
ಉಚ್ಚಗಣಿ ದೇವಾಲಯ ಮರುನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಕೋರಿ ಶಾಸಕ ಹರ್ಷವರ್ಧನ್ ಮನವಿ
ಬೆಂಗಳೂರು – ನಂಜನಗೂಡು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-57ರ ಬಳಿ ಇದ್ದ ಉಚ್ಚಗಣಿ ಮಹದೇವಮ್ಮ ದೇವಾಲಯ ಪುನರ್ ನಿರ್ಮಾಣಕ್ಕೆ 20 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕೆಂದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತು ಅವರು ಮುಖ್ಯಮಂತ್ರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ. ಉಚ್ಚಗಣಿ ದೇವಸ್ಥಾನವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ, ಮೈಸೂರು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಮತ್ತು ಪುರಾತತ್ವ ಸಂಗ್ರಹಾಲಯ ಇಲಾಖಾ ವತಿಯಿಂದ ನೆಲಸಮಗೊಳಿಸಲಾಗಿದೆ.
ಆದರೆ, ಇದರಿಂದಾಗಿ ಇಲ್ಲಿನ ಗ್ರಾಮಸ್ಥರ ನಂಬಿಕೆಗೆ ಧಕ್ಕೆಯಾಗಿರುವುದರಿಂದ ಮತ್ತು ಧಾರ್ಮಿಕ ಆಚರಣೆಗೆ ಅಡಚಣೆ ಉಂಟಾಗಿರುವುದರಿಂದ, ಈ ದೇವಸ್ಥಾನವನ್ನು ಇಲ್ಲಿನ ಗ್ರಾಮಸ್ಥರು ನೀಡಿರುವ ಜಾಗದಲ್ಲಿ ಮರುನಿರ್ಮಾಣ ಮಾಡಲು 20 ರೂ. ಲಕ್ಷಗಳ ಅನುದಾನವನ್ನು ತುರ್ತಾಗಿ ಬಿಡುಗಡೆ ಮಾಡಬೇಕು ಎಂದು ಹರ್ಷವರ್ಧನ್ ಕೋರಿದ್ದಾರೆ.
ಸಿಎಂ ಸ್ಪಂದನೆ – ಮನವಿ ಸ್ವೀಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಡತ ಮಂಡಿಸಿ ಮಂಜೂರು ಮಾಡಲು ಕ್ರಮ ಜರುಗಿಸುವುದು ಎಂದು ಶರಾ ಬರೆದಿದ್ದಾರೆ.