Kannada NewsKarnataka NewsLatestPolitics

*ಕೆ.ಎನ್‌. ರಾಜಣ್ಣ ವಜಾ ಖಂಡನೀಯ: ರಾಜಶೇಖರ ತಳವಾರ ಬೇಸರ*

ಪ್ರಗತಿವಾಹಿನಿ ಸುದ್ದಿ: ಸತ್ಯ ಹೇಳಿದ್ದಕ್ಕೆ ಸಚಿವ ಕೆ.ಎನ್‌. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಿದ್ದು ಅತ್ಯಂತ ಖಂಡನೀಯ ಎಂದು ವಾಲ್ಮೀಕಿ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ ತಳವಾರ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೆ.ಎನ್‌.ರಾಜಣ್ಣ ಎಸ್ಟಿ ಸಮುದಾಯದ ಒಬ್ಬ ಹಿರಿಯ ನಾಯಕರು. ರಾಹುಲ್‌ ಗಾಂಧಿ ಅವರ ʼಮತಗಳ್ಳತನʼ ಆರೋಪ ಸಂಬಂಧ ರಾಜಣ್ಣ ಇರುವ ಸತ್ಯವನ್ನು ಹೇಳಿದ್ದರು. ಆ ಕಾರಣಕ್ಕೇ ಅವರನ್ನೀಗ ಸಂಪುಟದಿಂದ ಹೊರ ದಬ್ಬಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ತಯಾರಿ ನಡೆದಾಗ ನಮ್ಮ ಸರ್ಕಾರವೇ ಇತ್ತು. ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರಿಂದ ಹಿಡಿದು ಎಲ್ಲಾ ಅಧಿಕಾರ ವರ್ಗ ನಮ್ಮವರೇ ಇದ್ದರು ಮತ್ತು ಚುನಾವಣಾ ಆಯೋಗ ಕೊಟ್ಟ ಮತದಾರರ ಪಟ್ಟಿಯನ್ನು ನಾವು ನೋಡಿಕೊಳ್ಳಬೇಕಿತ್ತು ಎಂದಿದ್ದಾರೆ. ಇದರಲ್ಲಿ ಅವರ ತಪ್ಪೇನಿದೆ? ಎಂದು ರಾಜಶೇಖರ ತಳವಾರ ಪ್ರಶ್ನಿಸಿದರು.

Home add -Advt

ರಾಜಣ್ಣ ಅವರು ಸತ್ಯ ಹೇಳಿದ್ದಕ್ಕೆ ಶಿಕ್ಷೆ ಅನುಭವಿಸುವಂತಾಗಿದೆ. ನಿಜಕ್ಕೂ ಇದು ದುರಂತ ಮತ್ತು ಖಂಡನೀಯ. ಕಾಂಗ್ರೆಸ್‌ ಹೈಕಮಾಂಡ್‌ ತಮ್ಮ ನಡೆ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಮಧುಗಿರಿ ಕ್ಷೇತ್ರದಂದ 35,500ಕ್ಕೂ ಹೆಚ್ಚು ಬಹುಮತದಿಂದ ಗೆಲುವು ಸಾಧಿಸಿ ರಾಜ್ಯದ ಸಹಕಾರ ಸಚಿವರಾಗಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ನೇರ ನಡೆನುಡಿ, ನಿಷ್ಠಾವಂತ, ಎದೆಗಾರಿಕೆ, ನಿಷ್ಠುರವಾಗಿ ಮಾತನಾಡುವ ಹಾಗೂ ಅತಿಯಾದ ಜನಬೆಂಬಲ ಹೊಂದಿರುವ ಒಬ್ಬ ಅಹಿಂದ ನಾಯಕ ಕೆ.ಎನ್.ರಾಜಣ್ಣರ ಏಳಿಗೆ ಸಹಿಸಲಾಗದ ಕೆಲವು ಕುತಂತ್ರಿಗಳು, ಈ ರೀತಿ ಮಾಡಿದ್ದಾರೆ. ಉನ್ನತ ಮಟ್ಟಕ್ಕೆ ಬೆಳೆದಿರುವುದು ಸಹಿಸಲಾರದೆ ಕಾಣದ ಕೈಗಳ ಒತ್ತಡಕ್ಕೆ ಮಣಿದ ಹೈಕಮಾಂಡ್ ಇಂದು ಸಚಿವ ಸಂಪುಟದಿಂದ ಕೈ ಬಿಟ್ಟಿರುವುದು ಇಡೀ ಅಹಿಂದ ಸಮುದಾಯಕ್ಕೆ ಮಾಡಿದ ಘನ ಘೋರ ಅಪಮಾನವಾಗಿದೆ ಎಂದು ಆಕ್ರೋಶ ಹೊರಹಾಕಿದರು.

30ವರ್ಷದ ನಂತರ ವರ್ಷಗಳ ನಂತರ ಲೋಕಸಭಾ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದರಲ್ಲದೆ ಹಲವು ಬಾರಿ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಹೋಗಿ ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂವರು ಸಚಿವರಿದ್ದರು. ಈ ಪೈಕಿ ಇಬ್ಬರನ್ನು ಈಗ ಸಂಪುಟದಿಂದ ಕೈಬಿಡಲಾಗಿದೆ. ಕೆ.ಎನ್‌. ರಾಜಣ್ಣ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ. ಹೀಗಿರುವಾಗ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವುದನ್ನು ಏಕೆ ತಡೆಯಲಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅತಿ ಹೆಚ್ಚು ಮಹತ್ವವನ್ನು ನೀಡುತ್ತಿರುವ ರಾಜಕಾರಣಿಗಳಲ್ಲಿ ಮೊದಲನೆಯವರಾಗಿ ನಿಲ್ಲುತ್ತಾರೆ. ಶೂ ಭಾಗ್ಯದ ರೂವಾರಿಗಳು ಕೂಡ ಕೆ.ಎನ್.ರಾಜಣ್ಣನವರೇ ಆಗಿರುತ್ತಾರೆ. ಹೀಗಿರುವಾಗ ಕುತಂತ್ರದಿಂದ ಸಚಿವರನ್ನು ಕೈ ಬಿಡಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜಶೇಖರ ತಳವಾರ, ಸಂಜು ನಾಯಕ ಹಾಗೂ ಇತರರು ಇದ್ದರು.

Related Articles

Back to top button