮವನ್ನು ನೀಡಿದರೆ ಆ ಮಗುವಿನ ಸುಂದರ ಭವಿಷ್ಯವನ್ನು ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷರದ್ದಾಗಿದೆ. ಅದಲ್ಲದೆ ಇಂದಿನ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯ ವಾರಸುದಾರರಾಗಬೇಕು ಎಂದು ಅವರು ತಿಳಿಸಿದರು.

ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಎಂ. ಆರ್. ಉಳ್ಳೇಗಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶ್ರೀ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಬಿ. ಎಫ್. ಕಲ್ಲಣ್ಣವರ, ಎಸ್.ಎಸ್. ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಉಪಪ್ರಾಚಾರ್ಯ ಕೆ. ಬಿ. ಹಿರೇಮಠ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಶ್ರೀ ಸಿದ್ಧರಾಮೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ಪ್ರಾಚಾರ್ಯ ಪ್ರೇಮಾನಂದ ಜಾಧವ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಕ ಶೀಧರ ನ್ಯಾಮಗೌಡ, ಗೀತಾ ತಿಪ್ಪಿಮಠ, ಸುನೀತಾ ಚೌಗಲಾ, ಉಪಪ್ರಾಚಾರ್ಯ ಮನೋಹರ ಉಳ್ಳೆಗಡ್ಡಿ ಸ್ವಾಗತಿಸಿದರು. ಶಾಲಾ ವಾರ್ಷಿಕ ವರದಿ ವಾಚಿಸಿದರು.

ವೀಣಾ ನಾಸಿಪುಡಿ, ರೋಹಿಣಿ ಚಾಚಗೌಡ ನಿರೂಪಿಸಿದರು. ಮೀನಾಕ್ಷಿ ಯರಗಾವಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button