*ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ಗೆ ₹8.94 ಕೋಟಿ ಲಾಭ: 15% ಲಾಭಾಂಶ ಘೋಷಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್ ನಿಯಮಿತ, ಬೆಳಗಾವಿ ಯ 29ನೇ ವಾರ್ಷಿಕ ಸಾಮಾನ್ಯ ಸಭೆ (AGM) ಇಂದು ನಗರದ ನೆಹರು ನಗರದ ಕನ್ನಡಭವನದಲ್ಲಿ ಜರುಗಿತು.
ಬ್ಯಾಂಕ್ ಅಧ್ಯಕ್ಷೆ ಡಾ.ಪ್ರೀತಿ ಕೆ. ದೋಡ್ಡವಾಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಷೇರುದಾರರು, ನಿರ್ದೇಶಕರು, ವೃತ್ತಿಪರ ನಿರ್ದೇಶಕರು, ಸ್ಥಳೀಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬ್ಯಾಂಕ್ ಸಿಬ್ಬಂದಿ ಭಾಗವಹಿಸಿದ್ದರು.

ಸಭೆಯ ಆರಂಭದಲ್ಲಿ ಡಾ. ಪ್ರೀತಿ ದೋಡ್ಡವಾಡ, ಆಶಾ ಪಿ. ಕೋರೆ ಹಾಗೂ ನಿರ್ದೇಶಕ ಮಂಡಳಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಸಾಂಸ್ಕೃತಿಕ ಸ್ವಾಗತ ಗೀತೆ ಜರುಗಿತು. ಬ್ಯಾಂಕಿನ ಸ್ಥಾಪಕ ನಿರ್ದೇಶಕಿ ಶಾಂತಕ್ಕಾ ಕೆ. ಬಿಲ್ಲೂರು ಅವರ ಸ್ಮರಣೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಅಧ್ಯಕ್ಷೆಯ ಜೊತೆಗೆ ಉಪಾಧ್ಯಕ್ಷೆ ರೂಪಾ ಜೆ. ಮುನವಳ್ಳಿ ಹಾಗೂ ಆಶಾ ಪಿ. ಕೋರೆ, ಸುರ್ಣಲತಾ ಎನ್. ಬಾನಸೋಡೆ, ರಾಜೇಶ್ವರಿ ಎಂ. ಕವಟಗಿಮಠ, ಔಂಧತಿ ಎ. ಪಟ್ಟೇದ, ದೀಪಾ ಎಸ್. ಮುನವಳ್ಳಿ, ಪೂಜಾ ಕೆ. ಸಾಧುನವರ, ಕೀರ್ತಿ ಜೆ. ಮೇಟಗುಡ, ಸೀಮಾ ಪಿ. ಬಾಗೇವಾಡಿ, ಗಿರಿಜಾ ಎಂ. ಕೋಜಳಗಿ, ಡಾ. ಪುಷ್ಪಾ ವಿ. ಮಮಡಾಪುರ, ಜ್ಯೋತಿ ಜಿ. ಮಾತದ ಮತ್ತು ಕು. ಬೀನಾ ಜಿ. ಆಚಾರ್ ನಿರ್ದೇಶಕರು ಉಪಸ್ಥಿತರಿದ್ದರು.
ವಾರ್ಷಿಕ ಪ್ರಗತಿ ವರದಿ ಮಂಡಿಸಿದ ಅಧ್ಯಕ್ಷೆ ಡಾ. ಪ್ರೀತಿ ದೋಡ್ಡವಾಡ ಅವರು 2024–25ನೇ ಸಾಲಿನಲ್ಲಿ ಬ್ಯಾಂಕ್ ಠೇವಣಿ ₹402.78 ಕೋಟಿ, ಸಾಲ ವಿತರಣೆ ₹252.79 ಕೋಟಿ ಮತ್ತು ಶುದ್ಧ ಲಾಭ ₹8.94 ಕೋಟಿ ಗಳಿಸಿದೆ ಎಂದು ಘೋಷಿಸಿದರು. ಇದಕ್ಕೆ ಪೂರಕವಾಗಿ 15% ಲಾಭಾಂಶವನ್ನು ಷೇರುದಾರರಿಗೆ ಘೋಷಿಸಲಾಯಿತು. ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ 15% ಲಾಭಾಂಶ ನೀಡುತ್ತಾ ಬ್ಯಾಂಕ್ ವಹಿವಾಟು ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ ಎಂದು ಅವರು ತಿಳಿಸಿದರು.
ಸಭೆಯ ಅಜೆಂಡಾ ವಿಷಯಗಳನ್ನು ನಿರ್ದೇಶಕರು ವಾಚಿಸಿದರು ಹಾಗೂ ಅವನ್ನು ಏಕಮತದಿಂದ ಅಂಗೀಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶ್ರೇಯಾಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಹಾಗೂ ಅತ್ಯುತ್ತಮ ಸಾಧನೆ ಮಾಡಿದ ಶಾಖೆಗಳಿಗೆ ಸನ್ಮಾನ ಮಾಡಲಾಯಿತು.
ಸಭೆಯ ಅಂತ್ಯದಲ್ಲಿ ಉಪಾಧ್ಯಕ್ಷೆ ರೂಪಾ ಜೆ. ಮುನವಳ್ಳಿ ಧನ್ಯವಾದ ಸಲ್ಲಿಸಿದರು.