
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದ ವೇಳೆ ಹಿಂದಿನ ವರ್ಷ ಡಿಸೆಂಬರ್ 10ರಂದು ನಡೆದ ಲಾಠಿಚಾರ್ಜ್ ಘಟನೆ ಖಂಡಿಸಿ ಲಿಂಗಾಯತ ಪಂಚಮಸಾಲಿ ದೌರ್ಜನ್ಯ ದಿನಾಚರಣೆಯನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ ನಗರದಿಂದ ಸುವರ್ಣಸೌಧದತ್ತ ಸಾಗಿದ ರ್ಯಾಲಿಯಲ್ಲಿದ್ದ ಲಿಂಗಾಯತ ಪಂಚಮಸಾಲಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಲಿಂಗಾಯತ ಪಂಚಮಸಾಲಿ ದೌರ್ಜನ್ಯ ದಿನ ನಿಮಿತ್ಯ ಮೌನ ಚಳುವಳಿ ಬೆಳಗಾವಿ ನಗರದ ಗಾಂಧಿ ಭವನದಿಂದ ಆರಂಭವಾಯಿತು. ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ, ಸಿ.ಸಿ.ಪಾಟೀಲ್, ಅರವಿಂದ ಬೆಲ್ಲದ, ಸಿದ್ದು ಸವದಿ ಸೇರಿ ಇತರೆ ಮುಖಂಡರು ಕೂಡ ಹೋರಾಟದಲ್ಲಿ ಭಾಗಿಯಾಗಿದ್ದಾರೆ.
ಕೈಗೆ ಕಪ್ಪು ಪಟ್ಟಿ ಧರಿಸಿ ಹೋರಾಟಗಾರರು ಮೌನ ಪ್ರತಿಭಟನೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ಕೈಯಲ್ಲಿ ಪಂಚಮಸಾಲಿ ಧ್ವಜ ಹಿಡಿದು ಸಾವಿರಾರು ಜನರು ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ.
ಚನ್ನಮ್ಮ ವೃತ್ತದಲ್ಲಿ ಸ್ವಾಮೀಜಿ ಸೇರಿದಂತೆ ಪ್ರಮುಖರು ಅಲ್ಲಿಯೇ ರಸ್ತೆ ಮೇಲೆ ಕುಳಿತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಬೆಳಗಾವಿ ರಾಣಿ ಚನ್ನಮ್ಮ ವೃತ್ತದಲ್ಲಿ ಪಂಚಮಸಾಲಿಗರು ಧರಣಿ ಕುಳಿತರು..

ಗಾಂಧಿ ಭವನದಿಂದ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಅಶೋಕ ವೃತ್ತ ಮಾರ್ಗವಾಗಿ ಸುವರ್ಣ ಗಾರ್ಡನ್ ಟೆಂಟ್ ಕಡೆ ಪಂಚಮಸಾಲಿಗರ ಪ್ರತಿಭಟನಾ ರ್ಯಾಲಿ ಸಾಗಿತ್ತು. ಆದರೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

