
ಪ್ರಗತಿವಾಹಿನಿ ಸುದ್ದಿ: ಸ್ನೇಹಿತನ ಮನೆಗೆ ಬಂದವರು ತೋಟದಲ್ಲಿ ಪಾರ್ಟಿ ಮಾಡಲು ಹೋಗಿ ಕೃಷಿ ಹೊಂಡದಲ್ಲಿ ಬಿದ್ದು, ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಯಡವಾಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೌತಮ್ ನಾಯ್ಕ್ (22) ಹಾಗೂ ಚಿರಂಜೀವಿ (22) ಮೃತ ಯುವಕರು. ಸ್ನೇಹಿತ ಗೌತಮ್ ಮನೆಗೆ 10 ಜನ ಯುವಕರು ಬಂದಿದ್ದರು. ಮನೆಗೆ ಭೇಟಿ ನೀಡಿದ ಯುವಕರು ಬಳಿಕ ಗೆಳೆಯನ ತೋಟಕ್ಕೆ ಹೋಗಿ ಭರ್ಜರಿ ಪಾರ್ಟಿ ಮಾಡಿದ್ದರು. ಪಾರ್ಟಿ ಬಳಿಕ ಕೃಷಿ ಹೊಂಡದತ್ತ ತೆರಳಿದ್ದಾರೆ. ಈ ವೇಳೆ ಓರ್ವ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದಿದ್ದಾನೆ. ಆತನನ್ನು ರಕ್ಷಿಸಲೆಂದು ಇನ್ನೋರ್ವ ಯುವಕ ಹೊಂಡಕ್ಕೆ ಇಳಿದಿದ್ದಾನೆ.
ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.