
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ದಾಳಿ ಹೆಚ್ಚುತ್ತಿದ್ದು, ಮಕ್ಕಳು, ದೊಡ್ದವರು ಕೂಡ ನಾಯಿ ದಾಳಿಯಿಂದ ಸಂಕಷ್ಟಕ್ಕೀಡಾಗುವಂತಾಗಿದೆ. ಈ ನಡುವೆ ಸಾಕು ನಾಯಿ ರಾಟ್ ವೀಲರ್ ಮಗುವೊಂದರ ಮೇಲೆ ದಾಳಿ ನಡೆಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಬನಶಂಕರಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ 6ನೇ ಹಂತದಲ್ಲಿ ರಾಟ್ ವೀಲರ್ ನಾಯಿಯೊಂದು 4 ವರ್ಷದ ಬಾಲಕನ ಮೇಲೆ ದಾಳಿ ನಡೆಸಿದೆ. ನಾಯಿ ದಾಳಿಯಿಂದ ಬಾಲಕನ ಕಾಲಿನ ಮಾಂಸ ಖಂಡವೇ ಕಿತ್ತು ಬಂದಿದೆ. ಬಾಲಕ ಸ್ಥಿತಿ ಗಂಭೀರವಾಗಿದೆ.
ಬನಶಂಕರಿಯ ಮುನಿಯಪ್ಪ ಎಂಬುವವರು ರಾಟ್ ವೀಲರ್ ನಾಯಿಯನ್ನು ಸಾಕಿದ್ದರು. ನಾಯಿ ವಾಕಿಂಗ್ ಮಾದಿಸಲು ಅದರ ಬೆಲ್ಟ್ ಬಿಚ್ಚಿದ್ದರು. ಈ ವೇಳೆ ಬಾಲಕನ ಮೇಲೆ ನಾಯಿ ದಾಳಿ ನಡೆಸಿದೆ.
ಬಾಲಕನ ಸ್ಥಿತಿ ಗಂಭೀರವಾಗಿದ್ದು, ಬಿಜಿಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಟ್ ವೀಲರ್ ನಾಯಿ ಮಾಲೀಕನ ವಿರುದ್ಧ ಬಾಲಕನ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




