Latest

ಶಿವರಾತ್ರಿ ಮತ್ತು ಶರಣರ ದೃಷ್ಟಿಯಲ್ಲಿ ಶಿವ

ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್
 

ಭಾರತೀಯರು ಆಚರಿಸುವ ಎಲ್ಲ ಹಬ್ಬ ಹರಿದಿನಗಳಲ್ಲಿ `ಶಿವರಾತ್ರಿಯೇ ಸರ್ವಶ್ರೇಷ್ಠ’. ಶಿವರಾತ್ರಿಯಂದು ಪತಿತಪಾವನನೂ ಜ್ಞಾನೇಶ್ವರನೂ ಆದ `ಸದಾಶಿವನು ಬಂದು’ ಭಕ್ತರ ತಾಪವನ್ನು ತೊಲಗಿಸಿ, ಪಾಪವನ್ನು ಹರಿಸಿ, ಕೇಡು, ದುಃಖ, ಭಯ, ರೋಗ, ಭೂತ, ಪಿಶಾಚಿಗಳ ಕಾಟ, ಅಪಮೃತ್ಯು, ಅಶಾಂತಿಯ ಪರದಾಟವನ್ನು ಪರಿಹರಿಸಿ, ಭಯಾನಕ ರಾಕ್ಷಸೀಯ ಗುಣಗಳಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದಿ ಮಾಯಾ ಪಂಜರದಿಂದ ಬಿಡಿಸಿ ಆಯುರಾರೋಗ್ಯ ಅಷ್ಟೈಶ್ವರ್ಯಗಳನ್ನು ಸದಾಕಾಲಕ್ಕಾಗಿ, ಶಾಶ್ವತವಾಗಿ ದೈವಿ ಜನ್ಮಸಿದ್ಧ ಅಧಿಕಾರಗಳನ್ನು ದಯಾಪಾಲಿಸುತ್ತಾನೆಂದು ಭಾರತೀಯರ ನಂಬಿಕೆ ಇದೆ.

ಶಿವರಾತ್ರಿಯ ಈ ಸಮಯದಲ್ಲಿ ಶಿವನ ಸತ್ಯ ಪರಿಚಯ ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಶಿವನು ಅಜನ್ಮ, ಅಯೋನಿಜ, ಅವ್ಯಕ್ತ ,ಅಮರ, ಅವಿನಾಶಿ, ಅಭೋಕ್ತ, ಅಶರೀರಿ, ಸರ್ವಶಕ್ತಿವಂತನಾಗಿದ್ದಾನೆ. ಶಿವನ ಮಹಿಮೆಯನ್ನು ಶಿವಪುರಾಣ, ಸ್ಕಂದಪುರಾಣ, ಶಿವಸ್ತುತಿ, ದಾಸಸಾಹಿತ್ಯ, ಶರಣರ ಸಾಹಿತ್ಯದಲ್ಲಿ ವಿಸ್ತಾರವಾಗಿ ಮಾಡಲಾಗಿದೆ. ಅದರಲ್ಲೂ ಶರಣರ ವಚನ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಶಿವಶರಣರು ಬರೆದಿರುವ ವಚನಗಳಲ್ಲಿ ಆಯ್ದ ಕೆಲವು ವಚನಗಳನ್ನು ಈ ಕೆಳಗಿನಂತೆ ನೀಡಲಾಗಿದೆ:

ಶಿವಪರಮಾತ್ಮನು ಜ್ಯೋತಿರ್ಲಿಂಗ ಸ್ವರೂಪಿ, ಅಕಾಯ, ಆಶರೀರಿ, ಅಜಾತ ಪರಮ ಪವಿತ್ರನಾಗಿದ್ದಾನೆ. ಅವನು ದೇವ-ದಾನವ-ಮಾನವರಂತೆ ಹೆಂಡತಿ ಮಕ್ಕಳನ್ನು ಪಡೆದವನಲ್ಲ, ಗೃಹಸ್ಥನಲ್ಲ ಎಂದು ಶರಣ ಬಸವಣ್ಣನವರು ಈ ಕೆಳಗಿನ ವಚನಗಳಲ್ಲಿ ಸಾರಿದ್ದಾರೆ.
ಬೆನಕನು ಹರನ(ಶಿವನ) ಮಗನೆಂಬ
ಪಾತಕರೆ ನೀವೂ ಕೇಳಿರೋ
ಪಾರ್ವತಿಯು ಹರನ(ಶಿವನ) ಸತಿಯೆಂಬ
ಶಿವದ್ರೋಹಿಗಳೆ ನೀವೂ ಕೇಳಿರೋ
ಲಿಂಗದ್ರೋಹಿಗಳೇ ನೀವೂ ಕೇಳಿರೋ
ಅಜಾತ-ಪರಮಪವಿತ್ರನೊಬ್ಬನೇ
ಕೂಡಲ ಸಂಗಮದೇವ ಕಾಣಿರೋ.

ಶರಣ ಅಂಬಿಗರ ಚೌಡಯ್ಯನವರು ಶಿವನಿಗೆ ಅಸುರ-ಮಾಲೆ, ತ್ರಿಶೂಲ, ಢಮರು, ಭಸ್ಮ, ಬ್ರಹ್ಮಕಪಾಲ, ವೃಷಭವಾಹನ, ಪತ್ನಿ, ಪುತ್ರ, ಸಂಸಾರಗಳಿಲ್ಲವೆಂಬ ಸತ್ಯವನ್ನು ತಮ್ಮ ವಚನದಲ್ಲಿ ಪ್ರತಿಪಾದಿಸಿದ್ದಾರೆ.

ಅಸುರ ಮಾಲೆಗಳಿಲ್ಲ – ತ್ರಿಶೂಲ ಢಮರುಗವಿಲ್ಲ
ಬ್ರಹ್ಮಕಪಾಲವಿಲ್ಲ – ಭಸ್ಮಭೂಷಣನಲ್ಲ
ವೃಷಭವಾಹನನಲ್ಲ – ಋಷಿಯ ಮಗಳೊಡನಿದ್ದಾತನಲ್ಲ
ಎಸಗುವ ಸಂಸಾರದ ಕುರುಹಿಲ್ಲದಾತಂಗೆ
ಹೆಸರಾವುದು ಎಂದ – ಅಂಬಿಗರ ಚೌಡಯ್ಯ.

ಶಿವಶರಣೆ ಅಕ್ಕಮಹಾದೇವಿಯು ತನ್ನ ವಚನದಲ್ಲಿ ಪರಮಾತ್ಮನ ಸತ್ಯ ಕುರುಹನ್ನು ಬಹಳ ಸುಂದರವಾಗಿ ವಿವರಿಸಿದ್ದಾಳೆ. ಜ್ಯೋತಿಸ್ವರೂಪಿ ಆತ್ಮಳಾದ ತನಗೆ ಜ್ಯೋತಿರ್ಲಿಂಗ ಸ್ವರೂಪಿ ಪರಮಾತ್ಮನಾದ ಶಿವನೇ ಪತಿ ಎಂದು ಸಾರಿದ್ದಾಳೆ. ದೇಹಧಾರಿಗಳು ತನಗೆ ಪತಿಯಲ್ಲವೆಂದೂ ಹೇಳಿದ್ದಾಳೆ. ಅಕ್ಕಮಹಾದೇವಿಯ ಪತಿ ತಾನೆಂದು ಎಂದಾದರೂ, ಯಾರಾದರೂ ಹೇಳಿದರೆ ಅಂತಹವರನ್ನು ಒಲೆಯಲ್ಲಿನ ಬೆಂಕಿಯಲ್ಲಿ ಬಿಸಾಡಿ ಎನ್ನುತ್ತಾಳೆ. ಹೀಗೆ ಶಿವನಿಷ್ಠೆ, ಈಶ್ವರನ ನಿಷ್ಠೆಯನ್ನು ಅಕ್ಕಮಹಾದೇವಿಯು ಪ್ರತಿಪಾದಿಸಿದ್ದಾಳೆ ಅವುಗಳನಿಲ್ಲಿ ಅವಲೋಕಿಸೋಣ.
ಸಾವಿಲ್ಲದ – ಕೇಡಿಲ್ಲದ – ರೂಹಿಲ್ಲದ ಚೆಲುವಂಗೆ ನಾ ಒಲಿದೆನವ್ವ
ಎಡೆಯಿಲ್ಲದ, ಕಡೆಯಿಲ್ಲದ, ತೆರೆಹಿಲ್ಲದ, ಕುರುಹಿಲ್ಲದ
ಚೆಲುವಂಗೆ ನಾ ಒಲಿದೆ ಎಲೆ ಅವ್ವಗಳಿರಾ
ಭವವಿಲ್ಲದ – ಭಯವಿಲ್ಲದ ನಿರ್ಭಯ ಚಲುವಂಗೆ ಒಲಿದೆನವ್ವ
ಕುಲಸೀಮೆ ಇಲ್ಲದ ನಿಸ್ಸೀಮ ಚಲುವಂಗೆ ಒಲಿದೆನವ್ವ
ಚನ್ನಮಲ್ಲಿಕಾರ್ಜುನನೆಂಬ ಗಂಡಂಗೆ ಮಿಗೆ ಮಿಗೆ ಒಲಿದೆನವ್ವಗಳಿರಾ
ಸಾಯುವ – ಕೆಡುವ ಗಂಡರನೊಯ್ದು ಒಲೆಯೊಳಗಿಡು ಎಲೆ ತಾಯೆ.

ಬಸವೇಶ್ವರರು ತಮ್ಮ ವಚನಗಳಲ್ಲಿ ಜನರ ಅಜ್ಞಾನವನ್ನು ಈ ರೀತಿ ವರ್ಣಿಸಿದ್ದಾರೆ:

ನೀರ ಕಂಡಲ್ಲಿ ಮುಳುಗುವರಯ್ಯ
ಮರನ ಕಂಡಲ್ಲಿ ಸುತ್ತುವರಯ್ಯ
ಬತ್ತುವ ಜಲವ, ಒಣಗುವ ಮರವ ಬಲ್ಲವರು
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ.
ಅರಗು ತಿಂದು ಕರಗುವ ದೈವವ
ಉರಿಯ ಕಂಡಡೆ ಮುರುಟುವ ದೈವವ
ಎಂತು ಸರಿ ಎಂಬೆನಯ್ಯಾ
ಅವಸರ ಬಂದರೆ ಮಾರುವ ದೈವವ
ಅಂಜಿಕೆಯಾದಡೆ ಹೂಳುವ ದೈವವ
ಎಂತು ಸರಿ ಎಂಬೆನಯ್ಯಾ
ಸಹಜ ಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ ಕಾಣಿರೋ.

ತಂದೆ-ತಾಯಿ ಸರ್ವ ಸಂಬಂದ ಶಿವ ಎಂದು ಶಿವಯೋಗಿ ಬಸವಣ್ಣನವರು ಹೇಳಿದ್ದಾರೆ.
ತಂದೆ ನೀನು – ತಾಯಿ ನೀನು
ಬಂಧು ನೀನು – ಬಳಗ ನೀನು
ನೀನಲ್ಲದೆ ಮತ್ತಾರೂ ಇಲ್ಲವಯ್ಯಾ
ಕೂಡಲಸಂಗಮದೇವಾ
ಹಾಲಲದ್ದು – ನೀರಲದ್ದು.

ಸಕಲ ಭುವನಾದಿ ಭುವನಂಗಳಿಗೆ ತಂದೆ
ಸಕಲ ದೇವಾದಿ ದೇವರ್ಕಗಳಿಗೆ ತಂದೆ
ಭವ ಭವದಲ್ಲಿ ನೀನೆನ್ನ ತಂದೆ
ಗುಹೇಶ್ವರ ಅಂಗ ನಿರಾಳದಲ್ಲಿ ನೀನೆನ್ನ ತಂದೆ.

ಪ್ರತಿದಿನ ಸೂರ್ಯನಿಲ್ಲದ ಸಮಯಕ್ಕೆ ರಾತ್ರಿ ಎನ್ನಲಾಗುತ್ತದೆ. ಆದರೆ ಶಿವರಾತ್ರಿಯ ರಾತ್ರಿಯೇ ಬೇರೆ. ಸೂರ್ಯಸ್ತವಾದ ನಂತರದ ಕತ್ತಲಿನ ರಾತ್ರಿ ಇದಾಗಿರದೇ ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದಾಗ ಸೂರ್ಯನ ಬೆಳಕಿನಲ್ಲಿಯೂ ಅಜ್ಞಾನವೆಂಬ ಕತ್ತಲು ಕವಿದಿರುವ ರಾತ್ರಿ ಇದಾಗಿರುತ್ತದೆ. ಅಜ್ಞಾನನಾಂಧಕಾರ ಅವರಿಸಿರುವ ರಾತ್ರಿ ಇದಾಗಿರುತ್ತದೆ. ಯಾವಾಗ ಎಲ್ಲ ಮಾನವರೂ ಅಧರ್ಮ, ಅನ್ಯಾಯ, ಅನೀತಿ, ಅನೈತಿಕತೆ, ಅರಾಜಕತ್ವ, ಅಶಾಂತಿ, ಅತ್ಯಾಚಾರ, ಅನಾಚಾರ, ಭ್ರಷ್ಟಾಚಾರದಲ್ಲಿ ಮುಳುಗಿ, ಧರ್ಮಭ್ರಷ್ಟ, ಕರ್ಮಭ್ರಷ್ಟರಾಗಿ ಅಜ್ಞಾನವೆಂಬ ಅಂಧಕಾರದಲ್ಲಿ ತೇಲುತ್ತಿರುವರೋ, ಕಣ್ಣಿದ್ದೂ ಕಣ್ಣು ಕಾಣದ ಕುರುಡರಂತೆ ನಡೆಯುತ್ತಿರುವರೋ, ಅಂತಹ ರಾತ್ರಿಯೇ ಕಾಳರಾತ್ರಿ. ಎಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳು ತುಂಬಿತುಳುಕುತ್ತಿವೆಯೋ, ಎಲ್ಲಿ ಅಧಿಕಾರ-ಲಾಲಸೆ, ಕಾಳಸಂತೆ, ಲಂಚ, ವಂಚನೆ, ಜಾತೀಯತೆ, ಪ್ರಾಂತೀಯತೆ, ಭಾಷಾಗೊಂದಲ, ಸುಳ್ಳುಗ್ರಂಥಗಳ ಮಾರ್ಗದರ್ಶನ, ಅಂಧವಿಶ್ವಾಸ ಮುಂತಾದವುಗಳಲ್ಲಿ ಮನುಷ್ಯಾತ್ಮರು ಸಿಕ್ಕಿಹಾಕಿಕೊಂಡು ತಲ್ಲಣಿಸುತ್ತ ದಾರಿಕಾಣದೆ ತಡಕಾಡುತ್ತಿರುವರೋ, ಅದೇ ಘೋರ ರಾತ್ರಿ. ಯಾವಾಗ “ಹೇ ಪರಮಪಿತ ಪರಮಾತ್ಮನೇ ಈ ಎಲ್ಲ ಸಂಕಷ್ಟ ಗಳಿಂದ ನಮ್ಮನ್ನು ಪಾರು ಮಾಡು ತಂದೇ” ಎಂದು ಜನಸಾಮಾನ್ಯರು, ಸಾಧು ಸಜ್ಜನರು ಭಗವಂತನಿಗೆ ಮೊರೆ ಇಡುತ್ತಿರುವರೋ, ಅದೇ ಘೋರರಾತ್ರಿಯಲ್ಲಿ ಶಿವ ಪರಮಾತ್ಮನ ಅವತರಣೆ ಆಗುತ್ತದೆ.

ಭಾರತದ ಹಾಗೂ ವಿಶ್ವದಾದ್ಯಂತ ಮೂಲೆ ಮೂಲೆಗಳಲ್ಲೂ ಶಿವನ ಮಂದಿರಗಳು ಇವೆ. ಪೂರ್ವದಲ್ಲಿ ಕಾಶಿಯ ವಿಶ್ವನಾಥ, ಉತ್ತರದಲ್ಲಿ ಅಮರನಾಥ, ದಕ್ಷಿಣದಲ್ಲಿ ರಾಮೇಶ್ವರ, ಪಶ್ಚಿಮದಲ್ಲಿ ಸೋಮನಾಥ, ಉಜ್ಜಯನಿಯಲ್ಲಿ ಮಹಾಕಾಲೇಶ್ವರ, ಹಿಮಾಲಯದಲ್ಲಿ ಕೇದಾರನಾಥ, ಹಿಸಾರದಲ್ಲಿ ವೈದ್ಯನಾಥ, ಮಧ್ಯಪ್ರದೇಶದಲ್ಲಿ ಓಂಕಾರನಾಥ, ದ್ವಾರಕಾದಲ್ಲಿ ಭುವನೇಶ್ವರ ಮುಂತಾದ ಕ್ಷೇತ್ರಗಳಲ್ಲಿ ಶಿವನ ಮಂದಿರಗಳನ್ನು ಕಾಣಬಹುದು. ಕೇವಲ ಭಾರತದಲ್ಲಿ ಮಾತ್ರವಲ್ಲದೇ ಹೊರರಾಷ್ಟçಗಳ ಸಂಸ್ಕೃತಿಗಳಲ್ಲಿಯೂ ಸಹ ಶಿವನನ್ನು ಕಾಣಬಹುದು. ಉದಾಹರಣೆಗೆ ನೇಪಾಳದಲ್ಲಿ ಪಶುಪತಿನಾಥ, ಬ್ಯಾಬಿಲೋನಿಯಾದಲ್ಲಿ ಶಿವನಿಗೆ `ಶಿವೂನ’ ಎಂದು ಹೇಳಲಾಗುತ್ತದೆ. ಈಜಿಪ್ಟ್ನಲ್ಲಿ `ಸೇವಾ’ ನಾಮದಿಂದ ಪೂಜೆಯು ನಡೆಯುತ್ತದೆ. ರೋಮ್‌ನಲ್ಲಿ `ಪ್ರಿಯಪ್ಸ್’ ಎಂದು ಹೇಳಲಾಗುತ್ತದೆ. ಇಟಲಿಯ ಚರ್ಚ್ಗಳಲ್ಲಿ ಇಂದಿಗೂ ಶಿವನ ಪ್ರತಿಮೆಗಳನ್ನು ಕಾಣಬಹುದು. ಚೀನಾದಲ್ಲಿ ಶಿವಲಿಂಗಕ್ಕೆ `ಹೂವೆಡ್ ಹಿಪೂಹ’ ಎಂದು ಕರೆಯಲಾಗುತ್ತದೆ. ಗ್ರೀಕ್‌ನಲ್ಲಿ `ಫಲ್ಲೂಸ’, ಅಮೇರಿಕಾದ ಪುರುವಿಯಾ ಎಂಬ ಸ್ಥಳದಲ್ಲಿ ಈಶ್ವರನಿಗೆ `ಶಿವೂ’ ಎಂದು ಹೇಳುತ್ತಾರೆ. ಕಾಬಾದಲ್ಲಿಯೂ ಸಹ ಶಿವಲಿಂಗಾಕಾರದ ಪ್ರತಿಮೆ ಇದೆ ಎಂದು ಸಂಶೋಧಕರು ನಂಬುತ್ತಾರೆ. ಶಿವಪರಮಾತ್ಮನು ಅವತರಿಸಿ ವಿಶ್ವ ಪರಿವರ್ತನೆಯ ಕಲ್ಯಾಣಕಾರಿ ಕರ್ತವ್ಯ ಮಾಡಿದ್ದಾನೆ ಎಂಬುದು ಇದರಿಂದ ನಮಗೆ ಸ್ಪಷ್ಟವಾಗುತ್ತದೆ.

ಶಿವರಾತ್ರಿಯಲ್ಲಿ ಉಪವಾಸವನ್ನು ಮಾಡುತ್ತಾರೆ. ಇದರ ಆಧ್ಯಾತ್ಮಿಕ ಅರ್ಥವಾಗಿದೆ: `ಉಪ’ ಎಂದರೆ `ಸಮೀಪ’ ವಾಸ ಎಂದರೆ `ಇರುವುದು’. ವಾಸ್ತವಿಕವಾಗಿ ಬುದ್ಧಿಯೋಗವನ್ನು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸುವುದೇ ಸತ್ಯ ಉಪವಾಸವಾಗಿದೆ. ಶಿವರಾತ್ರಿಯಂದು ಸಾಮಾನ್ಯವಾಗಿ ಭಕ್ತರು ದೇವರ ಚಿಂತನೆ ಮಾಡುತ್ತಾ ಸ್ಥೂಲ ಜಾಗರಣೆ ಮಾಡುತ್ತಾರೆ. ವಾಸ್ತವಿಕವಾಗಿ ಜಾಗರಣೆ ಎಂದರೆ ಜಾಗೃತಿಯಾಗಿದೆ. ಅಜ್ಞಾನದಿಂದ ಹೊರಬರುವುದೇ ಅಥವಾ ಜಾಗೃತರಾಗುವುದೇ ಸತ್ಯ ಜಾಗರಣೆಯಾಗಿದೆ. ಈ ಅಜ್ಞಾನದ ಅಂಧಕಾರದ ರಾತ್ರಿಯಲ್ಲಿ ಸದಾಕಾಲ ಜಾಗೃತವಾಗಿದ್ದುಕೊಂಡು ಮಾಯೆಯ ರೂಪವಾದ ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳ ಮೇಲೆ ವಿಜಯಗಳಿಸಬೇಕೆಂಬುದು ಇದರ ಅರ್ಥವಾಗಿದೆ.
ಮಹಾಶಿವರಾತ್ರಿಯ ಈ ಶುಭಸಮಯದಲ್ಲಿ ಸತ್ಯ ಜ್ಞಾನ ಮತ್ತು ರಾಜಯೋಗ ಕಲಿಯಲು, ಹತ್ತಿರದ ಆಧುನಿಕ ಶಿವಾಲಯಗಳಿಗೆ ಅಥವಾ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ.

*ಶಿಕ್ಷಕಿಯನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾದ ದುಷ್ಕರ್ಮಿಗಳು*

https://pragati.taskdun.com/teachermurderbangaloreshantinagara/

*ಸಂತ ಸೇವಾಲಾಲ ಮಹಾಮಠ ಪ್ರತಿಷ್ಠಾನಕ್ಕೆ 10 ಕೋಟಿ ರೂ. ಬಿಡುಗಡೆ; ಸಿಎಂ ಬೊಮ್ಮಾಯಿ*

https://pragati.taskdun.com/santa-sevalal-maha-samsthancm-basavaraj-bommai-10-crore-release/

*ಈ ಬಾರಿ ಚುನಾವಣೆಯಲ್ಲಿ ಬಂಡೆ ಒಡೆಯತ್ತೆ, ಹುಲಿಯಾ ಕಾಡಿಗೆ ಹೋಗುತ್ತೆ; ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯಗೆ ಟಾಂಗ್ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ*

https://pragati.taskdun.com/nalin-kumar-kateelkoppalad-k-shivakumarsiddaramaiah/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button