*ಆರ್ಎಸ್ಎಸ್ ಸಭೆ; ಹಲವು ವಿಷಯಗಳ ಚರ್ಚೆ*


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕರ ಸಭೆಯು ಕರ್ನಾಟಕದ ಬೆಳಗಾವಿಯ ಅನಗೋಳದ ಸಂತ ಮೀರಾ ಶಾಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಪ್ರಾರಂಭವಾಯಿತು.
ಈ ಸಭೆಯಲ್ಲಿ ಸಂಘದ ಸರಸಂಘಚಾಲಕರಾದ ಡಾ. ಮೋಹನ ಭಾಗವತ್ ಅವರು, ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಎಲ್ಲ ಸಹಕಾರ್ಯವಾಹರು, ಅಖಿಲ ಭಾರತೀಯ ಕಾರ್ಯವಿಭಾಗದ ಪ್ರಮುಖರು, ಸಹ ಪ್ರಮುಖರು, ಕಾರ್ಯಕಾರಿಣಿ ಸದಸ್ಯರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಹಾಗೂ ಎಲ್ಲ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು ಮತ್ತು ಸಂಘ ಪ್ರೇರಿತ ವಿವಿಧ ಸಂಘಟನೆಗಳ ಅಖಿಲ ಭಾರತೀಯ ಸಂಘಟನಾ ಕಾರ್ಯದರ್ಶಿಗಳು ಭಾಗವಹಿಸಿದ್ದಾರೆ.
ಸಭೆಯಲ್ಲಿ ಮಾರ್ಚ್ 2026ರ ನಂತರ ಸಂಘದ ವಿವಿಧ ಹಂತಗಳಲ್ಲಿ ನಡೆದ ತರಬೇತಿ ವರ್ಗಗಳ ವರದಿ ಮತ್ತು ಶಾಖಾ ಮಟ್ಟದಲ್ಲಿ ಕಾರ್ಯಯೋಜನೆಯ ಅನುಷ್ಠಾನದ ಕುರಿತು ವಿಸ್ತೃತವಾಗಿ ಚರ್ಚೆ ನಡೆಯಲಿದೆ. ಸಂಘದ ಶತಾಬ್ದಿ ವರ್ಷದ ಅಂಗವಾಗಿ ಶಾಖಾ ಕಾರ್ಯ ವಿಸ್ತರಣೆಯ ಪರಾಮರ್ಶೆ, ಶತಾಬ್ದಿ ವರ್ಷದ ನಿರ್ಧಾರಿತ ಕಾರ್ಯಕ್ರಮಗಳ ಅವಲೋಕನ ಮತ್ತು ಉಳಿದ ಕಾರ್ಯಕ್ರಮಗಳ ಯೋಜನೆ ಚರ್ಚೆ ಸಾಗಲಿದೆ.
ಮುಂಬರುವ ವರ್ಷದಲ್ಲಿ ಸರಸಂಘಚಾಲಕರರಾದ ಡಾ.ಮೋಹನ ಭಾಗವತ ಅವರ ಪ್ರವಾಸ ಯೋಜನೆ ಸೇರಿದಂತೆ ರಾಷ್ಟ್ರೀಯ ಅನೇಕ ಪ್ರಚಲಿತ ಸಂಗತಿಗಳ ಬಗ್ಗೆ ಸವಿವರ ಚರ್ಚೆ ನಡೆಯಲಿದೆ. ಸಂಘ ಶತಾಬ್ದಿ ವರ್ಷವೂ 20 ಅಕ್ಟೋಬರ್ 2026 ರವರೆಗೆ ನಡೆಯಲಿದ್ದು, ಶತಾಬ್ದಿ ವರ್ಷದ ಅನೇಕ ಬಾಕಿ ಕಾರ್ಯಕ್ರಮಗಳ ಕುರಿತಾಗಿ ವಿವರ ಪಡೆಯಲಾಗುವುದು.




