
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಕಳೆದ ಮೂರು ದಶಕಗಳಿಂದ ಸೇವೆ ಸಲ್ಲಿಸಿದ ಬಸವಣ್ಣೆವ್ವ ತಳವಾರ ಅವರು ಸೇವಾ ನಿವೃತ್ತಿ ಹೊಂದಿದ ಹಿನ್ನಲೆಯಲ್ಲಿ ಶುಕ್ರವಾರ(ಫೆ.28) ಸನ್ಮಾನಿಸಿ, ಬೀಳ್ಕೊಡಲಾಯಿತು.
ವಾರ್ತಾ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕಳೆದ ಮೂರು ದಶಕಗಳಿಂದ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿದ್ದು ಸಂತೋಷದ ಸಂಗತಿಯಾಗಿದೆ. ಮೂರು ದಶಕಗಳ ಕಾಲ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲ ಅಧಿಕಾರಿ ಸಿಬ್ಬಂದಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೆಶಕರಾದ ಗುರುನಾಥ ಕಡಬೂರ ಅವರು, ಮೂರು ದಶಕಗಳ ಕಾಲ ಸರಕಾರಿ ಸೇವೆ ಸಲ್ಲಿಸಿರುವುದು ಅವರ ಬದುಕಿನ ಮಹತ್ವದ ಸಂಗತಿಯಾಗಿದ್ದು, ನಿವೃತ್ತಿ ಜೀವನ ಇನ್ನಷ್ಟು ಉತ್ತಮವಾಗಿರಲಿ ಎಂದು ಹಾರೈಸಿದರು.
ಅವರ ಸೇವೆಯು ತೃಪ್ತಿದಾಯಕವಾಗಿದ್ದು, ಕಚೇರಿಯ ಸಮಯಕ್ಕೆ ಸರಿಯಾಗಿ ಹಾಜರಾಗಿ ತಮ್ಮ ಕರ್ತವ್ಯದ ಜೊತೆಗೆ ಸಮಯ ಪಾಲನೆಗೆ ಒತ್ತು ನೀಡುತ್ತಿದ್ದರು ಎಂದು ಸ್ಮರಿಸಿದರು.
ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಅನಂತ ಪಪ್ಪು, ಎಂ.ಎಲ್.ಜಮಾದಾರ, ವಾರ್ತಾ ಸಹಾಯಕರಾದ ವಿಜಯಕುಮಾರ್ ಬೆಟಗೇರಿ, ಚಾಲಕರಾದ ಉಳವಯ್ಯ ಗೊಡಚಿಮಠ ಹಾಗೂ ಹಿತೈಷಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಬಿ.ಎಲ್. ತಳವಾರ ಅವರ ಸೇವಾ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಶುಭ ಹಾರೈಸಿದರು.
ಪತ್ರಕರ್ತರಾದ ಪ್ರಶಾಂತ ಮಲಗಾವಿ, ರಜನಿಕಾಂತ್ ಯಾದವಾಡೆ, ವಾರ್ತಾ ಇಲಾಖೆಯ ಸಿಬ್ಬಂದಿಗಳಾದ ಅರುಣ ನೇಸರಗಿ, ಅಮರ ಕಾಗೆ, ಚಂದು ಜಾಲಗಾರ ಸೇರಿದಂತೆ ಬಿ.ಎಲ್. ತಳವಾರ ಅವರ ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ