Latest

ರೈತರಿಗಾಗಿ ನೂತನವಾಗಿ ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

*ರೈತರಿಗಾಗಿ ನೂತನವಾಗಿ ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ, ಕಲಬುರಗಿ: ರೈತರಿಗಾಗಿ ಕೃಷಿ ಇಲಾಖೆಯಲ್ಲಿ ನೂತನವಾಗಿ ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯವನ್ನು ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮವಾಗಿ ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಆಳಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ಆಡಳಿತ ಭವನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ರೈತರ ಮಕ್ಕಳಿಗೆ ರೈತ ವಿದ್ಯಾ ನಿಧಿ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಪ್ರಾರಂಭಿಸಿತು. ರೈತರ ಆದಾಯವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜಾರಿಗೆ ತಂದಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ರೈತರಿಗಾಗಿ ನಿದೇಶನಾಲಯವನ್ನು ಪ್ರಾರಂಭಿಸಿಲಿದೆ ಎಂದರು.

*ಅಧಿಕಾರ ವಿಕೇಂದ್ರೀಕರಣ*
ಆಳಂದ ತಾಲ್ಲೂಕಿನ ಜನರಿಗೆ ತಾಲ್ಲೂಕು ಆಡಳಿತ ಭವನ ವಿಧಾನಸೌಧವಿದ್ದಂತೆ. ಜನರ ಸಮಸ್ಯೆಗಳನ್ನು ಬಗೆಹರಿಸುವ, ಅವರ ಬೇಕು ಬೇಡಗಳನ್ನು ಈಡೇರಿಸವ ಆಡಳಿತದ ಕೇಂದ್ರ. ಅಧಿಕಾರದ ವಿಕೇಂದ್ರೀಕರಣದಲ್ಲಿ ಸಾಕಷ್ಟು ಅಧಿಕಾರವನ್ನು ಜಿಲ್ಲಾ ಮತ್ತು ತಾಲ್ಲೂಕುಗಳಿಗೆ ಮಟ್ಟದಲ್ಲಿ ನೀಡಲಾಗಿದೆ. ಅಧಿಕಾರ ವಿಕೇಂದ್ರೀಕರಣದ ಮೂಲ ಉದ್ದೇಶ ಜನರ ಸುತ್ತಲೂ ಅಭಿವೃದ್ಧಿಯಾಗಬೇಕು. ಅಭಿವೃದ್ಧಿಗಾಗಿ ಜನ ಸುತ್ತುವಂತಾಗಬಾರದು. ರಾಜಕೀಯವಾಗಿ ಅಧಿಕಾರ ಕೊಟ್ಟರೂ, ಹಣಕಾಸಿನ ವಿಕೇಂದ್ರೀಕರಣ ಆಗಬೇಕು. ಆಗ ಮಾತ್ರ ಆಡಳಿತ ಜನರ ಕೈಯಲ್ಲಿರುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸಲಿದೆ. ನಮ್ಮ ಸರ್ಕಾರ ಕೇವಲ ತಾಲ್ಲೂಕು ಕಚೇರಿಗೆ ಸೀಮಿತವಾಗಿಲ್ಲ. ಪ್ರತಿಯೊಂದು ಮನೆಗೂ ಸರ್ಕಾರ ಸ್ಪಂದಿಸುತ್ತದೆ. 30 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳು ಜನಸೇವೆಕ ಯೋಜನೆಯ ಮೂಲಕ ಪ್ರತಿ ಮನೆಯನ್ನು ಸರ್ಕಾರ ತಲುಪಲಿದೆ. ತನ್ಮೂಲಕ ಬಡವರಿಗೆ, ದೀನದಲಿತರಿಗೆ ಸೌಲಭ್ಯಗಳನ್ನು ತಲುಪಿಸಲು ಸಾಧ್ಯವಿದೆ ಜನವರಿ 26 ರಿಂದ ಜನಸೇವಕ ಪ್ರಾರಂಭವಾಗಲಿದೆ ಎಂದರು.

*ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವ*:
ಪ್ರಜಾಪ್ರಭುತ್ವದಲ್ಲಿ ಜನರು ಕೇವಲ ಮತಗಳನ್ನು ಹಾಕುವುದಲ್ಲ, ಅವರು ಎಲ್ಲಾ ಯೋಜನೆಗಳ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪಾಲ್ಗೊಳ್ಳುವಿಕೆಯ ಪ್ರಜಾಪ್ರಭುತ್ವವಿದ್ದಾಗ ಮಾತ್ರಪ್ರಜಾಪ್ರಭುತ್ವಕ್ಕೆ ಅರ್ಥ ಬರಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

*ಬೆಳೆ ಪರಿಹಾರ*:
ಒಣಬೇಸಾಯಕ್ಕೆ 6800/-ರೂ.ಗಳು, 13500 ರೂ.ಗಳನ್ನು ನೀರಾವರಿಗೆ ಹಾಗೂ 18000 ರೂ.ಗಳನ್ನು ತೋಟಗಾರಿಕಾ ಬೆಳೆಗಳಿಗೆ ಬೆಳೆಪರಿಹಾರ ನೀಡಲಾಗುವುದು. ಕೇಂದ್ರ ಸರ್ಕಾರದ 6800 ರೂ.ಗಳಿಗೆ ರಾಜ್ಯ ಸರ್ಕಾರವೂ ಅಷ್ಟೇ ಮೊತ್ತವನ್ನು ಸೇರಿಸಿ ಒಟ್ಟು 13600 ರೂ.ಗಳನ್ನು ರಾಜ್ಯ ಸರ್ಕಾರ ನೀಡಲಿದೆ. 13500 ಕ್ಕೆ 11000 ರೂ.ಗಳನ್ನು ಸೇರಿಸಿ ಒಟ್ಟು 25 ಸಾವಿರ ನೀರಾವರಿಗೆ ಹಾಗೂ ತೋಟಗಾರಿಕಾ ಬೆಳೆಗಳಿಗೆ 27 ಸಾವಿರ ರೂ.ಗಳನ್ನು ನೀಡುವ ತೀರ್ಮಾನ ಮಾಡಲಾಗಿದೆ ಎಂದರು. ರೈತರು ಸಂಕಷ್ಟದಲ್ಲಿದ್ದಾಗ ರೈತರ ಪರವಾಗಿ ನಿಂತು ಜೀವಂತ ಸರ್ಕಾರ ಎಂದು ನಿರೂಪಿಸಿದೆ ಎಂದರು.

*ಭರವಸೆ*
ಆಳಂದ ತಾಲ್ಲೂಕಿನಲ್ಲಿ ಸಣ್ಣ ನೀರಾವರಿಯಡಿ ನಾಲ್ಕು ಕೆರೆಗಳಿಗೆ ಆರ್ಥಿಕ ಅನುಮೋದನೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆಯಿತ್ತರು. ಮುಖ್ಯರಸ್ತೆ ಅಗಲೀಕರಣವನ್ನು ನಗರೋತ್ಥಾನ ಯೋಜನೆಯಡಿ ಅಳವಡಿಸಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. 7 ಕೆರೆಗಳನ್ನು ತುಂಬುವ ಯೋಜನೆ ಸೇರಿದಂತೆ ಮತ್ತಿತರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.
ಸಮಾರಂಭದಲ್ಲಿ ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾಧವ್, ಶಾಸಕರಾದ ಶುಭಾಸ, ಆರ್.ಗುತ್ತೇದಾರ್, ರಾಜ್‍ಕುಮಾರ್ ತೇಲ್ಕೂರ್, ಶಶೀಲ್ ನಮೋಶಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button