Latest

*ಕನ್ನಡದ ಮಕ್ಕಳು ಉದ್ಯಮಿಗಳಾಗಬೇಕು: ಸಿಎಂ ಬೊಮ್ಮಾಯಿ ಕರೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರುಡ್ ಸೆಟ್ ನಂತಹ ಉತ್ತಮ ತರಬೇತಿ ಕೇಂದ್ರದಿಂದ ಕರ್ನಾಟಕದ ಮಕ್ಕಳು ಲಾಭವನ್ನು ಪಡೆದು, ಉದ್ಯಮಿಗಳಾಗಿ, ಇತರರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿ ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ “ರುಡ್‍ಸೆಟ್ ರಾಷ್ಟ್ರೀಯ ಅಕಾಡೆಮಿಯ ನೂತನ ಕಟ್ಟಡ”ದ ಉದ್ಘಾಟಿಸಿ ಮಾತನಾಡಿದರು.

ನಮ್ಮ ಪ್ರಧಾನ ಮಂತ್ರಿಗಳು ಕೌಶಲ್ಯ ಭಾರತದಡಿ ಶೇ 44 ರಷ್ಟಿರುವ ಯುವಕರಿಗೆ ಕೌಶಲ್ಯ ತರಬೇತಿ ಯನ್ನು ನೀಡಿ, ಎಲ್ಲಾ ಉದ್ಯೋಗಕ್ಕೆ ಅರ್ಹತೆ ಗಳಿಸಿಕೊಳ್ಳಲು ನೆರವು ಒದಗಿಸುತ್ತಿದ್ದಾರೆ. ಸಣ್ಣ ಕೆಲಸದಿಂದ ಹಿಡಿದು ಆರ್.ಅಂಡ್ ಡಿ ವರೆಗೆ ಕೌಶಲ್ಯ ಅಗತ್ಯ. ಕರ್ನಾಟಕ ಕೌಶಲ್ಯ ಹಾಗೂ ಮಾನವ ಬಂಡವಾಳದಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕು. ಇದನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸಿ, ಕರ್ನಾಟಕ ವನ್ನು ಕಟ್ಟಲು ಬಳಕೆ ಮಾಡುತ್ತೇವೆ.. ಇದರ ಮೂಲಕ ನವ ಕರ್ನಾಟಕದಿಂದ ನವಭಾರತ ನಿರ್ಮಿಸೋಣ ಎಂದರು.

ಗ್ರಾಮೀಣ ಆರ್ಥಿಕತೆಗೆ ಒತ್ತು:
ರಾಜ್ಯ ಸರ್ಕಾರ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆಯಡಿ ರಾಜ್ಯದ ಪ್ರತಿ ಗ್ರಾಮದ 2 ಯುವಜನ ಸಂಘಗಳಿಗೆ 5 ಲಕ್ಷ ವರೆಗಿನ ಪ್ರಾಜೆಕ್ಟ್ ನೀಡಿ, 1 ಲಕ್ಷ ರೂ.ರಾಜ್ಯ ಸರ್ಕಾರದಿಂದ ಅನುದಾನ ನೀಡಿ, ತರಬೇತಿ ನೀಡಿ, ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯ ನೀಡಲಾಗುವುದು. ಈ ಯೋಜನೆಯಡಿ 5 ಲಕ್ಷ ಯುವಕರಿಗೆ ಸ್ವಯಂ ಉದ್ಯೋಗ ನೀಡಲಾಗುವುದು. ಸ್ತ್ರೀ ಸಾಮರ್ಥ್ಯ ಯೋಜನೆಯಡಿ 5 ಲಕ್ಷ ಹೆಣ್ಣು ಮಕ್ಕಳಿಗೆ ಸ್ವಯಂ ಉದ್ಯೋಗಕ್ಕೆ ನೆರವು ನೀಡಲಾಗುತ್ತದೆ. ಗ್ರಾಮೀಣ ಕುಶಲಕರ್ಮಿಗಳಿಗೆ 50 ಸಾವಿರ ರೂ. ಗಳ ಸಹಾಯಧನ ಒದಗಿಸಲಾಗುತ್ತಿದೆ. ದುಡಿಯುವ ವರ್ಗದ ಜನರಿಗೆ ಬೆಂಬಲ ಒದಗಿಸುವುದು ನಮ್ಮ ಆಶಯ ಎಂದರು.

ಉದ್ಯೋಗದಾತರಾಗುವ ಸ್ವಯಂ ಉದ್ಯೋಗಿಗಳು:
ದೇಶ ಕಟ್ಟಲು ಅಲ್ಲಿನ ಜನರಿಗೆ ಶಿಕ್ಷಣ, ಉದ್ಯೋಗವನ್ನು ನೀಡಬೇಕು. ತಳಹಂತದ ದುಡಿಯುವ ವರ್ಗ ರಾಜ್ಯದ ಆರ್ಥಿಕತೆಯನ್ನು ಬೆಳೆಸುತ್ತಾರೆ. ಗ್ರಾಮೀಣ ಭಾಗದ ಯುವಕರಿಗೆ ಬುದ್ಧಿಶಕ್ತಿಯಿದ್ದರೂ ವಿವಿಧ ರಂಗಗಳಲ್ಲಿ ಅವರಿಗೆ ತರಬೇತಿ ನೀಡಿದರೆ ,ಅದ್ಭುತ ಕೆಲಸಗಳನ್ನು ಮಾಡಲು ಶಕ್ತರಾಗಿರುತ್ತಾರೆ. ರುಡ್ ಸೆಟ್ ನ ಕಾರ್ಯಕ್ರಮದಡಿ ಯುವಕರಿಗೆ ತರಬೇತಿ ನೀಡುವ ಸಂಸ್ಥೆಗಳಲ್ಲಿ ಸುಮಾರು 45 ಲಕ್ಷ ಜನರಿಗೆ ತರಬೇತಿಯನ್ನು ನೀಡಲಾಗಿದ್ದು, ಅದರಲ್ಲಿ 30 ಲಕ್ಷ ಜನ ಈಗಾಗಲೇ ಸ್ವಯಂ ಉದ್ಯೋಗದಲ್ಲಿ ತೊಡಗಿದ್ದಾರೆ. ತರಬೇತಿ ಸಂಸ್ಥೆಯೊಂದು ಈ ರೀತಿಯ ಯಶಸ್ಸನ್ನು ಪಡೆದಿರುವುದು ಅಭಿನಂದನೀಯ. ದೇಶ ಕಟ್ಟಲು ಕೌಶಲ್ಯಭರಿತ ಉದ್ಯೋಗಿಗಳು ಬೇಕು. 10 ನೇ ತರಗತಿ, ಪಿಯುಸಿಗಳ ನಂತರ ಇಂತಹ ಕೌಶಲ್ಯ ತರಬೇತಿ ದೊರೆತರೆ, ಈಗ ಸ್ವಯಂಉದ್ಯೋಗ ಮಾಡುವವರು ನಂತರ ಉದ್ಯೋಗದಾತರಾಗುತ್ತಾರೆ ಎಂದರು.

ಗ್ರಾಮೀಣ ಆರ್ಥಿಕತೆ :
ಗ್ರಾಮೀಣ ಆರ್ಥಿಕತೆಗೆ ರಾಜ್ಯ ಸರ್ಕಾರ ಒತ್ತು ನೀಡಿದೆ. ದುಡಿಯುವ ಜನ ದೇಶವನ್ನು ಕಟ್ಟುತ್ತಾರೆ. ದುಡಿಮೆಯೇ ದೊಡ್ದಪ್ಪ ಎನ್ನುವುದು ಕಾಲವಿದು. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿರುವ ಧರ್ಮಸ್ಥಳದ ಸಂಸ್ಥೆ ಸಾವಿರಾರು ಸಂಘಗಳನ್ನು ಕಟ್ಟಿ ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡಿದೆ. ಸ್ತ್ರೀ ಶಕ್ತಿ ಸಂಘಕ್ಕೆ ಹಣಕಾಸಿನ ನೆರವು ನೀಡಿ ದೊಡ್ಡ ಕ್ರಾಂತಿಯನ್ನು ಮಾಡುತ್ತಿದ್ದಾರೆ. ವಿವೇಕಾನಂದ ಹಾಗೂ ಸ್ತ್ರೀ ಶಕ್ತಿ ಯೋಜನೆಗೆ ನಿಮ್ಮ ಆಶೀರ್ವಾದ ಹಾಗೂ ಪ್ರೋತ್ಸಾಹ ಇರಲಿ. ನಿಮ್ಮ ಸಂಸ್ಥೆಗಳ ಸಹಯೋಗದಲ್ಲಿ ಈ ಕೆಲಸವನ್ನು ಮಾಡಲು ಸಹಕಾರ ಕೋರಿದರು. ರುಡ್ ಸೆಟ್ ಒಂದು ಉತ್ತಮ ತರಬೇತಿ ಕೇಂದ್ರವಾಗಿದೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಜನ ಬಂದು ಕರ್ನಾಟಕದ ಸಂಸ್ಕೃತಿ, ಜನ ಹಾಗೂ ಕೌಶಲ್ಯದ ಪರಿಚಯವಾಗುತ್ತದೆ. ದೇಶದಲ್ಲಿ ಅವರು ರಾಜ್ಯದ ರಾಯಭಾರಿಗಳಾಗುತ್ತಾರೆ. ಈ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ್ದಕ್ಕಾಗಿ ಡಾ: ವೀರೇಂದ್ರ ಹೆಗ್ಗಡೆಯವರನ್ನು ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಸಚಿವ ಎಸ್.ಟಿ. ಸೋಮಶೇಖರ್, ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಕಾರ್ಯದರ್ಶಿ ಶೈಲೇಶ್ ಕುಮಾರ್ ಸಿಂಗ್, ಜಂಟಿ ಕಾರ್ಯದರ್ಶಿ ಕರ್ಮ ಜಿಹ್ಪಾಂ ಭೂಟಿಯಾ ಮೊದಲಾದವರು ಉಪಸ್ಥಿತರಿದ್ದರು.

*ಉತ್ತರ ಕನ್ನಡ ವಿಭಜನೆ ವಿಚಾರ; ಸಚಿವ ಶಿವರಾಮ್ ಹೆಬ್ಬಾರ್ ಸ್ಪಷ್ಟನೆ*

https://pragati.taskdun.com/uttara-kannadadividesirsiseparate-districtshivaram-hebbar/

*ಅವರು ಮನೆಗೆ ಹೋಗುವ ಕಾರ್ಯಕ್ರಮವಿದೆ ಅದಕ್ಕೆ ಹಾಗೇ ಹೇಳಿಕೆ ನೀಡುತ್ತಿದ್ದಾರೆ; ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಸಿಎಂ*

https://pragati.taskdun.com/cm-basavaraj-bommaaireactionsiddaramaiahstatment/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button